ಅಗತ್ಯ ವಸ್ತುಗಳ ಬೆಲೆ ಏರಿಕೆ: ಆಮ್ ಆದ್ಮಿ ಪಕ್ಷದ ಖಂಡನೆ
ಬೆಂಗಳೂರು, ಮೇ 21: ಲಾಕ್ಡೌನ್ ಸಡಿಲಗೊಳ್ಳುತ್ತಿದೆ ಎಂದು ನಿರಾಳವಾಗಿದ್ದ ಜನರ ಬವಣೆ ಬಿಜೆಪಿ ಸರ್ಕಾರದ ದುರಾಡಳಿತದಿಂದ ಸದ್ಯಕ್ಕೆ ಮುಗಿಯುವುದಿಲ್ಲ ಎನಿಸುತ್ತಿದೆ. ವ್ಯಾಪಾರ ವಹಿವಾಟಿನ ಮೇಲೆ ನಿಯಂತ್ರಣ ಕಳೆದುಕೊಂಡಿರುವ ಸರ್ಕಾರ ಹಾಗೂ ಭ್ರಷ್ಟ ಅಧಿಕಾರಿಗಳಿಂದ ಜನ ಸಾಮಾನ್ಯ ಪ್ರತಿಯೊಂದಕ್ಕೂ ಕಷ್ಟ ಅನುಭವಿಸುವಂತಾಗಿದೆ ಎಂದು ಎಎಪಿ ಪಕ್ಷ ಸರ್ಕಾರ ಮೇಲೆ ಅಸಮಾಧಾನ ಹೊರ ಹಾಕಿದೆ.
ಚಿಲ್ಲರೆ ವ್ಯಾಪಾರಿಗಳು ಹಾಗೂ ಅಗತ್ಯ ವಸ್ತುಗಳ ಸಗಟು ವ್ಯಾಪಾರಿಗಳು, ಎಪಿಎಂಸಿ ವರ್ತಕರು ಆಹಾರ ಧಾನ್ಯಗಳ, ಅಗತ್ಯ ವಸ್ತುಗಳ ಕೃತಕ ಅಭಾವ ಸೃಷ್ಟಿಸಿ ಸಂಕಷ್ಟದಲ್ಲಿ ಇರುವ ಜನ ಸಾಮಾನ್ಯನ ಮೇಲೆ ಬೆಲೆ ಏರಿಕೆಯ ಭಾರ ಹೊರಿಸುತ್ತಿದ್ದಾರೆ. ಇದನ್ನು ನೋಡಿದರೂ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಬೇಜವಾಬ್ದಾರಿ ತನವೇ ಸಾಕ್ಷಿಯಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕರ ಜಗದೀಶ್ ವಿ ಸದಂ ತಿಳಿಸಿದ್ದಾರೆ.
ಹಣ ಸುಲಿಗೆ ಮಾಡುವ ಖಾಸಗಿ ಸಂಸ್ಥೆಗಳ ವಿರುದ್ದ ಕ್ರಮ ಕೈಗೊಳ್ಳಿ: ಎಎಪಿ
ವರ್ತಕರ ಅಕ್ರಮಗಳ ವಿಚಾರ
ಕೋವಿಡ್ 19 ಸಮಯದಲ್ಲಿ ಆಮ್ ಆದ್ಮಿ ಪಕ್ಷವು ಅಗತ್ಯ ವಸ್ತುಗಳ ಕೃತಕ ಅಭಾವ, ಬೆಲೆ ಏರಿಕೆ ಹಾಗೂ ವರ್ತಕರ ಅಕ್ರಮಗಳ ವಿಚಾರವಾಗಿ ಅನೇಕ ಬಾರಿ ಸರ್ಕಾರವನ್ನು ಎಚ್ಚರಿಸಿತ್ತು. ಆದರೆ ಸರ್ಕಾರದ ಕಿವಿ ಕಿವುಡಾದಂತಿದೆ ಅಥವಾ ಕಿವಿ ಕೇಳಿಸದಂತೆ ವರ್ತಿಸುತ್ತಿದೆಯೊ ಎನ್ನುವುದು ಸ್ಪಷ್ವವಾಗಬೇಕಿದೆ ಎಂದು ಎಎಪಿ ಬೇಸರ ಹೊರ ಹಾಕಿದೆ.
