Bengaluru Airport: ಅನೈರ್ಮಲ್ಯತೆಗೆ ಪ್ರಯಾಣಿಕರಿಂದ ಛೀಮಾರಿ: ಪೋಸ್ಟ್ ವೈರಲ್
ಬೆಂಗಳೂರು, ಆಗಸ್ಟ್ 14: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಟರ್ಮಿನಲ್ 2 ಲೋಕಾರ್ಪಣೆ ಬಳಿಕ ತನ್ನದೇ ಆದ ಹೆಗ್ಗುರುತು ಮೂಡಿಸಿದೆ. ದೇವನಹಳ್ಳಿಯಲ್ಲಿರುವ ಏರ್ಪೋರ್ಟ್ ತನ್ನ ಸೇವೆಯಿಂದಲೇ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಆದರೆ ಇಲ್ಲಿ ಪ್ರಯಾಣಿಕರ ಭದ್ರತಾ ತಪಾಸಣೆ ವೇಳೆ ನಡೆದುಕೊಳ್ಳುತ್ತಿರುವ ರೀತಿಯಿಂದ ಸುದ್ದಿಯಾಗಿದೆ. ಪ್ರಯಾಣಿಕರೊಬ್ಬರು ಇಲ್ಲಿನ ಅನೈರ್ಮಲ್ಯವನ್ನು ಖಂಡಿಸಿದ್ದು, ಹೆಚ್ಚು ವೈರಲ್ ಆಗುತ್ತಿದೆ.
ಇತ್ತೀಚೆಗೆ ಬೆಂಗಳೂರು ವಿಮಾನ ನಿಲ್ದಾಣ ಮೂಲಕ ಪ್ರಯಾಣ ಮಾಡಿದ್ದ ಮ್ಯಾಗ್ನಿಫ್ಲೆಕ್ಸ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆನಂದ್ ನಿಚಾನಿ ಅವರು ಕೆಇಎ ಸಿಬ್ಬಂದಿ ನಡೆಸುವ ಭದ್ರತಾ ತಪಾಸಣೆ ವೇಳೆ ಇರುಸು ಮುರುಸು ಅನುಭವಿಸಿದ್ದಾರೆ. ಕಾರಣ ಪ್ರಯಾಣಿಕರು, ಅವರ ಬ್ಯಾಗ್, ಇನ್ನಿತರ ವಸ್ತು ಪರಿಶೀಲನೆ ವೇಳೆ ಕಂಡು ಬಂದ ಅನೈರ್ಮಲ್ಯದ ಸ್ಥಿತಿ ಎಂದು ಅವರು ಸಾಮಾಜಿಕ ಜಾಲತಾಣ (ಎಕ್ಸ್) ದಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ ಅವರು ತಮ್ಮ ಟ್ವೀಟ್ ಪೋಸ್ಟ್ ಅನ್ನು @BLRAirport ಎಕ್ಸ್ ಹ್ಯಾಂಡಲ್ಗೆ ಟ್ಯಾಗ್ ಮಾಡಿದ್ದಾರೆ.

ಹೌದು, ಕೆಇಎ ಆವರಣದಲ್ಲಿ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸುವಾಗ ಬ್ಯಾಗ್ ಸೇರಿದಂತೆ ವಾಚ್, ಬೆಲ್ಟ್, ಲಾಪ್ಟಾಪ್, ಮೊಬೈಲ್ ಇನ್ನಿತರ ಪ್ರಯಾಣಿಕರ ವಸ್ತುಗಳನ್ನು ಟ್ರೇನಲ್ಲಿ ಇಟ್ಟು ಚೆಕ್ಕಿಂಗ್, ಸ್ಕ್ಯಾನಿಂಗ್ ಮಾಡಲಾಗುತ್ತದೆ. ಆದರೆ ಈ ವೇಳೆ ಪ್ರಯಾಣಿಕರ ಶೂಗಳು ಇಡಲು ಅದೇ ಟ್ರೇ ಬಳಸಿ, ನಂತರ ಇತರ ವಸ್ತುಗಳು ಇಡಲು ಅದೇ ಟ್ರೇಗಳನ್ನು ನೀಡಲಾಗುತ್ತಿದೆ. ಇದು ಅನೈರ್ಮಲ್ಯವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಯಾಣಿಕರು ಎಲ್ಲಿಂದಲೋ ಬಂದಿರುತ್ತಾರೆ. ಅವರ ಮಣ್ಣು ಹತ್ತಿಕೊಂಡ ಬೂಟುಗಳನ್ನು ಸಾಗಿಸಲು ಬಳಸುವ ಅದೇ ಟ್ರೇಗಳನ್ನು ವೈಯಕ್ತಿಕ ವಸ್ತುಗಳ ಸಾಗಿಸಲು ಬಳಸಲಾಗುತ್ತದೆ. ಇದೆಷ್ಟು ಸರಿ. ಇಲ್ಲಿ ಎಲ್ಲ ವಸ್ತುಗಳು ಒಂದೇ ಅಲ್ಲ ಅಲ್ಲವೇ?

