ಬೆಂಗಳೂರು: ಮಕ್ಕಳನ್ನು ಕೊಂದು, ಆತ್ಮಹತ್ಯೆ ಮಾಡಿಕೊಂಡ ತಾಯಿ!
ಬೆಂಗಳೂರು, ಸೆಪ್ಟೆಂಬರ್ 2: ತನ್ನಿಬ್ಬರು ಮಕ್ಕಳನ್ನು ಕತ್ತು ಹಿಸುಕಿ ಸಾಯಿಸಿ, ಮಹಿಳೆಯೊಬ್ಬರೂ ತಾವೂ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಉಲ್ಸೂರಿನ ಮುರ್ಫಿ ಟೌನ್ ನಲ್ಲಿ ಸೆಪ್ಟೆಂಬರ್ 2 ರಂದು ರಾತ್ರಿ ನಡೆದಿದೆ.
ರೇಣುಕಾ ಜಿ(35) ಎಂಬುವವರೇ ತಮ್ಮ ನಿಶಿತಾ ಜಿ(6) ಮತ್ತು ಪಾವನಿ(10 ತಿಂಗಳು) ಎಂಬ ಇಬ್ಬರು ಹೆಣ್ಣು ಮಕ್ಕಳನ್ನು ಸಾಯಿಸಿ ತಾವೂ ಆತ್ಮಹತ್ಯೆ ಮಾಡಿಕೊಂಡವರು.

ಸಾಫ್ಟವೇರ್ ಉದ್ಯೋಗಿಯ ಹೆಮಂತ್ ಅವರ ಪತ್ನಿಯಾಗಿದ್ದ ರೇಣುಕಾ ಲ್ಯಾಬ್ ಟೆಕ್ನಿಶಿಯನ್ ಆಗಿದ್ದರು. ಅವರಿಗೆ ಆಕೆಯ ಅತ್ತೆ-ಮಾವ ಕಿರುಕುಳ ನೀಡುತ್ತಿದ್ದರು ಎಂದು ರೇಣುಕಾ ತಾಯಿ ದೂರಿದ್ದಾರೆ. ಆದರೆ ರೇಣುಕಾ ಡೆತ್ ನೋಟಿನಲ್ಲಿ 'ನನ್ನ ಸಾವಿಗೆ ನಾನೇ ಕಾರಣ' ಎಂದು ಬರೆದಿದ್ದಾರೆ.
ಅತ್ತೆ-ಮಾವ ಮಲಗಿದ್ದ ಸಮಯದಲ್ಲಿ ತನ್ನ ರೂಮಿನಲ್ಲಿ ಮಲಗಿದ್ದ ಇಬ್ಬರು ಮಕ್ಕಳನ್ನೂ ಕತ್ತು ಹಿಸುಕಿ ಸಾಯಿಸಿದ್ದಾರೆ. ಪತಿಗೆ ರಾತ್ರಿ ಪಾಳಿ ಇದ್ದಿದ್ದರಿಂದ ತಾನೂ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಬೆಳಿಗ್ಗೆ ಮನೆಗೆ ಬಂದ ಹೇಮಂತ್ ರೂಮಿನ ಬಾಗಿಲು ಹಾಕಿರುವುದು ಕಂಡು ಹಲವು ಬಾರಿ ಬಾಗಿಲು ಬಡಿದಿದ್ದಾರೆ. ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಬೆಡ್ ರೂಂ ನ ಕಿಟಕಿಯಿಂದ ನೋಡಿದಾಗ ನೇಣುಬಿಗಿದ ಸ್ಥಿತಿಯಲ್ಲಿ ರೇಣುಕಾ ದೇಹ ಕಾಣಿಸಿದೆ.
ಹೇಮಂತ್ ತಂದೆ ಹರಿಕೃಷ್ಣ ಹೇಳುವ ಪ್ರಕಾರ ಹೇಮಂತ್ 35 ಲಕ್ಷ ಸಾಲ ಮಾಡಿಕೊಂಡಿದ್ದರು. ರೇಣುಕಾ ಸಾವಿಗೆ ಅದೇ ಕಾರಣ ಎಂಬುದು ಅವರ ಅಭಿಪ್ರಾಯ.
ತನ್ನ ಅಂತ್ಯ ಸಂಸ್ಕಾರವನ್ನು ಚಿತ್ರದುರ್ಗದಲ್ಲಿರುವ ತಮ್ಮ ಊರಿನಲ್ಲಿಯೇ ನೆರವೇರಿಸುವಂತೆಯೂ, ಅದಕ್ಕಾಗಿ ಖರ್ಚಾಗುವ ಹಣವನ್ನು ತನ್ನ ಖಾತೆಯಿಂದಲೇ ಡ್ರಾ ಮಾಡುವಂತೆಯೂ ರೇಣುಕಾ ಡೆತ್ ನೋಟಿನಲ್ಲಿ ಬರೆದಿದ್ದಾರೆ.












Click it and Unblock the Notifications