ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಮೇಲೆ ಎಸಿಬಿ ದಾಳಿ
ಬೆಂಗಳೂರು, ಜೂನ್ 18 : ಬೆಂಗಳೂರಿನ ಬಸವನಗುಡಿಯ ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಮೇಲೆ ಎಸಿಬಿ ದಾಳಿ ನಡೆದಿದೆ. ಆರ್ಬಿಐ ನಿಯಮಗಳನ್ನು ಬ್ಯಾಂಕ್ ಪಾಲನೆ ಮಾಡಿಲ್ಲ ಎಂದು ಹಿಂದೆ ಭಾರಿ ಸುದ್ದಿಯಾಗಿತ್ತು, ಠೇವಣಿ ಹಣ ವಾಪಸ್ ನೀಡುವಂತೆ ಜನರು ಪ್ರತಿಭಟನೆ ನಡೆಸಿದ್ದರು.
Recommended Video
ಗುರುವಾರ ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬ್ಯಾಂಕ್ ಕೇಂದ್ರ ಕಚೇರಿ, ಚಿಕ್ಕಲಸಂದ್ರದಲ್ಲಿರುವ ಕಚೇರಿ, ಬ್ಯಾಂಕ್ನ ನಿವೃತ್ತಿ ಸಿಇಓ ಡಾ. ಕೆ. ರಾಮಕೃಷ್ಣ, ಬ್ಯಾಂಕ್ ಅಧ್ಯಕ್ಷರ ಮನೆಯ ಮೇಲೂ ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
20ಕ್ಕೂ ಅಧಿಕ ಅಧಿಕಾರಿಗಳು ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಇಂದು ಸಹ ಠೇವಣಿದಾರರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೇ ಪ್ರತಿಭಟನೆ ನಡೆಸಲು ಮುಂದಾದಾಗ ಪೊಲೀಸರು ಅವರನ್ನು ಚದುರಿಸಿದರು.

ಬೆಂಗಳೂರು ನಗರದಲ್ಲಿಯೇ ಶ್ರೀ ಗುರುರಾಘವೇಂದ್ರ ಸಹಕಾರಿ ಬ್ಯಾಂಕ್ 12 ಶಾಖೆಗಳನ್ನು ಹೊಂದಿದೆ. ಆಕರ್ಷಕ ಬಡ್ಡಿ ದರ ನೀಡುವ ಘೋಷಣೆಯನ್ನು ಬ್ಯಾಂಕ್ ಮಾಡಿತ್ತು. ಆದ್ದರಿಂದ ಗ್ರಾಹಕರು ಸುಮಾರು 2,400 ಕೋಟಿ ಠೇವಣಿ ಇಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ.
ಬ್ಯಾಂಕ್ ಸುಮಾರು 1,700 ಕೋಟಿ ಸಾಲ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ಆರ್ಬಿಐ ನಿಯಮಗಳನ್ನು ಪಾಲನೆ ಮಾಡಿಲ್ಲ ಎಂಬ ಆರೋಪವೂ ಇದ್ದು. ಬ್ಯಾಂಕ್ ಅವ್ಯವಹಾರದ ಕುರಿತು ಕರ್ನಾಟಕ ಹೈಕೋರ್ಟ್ನಲ್ಲಿಯೂ ಪ್ರಕರಣ ದಾಖಲಾಗಿದೆ.
ವಯೋವೃದ್ಧರು, ನಿವೃತ್ತರು ಈ ಬ್ಯಾಂಕ್ನಲ್ಲಿ ಲಕ್ಷಾಂತರ ರೂಪಾಯಿ ಠೇವಣಿ ಇಟ್ಟಿದ್ದಾರೆ. ಆರ್ಬಿಐ ಬ್ಯಾಂಕ್ಗೆ ನೋಟಿಸ್ ನೀಡಿದ ದಿನದಿಂದ ಠೇವಣಿ ಹಣ ಸಿಗುತ್ತದೆಯೇ? ಇಲ್ಲವೇ? ಎಂದು ಜನರು ಆತಂಕಗೊಂಡಿದ್ದಾರೆ. ಬ್ಯಾಂಕ್ನಲ್ಲಿ ಅವ್ಯವಹಾರ ನಡೆದಿದೆ ಎಂದು ಠೇವಣಿದಾರರು ಪೊಲೀಸರಿಗೆ ಸಹ ದೂರು ನೀಡಿದ್ದಾರೆ.












Click it and Unblock the Notifications