ಪೋಸ್ಟ್ಗೆ ಪ್ರತಿಕ್ರಿಯಿಸಿದ ಬೆಂಗಳೂರು ಏರ್ಪೋರ್ಟ್
ಆದ್ದರಿಂದ ವಿಮಾನ ನಿಲ್ದಾಣ ನಿಲ್ದಾಣದಲ್ಲಿ ಶೂಗಳಿಗೆ ಬೇರೆ ಟ್ರೇ ಹಾಗೂ ಇತರ ವಸ್ತುಗಳನ್ನು ಬಳಸಲು ಪ್ರತ್ಯೇಕ ಟ್ರೇಗಳನ್ನು ನೀಡುವ ನಿಯಮ ಇರಬೇಕು ಎಂದು ಅವರು ಬಯಸಿದ್ದಾರೆ. ಅವರ ಈ ಟ್ವೀಟ್ಗೆ ಮರುತ್ತರ ನೀಡಿರುವ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವ ಅಧಿಕಾರಿಗಳು "ನಮಸ್ಕಾರ ಆನಂದ್ ನಿಚಾನಿ ಅವರೇ ನೈರ್ಮಲ್ಯ ಮತ್ತು ಪ್ರಯಾಣಿಕರ ಅನುಭವವು ನಮಗೆ ಮುಖ್ಯ ಆದ್ಯತೆಯ ವಿಷಯವಾಗಿದೆ. ನಾವು ಶೂಗಳಿಗೆಂದೇ ಬೇರೆ ಟ್ರೆಗಳನ್ನು ಇಟ್ಟಿದ್ದೇವೆ ಎಂದು ಶೂಗಳಿಗೆ ಮೀಸಲಾದ ಟ್ರೇಗಳ ಫೋಟೋ ಪೋಸ್ಟ್ ಮಾಡಿದ್ದಾರೆ.
ಇದಕ್ಕೆ ಮರುತ್ತರ ನೀಡಿರುವ ಆನಂದ್ ಅವರು, ನೀವು ಪ್ರತ್ಯೇಕವಾಗಿ ಟ್ರೇ ಇಟ್ಟಿರಬಹುದು ಆದರೆ ಪ್ರಯಾಣಿಕರು ಎಲ್ಲದ್ದಕ್ಕೂ ಒಂದೇ ಟ್ರೇಗಳನ್ನು ಬಳಸುತ್ತಿದ್ದಾರೆ. ಅವರಿಗೆ ಶೂಗಳಿಗೆ ಪ್ರತ್ಯೇಕ ಟ್ರೇಟ್ ಇದೆ ಎಂಬುದನ್ನು ಗಮನಿಸದೇ ಒಂದೇ ಟ್ರೇ ಬಳಸಿದ್ದಾರೆ. ಕೆಐಎ ಪ್ರತ್ಯೇಕ ಟ್ರೇ ಬಳಕೆ ಕಡ್ಡಾಯ ಮಾಡಿಲ್ಲವೇ? ಎಂದು ಅವರು ಕೆಐಎಗೆ ಪ್ರಶ್ನಿಸಿದ್ದಾರೆ.
ಪೋಸ್ಟ್ಗೆ ನೆಟ್ಟಿಗರಿಂದ ಸ್ಪಂದನೆ
ವಿಮಾನ ನಿಲ್ದಾಣದಲ್ಲಿ ಆದ ಈ ಘಟನೆಯನ್ನು ಆನಂದ್ ಅವರು ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ 33,000 ವೀಕ್ಷಣೆಗಳು ಮತ್ತು 600ಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದಿದೆ. ಅನೇಕರು ಈ ಬಗ್ಗೆ ಕಾಮೆಂಟ್ಗಳನ್ನು ಮಾಡಿದ್ದಾರೆ. ಸುಗಮ ಪ್ರಯಾಣಕ್ಕಾಗಿ ಏರ್ಪೋರ್ಟ್ನಲ್ಲಿ ಸ್ವಚ್ಛವಾಗಿಡುವುದು ಮುಖ್ಯ. ಶುಚಿತ್ವ ಬಹಳ ಮುಖ್ಯ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.












Click it and Unblock the Notifications