ಶಿವರಾಂ ಹೆಬ್ಬಾರ್ ವಿರುದ್ಧ 1 ರು ಪರಿಹಾರ ಕೋರಿ ಕೇಸ್ ಹಾಕಿದ ಚೇತನ್
ಬೆಂಗಳೂರು, ಜೂನ್ 27: ಕಾರ್ಮಿಕ ಸಚಿವ ಅರೆಬೈಲ್ ಶಿವರಾಂ ಹೆಬ್ಬಾರ್ವಿರುದ್ಧ ನಟ ಚೇತನ್ ಕುಮಾರ್(ಚೇತನ್ ಅಹಿಂಸಾ) ಮಾನನಷ್ಟ ಮೊಕದ್ದಮೆ(ಸಿವಿಎಲ್) ಹೂಡಿದ್ದಾರೆ. ಪರಿಹಾರ ರೂಪದಲ್ಲಿ 1 ರುಪಾಯಿ ಕೇಳಿದ್ದು, ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಕೋರಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರು ಪ್ರತಿವಾದಿ ಹೆಬ್ಬಾರ್ ಅವರಿಗೆ ನೋಟಿಸ್ ನೀಡಿದ್ದು, ಜುಲೈ 14ಕ್ಕೆ ಪ್ರಕರಣದ ವಿಚಾರಣೆಯನ್ನು ಮುಂದೂಡಿದ್ದಾರೆ.
ಜಾತಿ ವ್ಯವಸ್ಥೆ ಮತ್ತು ಬ್ರಾಹ್ಮಣ್ಯವನ್ನು ಟೀಕಿಸುವ ಟ್ವೀಟ್ ಮಾಡಿದ್ದ ನಟ ಚೇತನ್ ಅಹಿಂಸಾರ ಟ್ವೀಟ್ ಗೆ ಪ್ರತಿಯಾಗಿ ಜೂನ್ 11ರಂದು ಸಚಿವ ಶಿವರಾಂ ಹೆಬ್ಬಾರ್ ಅವರು ಸರಣಿ ಟ್ವೀಟ್ ಮಾಡಿ, ಸಮಾಜ ವಿರೋಧಿ, ಹಣಕ್ಕಾಗಿ ಪ್ರಚಾರ ಬಯಸುವ ವ್ಯಕ್ತಿ, ಕೂಡಲೇ ಚೇತನ್ ಬಂಧನವಾಗಬೇಕು ಎಂಬರ್ಥದಲ್ಲಿ ಹೇಳಿದ್ದರು. ಈ ಟ್ವೀಟ್ ಆಧಾರವಾಗಿಟ್ಟುಕೊಂಡು ''ಮಂಜು ಅಂಡ್ ಮಂಜು ಅಸೋಸಿಯೇಟ್ಸ್'' ನ್ಯಾಯವಾಗಿ ಸಂಸ್ಥೆ ಮೂಲಕ ಚೇತನ್ ಮೊಕದ್ದಮೆ ಹೂಡಿದ್ದಾರೆ.
ತಮ್ಮ ಟ್ವೀಟ್ ನಲ್ಲಿ ಅಂಬೇಡ್ಕರ್ ಮತ್ತು ಪೆರಿಯಾರ್ ಅವರನ್ನು ಕೂಡ ಉಲ್ಲೇಖಿಸಿದ್ದೆ ಎಂದು ತಿಳಿಸಿದ್ದಾರೆ. ಅಧಿಕೃತ ಖಾತೆಯಿಂದ ಸಚಿವರೊಬ್ಬರು ವೈಯಕ್ತಿಕ ನಿಂದನೆ ಮಾಡಿರುವುದು ಸರಿಯಿಲ್ಲ, ಜನಪ್ರತಿನಿಧಿಗಳು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಳ್ಳಬಾರದು, ನಾನು ಉಲ್ಲೇಖಿಸಿದ ಬಹುಜನ ಸಿದ್ಧಾಂತವನ್ನು ಅಲ್ಲಗಳೆದು ಅಪಮಾನ ಮಾಡಿದಂತಾಗುತ್ತದೆ. ನನ್ನನ್ನು ಬಂಧಿಸುವಂತೆ ಸಾರ್ವಜನಿಕವಾಗಿ ಟ್ವೀಟ್ ಮಾಡುವ ಮೂಲಕ ಸಚಿವರು ತಮ್ಮ ಸ್ಥಾನವನ್ನು ಮರೆತಂತೆ ಕಾಣುತ್ತದೆ ಎಂದು ಚೇತನ್ ತಮ್ಮ ಮೊಕದ್ದಮೆಯ ಮನವಿಯಲ್ಲಿ ತಿಳಿಸಿದ್ದಾರೆ.

ಚೇತನ್ ವಿರುದ್ಧ ಕಾನೂನು ಹೋರಾಟ
''ನಟ ಚೇತನ್ ಅವರು ಫೇಸ್ಬುಕ್, ಯೂಟ್ಯೂಬ್, ಇನ್ಸ್ಟಾಗ್ರಾಂನಲ್ಲಿ ನೀಡಿರುವ ಹೇಳಿಕೆಗಳು ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸುವ, ಧಾರ್ಮಿಕ ನಂಬಿಕೆಗೆ ಧಕ್ಕೆ ತರುವಂತಿದೆ,'' ಎಂದು ಆರೋಪಿಸಿವಿಪ್ರ ಯುವ ವೇದಿಕೆ ಅಧ್ಯಕ್ಷ ಪವನ್ ಕುಮಾರ್ ಶರ್ಮಾ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಐಪಿಸಿ ಸೆಕ್ಷನ್ 153 ಬಿ ಮತ್ತು 295 ಎ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗೆ ಪೊಲೀಸರು ಚೇತನ್ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸ್ ಠಾಣೆಗೆ ಹಾಜರಾಗಿದ್ದ ಚೇತನ್ ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು. ಚೇತನ್ ವಿರುದ್ಧ ಆರೋಪ ಮಾಡಿದ್ದ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್ ಸಚ್ಚಿದಾನಂದ ಮೂರ್ತಿ ವಿರುದ್ಧ ಕೂಡಾ ದೂರು ದಾಖಲಾಗಿದೆ.












Click it and Unblock the Notifications