ತಹಶೀಲ್ದಾರ್ ಕೆಲಸಕ್ಕೆ ಪ್ರಧಾನಿ ಕರೆಸಿದ ಸಿಎಂ ಬಸವರಾಜ ಬೊಮ್ಮಾಯಿ: ಎಎಪಿ ಲೇವಡಿ
ಬೆಂಗಳೂರು, ಜನವರಿ 20: ಚುನಾವಣಾ ಪ್ರಚಾರದ ದೃಷ್ಟಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಹಸೀಲ್ದಾರ್ ವಿತರಿಸಬೇಕಿದ್ದ ಕಂದಾಯ ಹಕ್ಕು ಪತ್ರಗಳನ್ನು ಪ್ರಧಾನಮಂತ್ರಿಗಳಿಂದ ಕೊಡಿಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಭಾಸ್ಕರ್ ರಾವ್ ಲೇವಡಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಪ್ರಚಾರದ ದೃಷ್ಟಿಯಿಂದ ರಾಜ್ಯದ ಮುಖ್ಯಮಂತ್ರಿಗಳು ಪ್ರಧಾನಿ ಹುದ್ದೆಯನ್ನು ತಹಸೀಲ್ದಾರ್ ಮಟ್ಟಕ್ಕೆ ಇಳಿಸಿದ್ದಾರೆ. ತಾಂಡ ಹಾಗೂ ಹಟ್ಟಿಗಳಲ್ಲಿ ವಾಸವಿರುವ ಬುಡಕಟ್ಟು ಕುಟುಂಬಗಳಿಗೆ ಹಕ್ಕುಪತ್ರ ನೀಡುವ ಕೆಲಸ ಬಹಳ ಹಿಂದೆಯೇ ಆಗಬೇಕಿತ್ತು. ಇದು ತಹಸೀಲ್ದಾರ್ ಮಟ್ಟದ ಕೆಲಸವಾಗಿದೆ ಎಂದರು.
ತಹಸೀಲ್ದಾರ್ ಮಟ್ಟದ ಕೆಲಸಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸುವ ತನಕ ಕಾಯುವ ಅವಶ್ಯಕತೆ ಇರಲಿಲ್ಲ. ಜನಪರ ಆಡಳಿತ ನೀಡಲು ವಿಫಲವಾಗಿರುವ ಬಿಜೆಪಿ ಸರ್ಕಾರವು ಪ್ರಚಾರಕ್ಕಾಗಿ ಹಕ್ಕುಪತ್ರ ವಿತರಣೆಯನ್ನು ಈ ಮೊದಲೇ ಮಾಡದೇ ಚುನಾವಣೆ ಸಮೀಪಿಸುವವರೆಗೆ ಕಾಯಿತು. ದೊಡ್ಡ ಪ್ರಮಾಣದಲ್ಲಿ ಹಕ್ಕು ಪತ್ರ ವಿತರಣೆಯನ್ನು ಇಷ್ಟು ದಿನ ಬಾಕಿ ಉಳಿಸಿಕೊಂಡು ಪ್ರಧಾನಿಯವರಿಂದ ಕೊಡಿಸಿರುವುದು ಕೇವಲ ಪ್ರಚಾರದ ಗಿಮಿಕ್ ಎಂದು ವ್ಯಂಗ್ಯವಾಡಿದರು.
ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರು ಇತ್ತೀಚೆಗಷ್ಟೇ ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದರು. ತಾವು ಕರ್ನಾಟಕದ ಭೇಟಿ ವೇಳೆ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡು ಕೊಳ್ಳಲು ಸರ್ವಪಕ್ಷ ಸಭೆ ಕರೆಯುವಂತೆ ಒತ್ತಾಯಿಸಿದ್ದರು. ಜೊತೆಗೆ ಬೆಂಗಳೂರಿನ ರಸ್ತೆಗುಂಡಿ, ಸಾವು ನೋವು, ಮಹದಾಯಿ ಹಾಗೂ ಕಳಸಾ ಬಂಡೂರಿ ಯೋಜನೆ, ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ, ಮುಖ್ಯವಾಗಿ ಉತ್ತರ ಕರ್ನಾಟಕದ ಅಭಿವೃದ್ಧಿ ಸೇರಿದಂತೆ ಅನೇಕ ವಿಷಯಗಳನ್ನು ಪ್ರಸ್ತಾಪಿಸಿತ್ತು. ಆದರೆ ಪ್ರಧಾನಿಯವರು ರಾಜ್ಯ ಆಗಮಿಸಿದ್ದರು ಸಹ ನಡೆಸಲಿಲ್ಲ. ಹಕ್ಕುಪತ್ರ ವಿತರಣೆ ಇದೆಲ್ಲವು ಬಿಜೆಪಿಯ ಚುನಾವಣಾ ಗಿಮಿಕ್ ಎಂದು ಪುನರುಚ್ಚರಿಸಿದರು.
ಎಎಪಿ ಮುಖಂಡ ಬಿ.ಟಿ. ನಾಗಣ್ಣ ಅವರು, ಬಿಜೆಪಿ ಸರ್ಕಾರದ ಅನೇಕ ವೈಫಲ್ಯಗಳಿಂದ ಜನ ಬೇಸತ್ತಿದ್ದಾರೆ. ಈ ಕಾರಣದಿಂದ ಬಿಜೆಪಿ ಬೆಂಬಲಿಗರನ್ನು ಗೇಲಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಖ್ಯಮಂತ್ರಿಗಳು ಪ್ರಧಾನಿಯನ್ನು ಓಲೈಸಿಕೊಂಡು ಕುರ್ಚಿ ಭದ್ರ ಮಾಡಿಕೊಳ್ಳುವುದರಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಕಿಡಿ ಕಾರಿದರು.