ಆಧಾರ್ ಕಾರ್ಡ್ ನಿರಾಧಾರ : ಅನಂತ್ ಕುಮಾರ್
ಬೆಂಗಳೂರು, ಮಾ.12 : ದೇಶದಲ್ಲಿ ಹಲವು ಗೊಂದಲಗಳನ್ನು ಸೃಷ್ಟಿಸಿರುವ ಆಧಾರ್ ವಿಶಿಷ್ಟ ಗುರುತಿನ ಸಂಖ್ಯೆ ನೀಡುವ ಯೋಜನೆಯಲ್ಲೂ ಅಕ್ರಮ ನಡೆದಿದೆ. ಇದೊಂದು ನಿಷ್ಪ್ರಯೋಜಕ ಯೋಜನೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಮಂಗಳವಾರ ಭಾರತೀಯ ವಿದ್ಯಾಭವನದಲ್ಲಿ ಯೂತ್ ಫಾರ್ ಡೆಮಾಕ್ರಸಿ ಸಂಸ್ಥೆ ಆಯೋಜಿಸಿದ್ದ ಕಾಲೇಜು ವಿದ್ಯಾರ್ಥಿಗಳ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಬಿಜೆಪಿ ರಾಷ್ಟ್ರೀಯ ವಕ್ತಾರೆ ಮೀನಾಕ್ಷಿ ಲೇಖಿ ಮತ್ತು ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಸಹ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವಿಶಿಷ್ಟ ಗುರುತಿನ ಪ್ರಾಧಿಕಾರವನ್ನು ಕಾನೂನು ಬಾಹಿರವಾಗಿ ರಚಿಸಿಕೊಂಡು ದೇಶದಲ್ಲಿ 65 ಕೋಟಿ ಜನರಿಗೆ ಆಧಾರ್ ಗುರುತಿನ ಚೀಟಿ ನೀಡಲಾಗಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದರೆ, 'ಆಧಾರ್' ಯೋಜನೆಯನ್ನು ಪುನರ್ ಪರಿಶೀಲಿಸಲಾಗುವುದು ಎಂದು ಮೀನಾಕ್ಷಿ ಲೇಖಿ ಸಂವಾದ ಕಾರ್ಯಕ್ರಮದಲ್ಲಿ ತಿಳಿಸಿದರು. ಚಿತ್ರಗಳಲ್ಲಿ ಸಂವಾದ ಕಾರ್ಯಕ್ರಮ (ಚಿತ್ರಕೃಪೆ : ಅನಂತ್ ಕುಮಾರ್ ಫೇಸ್ ಬುಕ್)

ವಲಸಿಗರಿಗೆ ಆಧಾರ್ ಕಾರ್ಡ್
ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅನಂತ್ ಕುಮಾರ್, ಒಂದು ದೇಶದ ವ್ಯಕ್ತಿ ಮತ್ತೊಂದು ದೇಶದ ಗಡಿಯನ್ನು ಅಕ್ರಮವಾಗಿ ಪ್ರವೇಶಿಸಿದರೆ ಅಂತಹವರನ್ನು ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಆದರೆ, ನಮ್ಮ ದೇಶದಲ್ಲಿ ವಿದೇಶದಿಂದ ಬಂದವರಿಗೂ ಆಧಾರ್ ಸಂಖ್ಯೆ ನೀಡಲಾಗುತ್ತಿದೆ. ಬಾಂಗ್ಲಾದೇಶದಿಂದ ಬರುವ ಅಕ್ರಮ ವಲಸಿಗರ ಸಂಖ್ಯೆ ಇದರಿಂದ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಅವರು ಚುನಾವಣೆಗೆ ಸ್ಪರ್ಧಿಸಿ, ಸಚಿವರಾದರೂ ಆಶ್ಚರ್ಯವಿಲ್ಲ ಎಂದು ವ್ಯಂಗ್ಯವಾಡಿದರು.

ಆಧಾರವಲ್ಲ ನಿರಾಧಾರ
ವಿಶಿಷ್ಟ ಗುರುತಿನ ಸಂಖ್ಯೆ ನೀಡುವುದನ್ನು `ಆಧಾರ್` ಎನ್ನುವುದಕ್ಕಿಂತ ನಿರಾಧಾರ ಎನ್ನುವುದು ಉತ್ತಮ ಎಂದು ಹೇಳಿದ ಅನಂತ್ ಕುಮಾರ್, ಆಧಾರ್ ಅನ್ನು ಸುಪ್ರೀಂಕೋರ್ಟ್ ಸಹ ತಿರಸ್ಕರಿಸಿದೆ. ಕೇಂದ್ರ ಸರ್ಕಾರ ಆಧಾರ್ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿದ್ದು ಕೂಡ ವ್ಯರ್ಥ ಕಸರತ್ತು ಎಂದು ಹೇಳಿದರು.

ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು
ಇಂಗ್ಲೆಂಡ್, ಅಮೆರಿಕ, ಆಸ್ಟ್ರೇಲಿಯಾ ಮುಂತಾದ ದೇಶಗಳು ಆಧಾರ್ ನಂತಹ ಯೋಜನೆಯನ್ನು ತಿರಸ್ಕರಿಸಿವೆ. ಆದರೆ, ಯಾವ ಹಿತಾಸಕ್ತಿ ಕಾಪಾಡಲು ಕೇಂದ್ರ ಸರ್ಕಾರ ಈ ಯೋಜನೆ ತಂದಿದೆ ಎನ್ನುವುದಕ್ಕೆ ಸ್ಪಷ್ಟನೆ ನೀಡಬೇಕಿದೆ. ಇದರಿಂದ ವಲಸಿಗರಿಗೆ ಕಾರ್ಡ್ ನೀಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಅನಂತ್ ಕುಮಾರ್ ತಿಳಿಸಿದರು

ಸಂಸತ್ತಿನಲ್ಲೇ ವಿರೋಧವಿತ್ತು
ಆಧಾರ್ ಕಾರ್ಡ್ ಯೋಜನೆ ಜಾರಿಗೆ ತರುವುದಕ್ಕೆ ಸಂಸತ್ನಲ್ಲೇ ವಿರೋಧ ವ್ಯಕ್ತವಾಗಿತ್ತು. ರಾಜ್ಯಸಭೆಯಲ್ಲಿ ಚರ್ಚೆ ನಡೆದ ವೇಳೆ 33 ಸದಸ್ಯರ ಪೈಕಿ 31 ಮಂದಿ ವಿರೋಧಿಸಿದ್ದರು. ಆಧಾರ್ ಮೂಲಕ ದೇಶವಾಸಿಗಳ ಮಾಹಿತಿಯನ್ನು ಗೃಹ ಸಚಿವಾಲಯಕ್ಕೆ ಒಪ್ಪಿಸದೆ ಅಮೆರಿಕದ ಕೈಗೆ ನೀಡಿರುವುದು ರಾಷ್ಟ್ರದ ಭದ್ರತೆಗೆ ಧಕ್ಕೆ ತಂದಿದೆ ಎಂದು ಮೀನಾಕ್ಷಿ ಲೇಖಿ ಆತಂಕ ವ್ಯಕ್ತಪಡಿಸಿದರು.

ಪ್ರಾಣಾಳಿಕೆಯಲ್ಲಿ ಯುವಜನರ ಅಭಿವೃದ್ಧಿಗೆ ಒತ್ತು
ಸಂವಾದಲ್ಲಿ ಮಾತನಾಡಿದ ಮೀನಾಕ್ಷಿ ಲೇಖಿ, ಬೆಲೆ ಏರಿಕೆಗೆ ತಡೆ, ಕಪ್ಪು ಹಣ ವಾಪಸ್, ರಾಷ್ಟ್ರ ರಕ್ಷಣೆಗೆ ಒತ್ತುವ ನೀಡುವ ಜತೆಗೆ ಯುವ ಜನರ ಅಭಿವೃದ್ಧಿಗೂ ಪಕ್ಷದ ಪ್ರಣಾಳಿಕೆಯಲ್ಲಿ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದರು. ಎಲ್ಲಾ ಮಕ್ಕಳಿಗೂ 10ನೇ ತರಗತಿವರೆಗೆ ಉಚಿತ ಶಿಕ್ಷಣ, ಹೊಸ ಕೋರ್ಸ್ ಆಧರಿತ ಉನ್ನತ ಶಿಕ್ಷಣಕ್ಕೆ ಅವಕಾಶ ಮುಂತಾದ ಅಂಶಗಳನ್ನು ಪ್ರಣಾಳಿಕೆಯಲ್ಲಿ ಅಳವಡಿಸಲಾಗುತ್ತದೆ ಎಂದು ಭರವಸೆ ನೀಡಿದರು.

ವಿದ್ಯಾರ್ಥಿಗಳು ನೀಡಿದ ಸಲಹೆಗಳು
ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರಣಾಳಿಕೆಗಳಿಗೆ ತಮ್ಮ ಸಲಹೆ ನೀಡಿದರು. ಅವುಗಳಲ್ಲಿ ಆಹಾರ ಭದ್ರತಾ ಕಾಯ್ದೆ ಪರಿಷ್ಕರಿಸಿ, ಉದ್ಯೋಗ ಶಿಕ್ಷಣ ಜಾರಿಗೆ ತನ್ನಿ, ಬಿಜೆಪಿಯಿಂದ ಭ್ರಷ್ಟರನ್ನು ಕೈಬಿಡಿ, ಸಂಶೋಧನೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಕೃಷಿ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡಿ ಎಂಬ ಅಂಶಗಳು ಸೇರಿದ್ದವು.












Click it and Unblock the Notifications