ಬಡ್ಡಿ ಕಟ್ಟದ ಆರೋಪ: ಶಿಕ್ಷಕಿಯ ಮೇಲೆ ಹಲ್ಲೆ, ದೂರು
Recommended Video

ಬೆಂಗಳೂರು, ಡಿಸೆಂಬರ್ 19: ರಾಜಕೀಯ ಪಕ್ಷದ ಕಾರ್ಯಕರ್ತನೊಬ್ಬ ಶಾಲೆಗೆ ನುಗ್ಗಿ ಮುಖ್ಯ ಶಿಕ್ಷಕಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ನಗರದ ಯಲಹಂಕದ ಸಿಂಗನಾಯಕನಹಳ್ಳಿಯಲ್ಲಿ ಸೋಮವಾರ ನಡೆದಿದ್ದು ಇಂದು (ಮಂಗಳವಾರ) ಬೆಳಕಿಗೆ ಬಂದಿದೆ.
ಕೊಟ್ಟ ಸಾಲದ ಬಡ್ಡಿ ಹಣ ನೀಡಿಲ್ಲವೆಂಬ ಕಾರಣಕ್ಕೆ ತಿಮ್ಮನಾಯಕನಹಳ್ಳಿ ನಿವಾಸಿಯಾಗಿರುವ ರಾಮಕೃಷ್ಣಪ್ಪ ಎನ್ನುವರು ಯಲಹಂಕದ ಖಾಸಗಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ ಶಿಕ್ಷಕಿ ಆಶಾ ಎನ್ನುವರ ಮೇಲೆ ಹಲ್ಲೆ ಮಾಡಿದ್ದಾರೆ.

ಶಿಕ್ಷಕಿ ಆಶಾ ಅವರು ರಾಮಕೃಷ್ಣಪ್ಪ ಬಳಿ ಸಾಲ ಪಡೆದಿದ್ದರು. ಸಾಲದ ಬಡ್ಡಿ ಹಣ ಕೊಟ್ಟಿರಲಿಲ್ಲ ಎನ್ನುವುದು ರಾಮಕೃಷ್ಣನ ಆರೋಪ. ಇದರಿಂದ ಕೂಪಿತಗೊಂಡ ರಾಮಕೃಷ್ಣಪ್ಪ ಶಾಲೆಗೆ ನುಗ್ಗಿ ಆಶಾ ಅವರಿಗೆ ಕಪಾಳಮೋಕ್ಷ ಮಾಡಿದ್ದಾನೆ. ಈ ಎಲ್ಲ ದೃಶ್ಯಾವಳಿಗಳು ಶಾಲೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಸಂಬಂಧ ಹಲ್ಲೆಗೊಳಗಾದ ಆಶಾ ಅವರು ರಾಮಕೃಷ್ಣಪ್ಪ ವಿರುದ್ಧ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಾಧ್ಯಮಗಳಲ್ಲಿ ಬಿಜೆಪಿ ಮುಖಂಡ ರಾಮಕೃಷ್ಣಪ್ಪನ ದರ್ಪ ಎಂದು ಬಿತ್ತರವಾಗುತ್ತಿರುವುದನ್ನು ಕಂಡು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರಾಮಕೃಷ್ಣಪ್ಪ ಅವರ ಮಗ, ಯಲಹಂಕ ಬಿಜೆಪಿ ಯುವ ಮೋರ್ಚದ ಅಧ್ಯಕ್ಷರಾಗಿರುವ ಜನಾರ್ಧನ್, "ನನ್ನ ತಂದೆ ರಾಮಕೃಷ್ಣಪ್ಪ ಅವರು ಬಿಜೆಪಿ ಮುಖಂಡ ಅಲ್ಲ, ನಾನು ಬಿಜೆಪಿಯಲ್ಲಿದ್ದೇನೆ, ಅವರು ಜೆಡಿಎಸ್ ನಲ್ಲಿ ಇದ್ದಾರೆ" ಎಂದು ಸ್ಪಷ್ಟನೆ ನೀಡಿದ್ದಾರೆ.
ರಾಮಕೃಷ್ಣಪ್ಪ ವಿರುದ್ಧ ದೂರು ದಾಖಲಿಸಿಕೊಂಡಿರುವ ರಾಜಾನುಕುಂಟೆ ಪೊಲೀಸರು ನಾಪತ್ತೆಯಾಗಿರುವ ರಾಮಕೃಷ್ಣಪ್ಪನನ್ನು ಹಿಡಿಯಲು ಬಲೆ ಬೀಸಿದ್ದಾರೆ.












Click it and Unblock the Notifications