Darshan Case update: ಮತ್ತೆ 14 ದಿನ ನಟ ದರ್ಶನ್ಗೆ ಜೈಲೇ ಗತಿ, ಕೋರ್ಟ್ ಆದೇಶದ ಮಾಹಿತಿ
ಬೆಂಗಳೂರು, ಜುಲೈ 04: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಕೇಸ್ ವಿಚಾರಣೆ ನಡೆಸಿದ ನ್ಯಾಯಾಲಯವು 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಗುರುವಾರ ಆದೇಶ ಹೊರಡಿಸಿದೆ.
ಹೌದು, ಜೂನ್ 8 ರಂದು ನಡೆದ ಕೊಲೆ ವಿಚಾರವಾಗಿ ಜೈಲು ಸೇರಿದ್ದ ನಟ ದರ್ಶನ್ ನ್ಯಾಯಾಂಗ ಬಂಧನದ ಅವಧಿ ಇಂದು ಗುರುವಾರ ಮುಗಿದಿದೆ. ಹೀಗಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ತನಿಖಾಧಿಕಾರಿಗಳು ದರ್ಶನ್ ಅನ್ನು ಹಾಜರುಪಡಿಸಿದ್ದರು.

ಈ ವೇಳೆ ವಿಚಾರಣೆ ನಡೆಸಿರುವ ನ್ಯಾಯಾಲಯವು ಹದಿನಾಲ್ಕು ದಿನಗಳ ಕಾಲ ಅಂದರೆ ಜುಲೈ 18ರವರೆಗೆ ದರ್ಶನ್ಗೆ ನ್ಯಾಯಾಂಗ ಬಂಧನ ಮುಂದುವರಿಸಲು ಆದೇಶ ಹೊರಿಡಿಸಿತು. ಇದೇ ವೇಳೆ ಇನ್ನುಳಿದ ಆರೋಪಿಗಳನ್ನು ಸಹ ಪೊಲೀಸರು ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ಗೆ ಹಾಜರುಪಡಿಸಿದ್ದರು.
ಡಿ.ಗ್ಯಾಂಗ್ಗೆ ಜೈಲೇ ಗತಿ
ನಟ ದರ್ಶನ್ ಆತನ ಪ್ರೇಯಸಿ ಪವಿತ್ರಾ ಗೌಡ ಸೇರಿದಂತೆ ಒಟ್ಟು 18 ಮಂದಿ ಆರೋಪಿಗಳ ನ್ಯಾಯಾಂಗ ಬಂಧನವನ್ನು ನ್ಯಾಯಾಧೀಶರು ವಿಸ್ತರಣೆ ಮಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪಾತ್ರವಿರುವ ಎಲ್ಲರನ್ನು ಅನ್ನಪೂರ್ಣೇಶ್ವರಿ ಪೊಲೀಸರು ಬಂಧಿಸಿ ವಿಚಾರ ನಡೆಸಿದ್ದರು. ಅವರೆಲ್ಲರನ್ನು ಇಂದು ವಿಡಿಯೋ ಕಾನ್ಫ್ರೆನ್ಸ್ ಮೂಲಕ ಕೋರ್ಟ್ ಮುಂದೆ ನಿಲ್ಲಿಸಲಾಗಿತ್ತು.
ಬಳಿಕ ಜೂನ್ ಮೂರನೇ ವಾರ ವಿಚಾರಣೆ ನಡೆಸಿದ್ದ ನ್ಯಾಯಾಲಯ ದರ್ಶನ್ ಆಂಡ್ ಗ್ಯಾಂಗ್ ನ್ಯಾಯಾಂಗ ಬಂಧನ ನೀಡಿತ್ತು. ಇದೀಗ ಮತ್ತೆ ಡಿ ಗ್ಯಾಂಗ್ ಗೆ ನ್ಯಾಯಾಂಗ ಬಂಧ ವಿಸ್ತರಣೆ ಮಾಡಿದೆ.
ಪ್ರಕರಣದ ಹಿನ್ನೆಲೆ ಏನು?
ನಟ ದರ್ಶನ್ ಪ್ರೇಯಸಿ ನಟಿ ಪವಿತ್ರಾ ಗೌಡಗೆ ಅಶ್ಲೀಲವಾಗಿ ಸಂದೇಶ ಕಳುಹಿಸಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲಕ ರೇಣುಕಾಸ್ವಾಮಿಯನ್ನು ಅಪಹರಿಸಿ ಬೆಂಗಳೂರಿಗೆ ಕರೆ ತಂದು ಹತ್ಯೆ ಮಾಡಲಾಗಿದೆ. ದರ್ಶನ್ ಸೂಚನೆ ಮೇರೆಗೆ ಚಿತ್ರದುರ್ಗದ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಘು ದರ್ಶನ್ ಹಾಗೂ ಸಹಚರರು ಸೇರಿ ಕಾರಿನಲ್ಲಿ ಕರೆ ತಂದಿದ್ದರು.
ರಾಜರಾಜೇಶ್ವರಿಯಲ್ಲಿರುವ ದರ್ಶನ್ ಮನೆಯಿಂದ ತುಸು ದೂರವೇ ಇರುವ ಶೆಡ್ ನಲ್ಲಿಟ್ಟು ಚಿತ್ರಹಿಂಸೆ ನೀಡಲಾಗಿದೆ. ದರ್ಶನ್ ಆಂಡ್ ಗ್ಯಾಂಗ್ ರೇಣುಕಾಸ್ವಾಮಿಯನ್ನು ಮನಬಂದಂತೆ ಹಲ್ಲೇ ಮಾಡಿದೆ. ಕರೆಂಟ್ ಶಾಕ್ ಕೊಟ್ಟು, ಕಬ್ಬಿಣದ ಸರಳಿನಿಂದ ಹೊಡೆದು, ಮರ್ಮಾಂಗಕ್ಕೆ ಒದ್ದು ಹಲ್ಲೆ ಮಾಡಿದ್ದಾಗಿ ಆರೋಪಿಗಳು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ ದರ್ಶನ್ A2 ಆರೋಪಿಯಾಗಿದ್ದು, ಪವಿತ್ರಾಗೌಡ A1 ಆರೋಪಿ ಆಗಿದ್ದಾರೆ. ಇದೀಗ ಮತ್ತೆ ಡಿ ಆಂಡ್ ಗ್ಯಾಂಗ್ಗೆ ನ್ಯಾಯಾಂಗ ಬಂಧನ ವಿಸ್ತರಣೆ ಆಗಿದೆ.












Click it and Unblock the Notifications