10 % ರಿಂದ 40% ರ ತನಕ ಹೆಚ್ಚಳ
ಲಾಕ್ ಡೌನ್ಗೂ ಮೊದಲು ಚಿಲ್ಲರೆ ಮಾರುಕಟ್ಟೆಯಲ್ಲಿ 74 ಇದ್ದ ಕೆ.ಜಿ. ತೊಗರಿ ಬೇಳೆ ದರ 100 ದಾಟಿದೆ. ಸಗಟು ವ್ಯಾಪಾರಿಗಳೂ ಸರಬರಾಜು ನಿಂತುಹೋದ ಕಾರಣ ಬೆಲೆ ಹೆಚ್ಚಳವಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಸಂಗ್ರಹ ಇದ್ದರೂ ಕೂಡ ಕೃತಕ ಅಭಾವ ಸೃಷ್ಟಿ ಮಾಡಿ ಅಕ್ರಮ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಹೀಗಿದ್ದರೂ ಸಹ ಅಧಿಕಾರಿಗಳು ಮೌನವಾಗಿ ಕುಳಿತಿರುವುದು ಖಂಡನೀಯ. ಇದಲ್ಲದೆ ಎಲ್ಲಾ ಆಹಾರ ಪದಾರ್ಥಗಳ ಬೆಲೆ 10 % ರಿಂದ 40% ರ ತನಕ ಹೆಚ್ಚಳವಾಗಿದೆ. ಪರಿಸ್ಥಿತಿ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂದರೆ ಎಂಆರ್ಪಿ ನಮೂದಿಸಿದ ಪದಾರ್ಥಗಳನ್ನು ಸಹ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಆದರೂ ಹೇಳುವವರು ಕೇಳುವವರು ಇಲ್ಲದಂತಾಗಿದೆ ಎಂದಿದೆ ಎಎಪಿ.
ಹೆಚ್ಚಿನ ಬೆಲೆಗೆ ಮಾರಾಟ
ಈ ರೀತಿಯಾಗಿ ಆಹಾರ ಪದಾರ್ಥಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿಕೊಂಡು ಕೃತಕ ಅಭಾವ ಸೃಷ್ಟಿಸಿ ಆ ಮೂಲಕ ಸಾರ್ವಜನಿಕರಲ್ಲಿ ಅಗತ್ಯ ವಸ್ತುಗಳು ದೊರೆಯುವ ಬಗ್ಗೆ ಆತಂಕ ಹೆಚ್ಚಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಮಾರಾಟಗಾರರು ಮತ್ತು ಕಾಳಸಂತೆಕೋರರ ವಿರುದ್ಧ ಸರ್ಕಾರ ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು ಎಂದು ಆಮ್ ಆದ್ಮಿ ಆಗ್ರಹಿಸಿದೆ.
ವರ್ತಕರ ದಾಸ್ತಾನು, ಲೆಕ್ಕ ತಪಾಸಣೆ ಮಾಡಿ
ವರ್ತಕರ ಜತೆ ಕೈ ಜೋಡಿಸಿ ಇಂತಹ ಅಕ್ರಮಕ್ಕೆ ಕಾರಣರಾಗುತ್ತಿರುವ ಅಧಿಕಾರಿಗಳ ವಿರುದ್ದ ಶಿಸ್ತುಕ್ರಮ ಕೈಗೊಳ್ಳಬೇಕು. ಎಪಿಎಂಸಿ ವರ್ತಕರ ಲೆಕ್ಕಪತ್ರಗಳನ್ನು ಹಾಗೂ ಅವರು ಮಾಡಿಟ್ಟುಕೊಂಡಿರುವ ದಾಸ್ತಾನು ತಪಾಸಣೆ ಮಾಡಬೇಕು. ಕರ್ನಾಟಕ ಅಗತ್ಯ ವಸ್ತುಗಳ ಆದೇಶ-1981 ಮತ್ತು ಕಾಳಸಂತೆ ತಡೆ ಮತ್ತು ಅಗತ್ಯ ವಸ್ತುಗಳ ಸರಬರಾಜು ನಿರ್ವಹಣೆ ಕಾಯ್ದೆ-1980ನ್ನು ಬಳಸಿಕೊಂಡು ತಪ್ಪಿತಸ್ಥರಿಗೆ 7 ವರ್ಷಗಳ ಕಾರಾಗೃಹ ಹಾಗೂ ದಂಡ ವಿಧಿಸಬೇಕು. ಅಗತ್ಯ ವಸ್ತುಗಳ ಕಾಯ್ದೆ-1995ರ ಅನ್ವಯ ಅಗತ್ಯ ವಸ್ತುಗಳು ಸರಿಯಾಗಿ ಲಭ್ಯವಾಗಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಕ್ಷ ಸರ್ಕಾರವನ್ನು ಒತ್ತಾಯಿಸಿದೆ.