ಹಸಿರು ಬೆಂಗಳೂರಿಗಾಗಿ ಅದಮ್ಯ ಚೇತನದಿಂದ ಸಸ್ಯಾಗ್ರಹ
ಬೆಂಗಳೂರು, ಜುಲೈ 17: ಪರಿಸರ ರಕ್ಷಣೆ ಮತ್ತು ಹಸಿರು ಬೆಂಗಳೂರಿನ ಪಣತೊಟ್ಟು, ಹತ್ತು ಹಲವು ಪರಿಸರಸ್ನೇಹಿ ಕಾರ್ಯಗಳನ್ನು ಮಾಡುತ್ತರುವ ಅದಮ್ಯ ಚೇತನ ಸಂಸ್ಥೆಯಿಂದ ಜುಲೈ 16ರಂದು 81ನೇ 'ಸಸ್ಯಾಗ್ರಹ' ಕಾರ್ಯಕ್ರಮ ನಡೆಯಿತು.
ಬೆಂಗಳೂರಿನ ಬಸವನಗುಡಿಯ ಕೆಲ ರಸ್ತೆಗಳಲ್ಲಿ 'ಸಸ್ಯಾಗ್ರಹ ಪರಿಸರ ಸ್ನೇಹಿ 'ಹಸಿರು ಭಾನುವಾರ' - ಹಸಿರು ಬೆಂಗಳೂರು 1:1' ಎಂಬ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಬಸವನಗುಡಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದೊಂದಿಗೆ 94 ಸಸಿಗಳನ್ನು ನೆಡಲಾಯಿತು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸವೋಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ ಎನ್ ವೆಂಕಟಾಚಲಯ್ಯ, 'ಸಸಿ ನೆಡುವ ಕಾರ್ಯಕ್ರಮಕ್ಕೆ ಬಂದದ್ದು ನನಗೆ ತುಂಬಾ ಸಂತೋಷ ತಂದಿದೆ. ಈ ಹಿಂದೆ ಅನಂತ ಕುಮಾರ್ ಅವರು ನನಗೆ ಬೆಂಗಳೂರಿನ ಪರಿಸರದ ಬಗ್ಗೆ ಮಾಹಿತಿ ನೀಡಿದ್ದರು ಒಬ್ಬ ಮನುಷ್ಯನಿಗೆ 7 ಮರಗಳು ಇರಬೇಕು ಆದರೆ ಬೆಂಗಳೂರು ಮಹಾನಗರದಲ್ಲಿ 7 ಜನಕ್ಕೆ 1 ಮರ ಇದೆ. ಈ ಹಿನ್ನಲೆಯಲ್ಲಿ ನಾವು 1 ಕೋಟಿ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದಿದ್ದರು' ಎಂದು ಸ್ಮರಿಸಿದರು. ಪ್ರಕೃತಿ ಮತ್ತು ಪರಿಸರವನ್ನು ಸಂರಕ್ಷಿಸಿ ಪೋಷಿಸಲು ಎಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು.

ಇದಕ್ಕೂ ಮೊದಲು ಮಾತನಾಡಿದ ಅದಮ್ಯ ಚೇತನಾ ಟ್ರಸ್ಟ್ ಅಧ್ಯಕ್ಷೆ ಡಾ.ತೇಜಸ್ವಿನಿ ಅನಂತಕುಮಾರ್, 'ಕಳೆದ 80 ವಾರಗಳಲ್ಲಿ ಬೇರೆ ಬೇರೆ ಭಾಗಗಳಲ್ಲಿ ಸಸಿ ನೆಡಲಾಗಿದೆ. ಈ 81ನೇ ಹಸಿರು ಭಾನುವಾರ ನಮ್ಮ ಮನೆಯ ಭಾಗದಲ್ಲಿ ಸಸಿ ನೆಡಲು ಅವಕಾಶ ಸಿಕ್ಕಿದ್ದು ನನಗಂತೂ ಬಹಳ ತೃಪ್ತಿ ನೀಡಿದೆ. ಈ ಅವಕಾಶವನ್ನು ಮಾಡಿಕೊಟ್ಟ ಬಸವನಗುಡಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಕ್ಕೆ ಧನ್ಯವಾದಗಳು ಎಂದರು.
ಕಾರ್ಯಕ್ರಮದಲ್ಲಿ ಬಿಬಿಎಂಪಿ ಸದಸ್ಯರಾದ ವಾಣಿ ವಿ ರಾವ್, ಕೆಂಪೇಗೌಡ, ಬಸವನಗುಡಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ರಾಜು ಹಾಗೂ ಇತರ ಗಣ್ಯರು ಪಾಲ್ಗೊಂಡಿದ್ದರು.












Click it and Unblock the Notifications