ಒಂದು ಗಂಟೆ ಕಾಲ ಕನ್ನಡ ಟಿವಿ ಚಾನೆಲ್ ಬಂದ್!
ಬೆಂಗಳೂರು, ಡಿ.4: ಅಂತರ್ಜಾಲದ ಮೇಲಿನ ಸೆನ್ಸಾರ್ ರದ್ದುಪಡಿಸುವಂತೆ ಆಗ್ರಹಿಸಿ ಈ ಹಿಂದೆ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳು, ಸಾರ್ವಜನಿಕರು ಪ್ರತಿಭಟಿಸಿದ್ದನ್ನು ಒಮ್ಮೆ ಮೆಲುಕು ಹಾಕಿಕೊಳ್ಳಿ. ಅಥವಾ ಇತ್ತೀಚೆಗೆ ನಡೆದ ಮೊಬೈಲ್ ಇಂಟರ್ನೆಟ್ ಬಂದ್ ಅಭಿಯಾನ ನೆನಪು ಮಾಡ್ಕೊಳ್ಳಿ.
ಇವೆರಡು ನೆನಪಾಗದಿದ್ದರೆ ಒಂದು ಗಂಟೆ ವಿದ್ಯುತ್ ಬಂದ್ ಮಾಡುವ ಜನಪ್ರಿಯ ಚಳವಳಿ 'ಅರ್ಥ ಅವರ್' ಸ್ಮರಿಸಿಕೊಳ್ಳಿ, ಈ ಎಲ್ಲಾ ಅಭಿಯಾನಗಳಂತೆ ಫೇಸ್ ಬುಕ್ ನಲ್ಲಿ ಮತ್ತೊಂದು ಅಭಿಯಾನಕ್ಕೆ ಚಾಲನೆ ಸಿಕ್ಕಿದೆ.
ಅರ್ಥ್ ಅವರ್ ಮಾದರಿಯಲ್ಲೇ ಒಂದು ಗಂಟೆಗಳ ಕಾಲ ಟಿವಿಯನ್ನು ಬಂದ್ ಮಾಡಲು ಸಮಾನ ಮನಸ್ಕರೆಲ್ಲ ಸೇರಿ ಫೇಸ್ ಬುಕ್ ನಲ್ಲಿ 'ಟಿವಿ ಬಂದ್ ಮಾಡ್ರಿ' ಎಂಬ ಗುಂಪೊಂದನ್ನು ಆರಂಭಿಸಿದ್ದಾರೆ. [ಭವಿಷ್ಯ ಹೇಳುವವರ ವಿರುದ್ಧ ಭುಗಿಲೆದ್ದ ಕಿಡಿ]

ಕನ್ನಡ ನಾಡಿನ ಟಿವಿ ಚಾನೆಲ್-ಗಳ ಅಭಿರುಚಿಹೀನತೆಯನ್ನು ಖಂಡಿಸಿ, ನಾವು ಕನ್ನಡನಾಡಿನ ವೀಕ್ಷಕರು 19 ಡಿಸೆಂಬರ್ 2014 ರಂದು ರಾತ್ರಿ 09:00 PM ರಿಂದ 10:00 PMರವರಗೆ ಟಿವಿಯನ್ನು ಆಫ್ ಮಾಡಿ, ಬಂದ್ ಮಾಡಿ, ಆರಿಸಿ, ಸ್ವಿಚ್ ಆಫ್ ಮಾಡಿ ಸಾಂಕೇತಿಕವಾಗಿ ಪ್ರತಿಭಟಿಸಲಿದ್ದೇವೆ... ನಾಡಿನ ಸಮಸ್ತ ಪ್ರಜ್ಞಾವಂತರು ದಯವಿಟ್ಟು ಕೈ ಜೋಡಿಸಿ!
ಇದಕ್ಕೂ ಸರಿ ಹೋಗದಿದ್ದರೆ ಒಂದು ಗಂಟೆಯ ಪ್ರತಿಭಟನೆ ಒಂದು ದಿನಕ್ಕೆ ವಿಸ್ತಾರಗೊಳಿಸಲಾಗುವುದು, ನಂತರ ಒಂದು ತಿಂಗಳಿಗೆ... ಪ್ರಜಾಪ್ರಭುತ್ವದಲ್ಲಿ ಜವಾಬ್ದಾರಿಯುತವಾಗಿ ವರ್ತಿಸಬೇಕಾದ ಟಿವಿ ಮಾಧ್ಯಮ ಪಾಠ ಕಲಿಯುವವರೆಗೆ ನಮ್ಮ ಹೋರಾಟ ನಡೆಯಲಿದೆ ಎಂದು ಗುಂಪಿನ ಪ್ರಚಾರಕರಾದ ವಿದ್ಯಾಶಂಕರ್ ಹರಪನಹಳ್ಳಿ ಹೇಳಿದ್ದಾರೆ. ಹೆಚ್ಚಿನ ಮಾಹಿತಿಗೆ ಟಿವಿ ಬಂದ್ ಮಾಡ್ರಿ ಗುಂಪಿಗೆ ಭೇಟಿ ಕೊಡಿ.
ಕನ್ನಡ ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಜ್ಯೋತಿಷ್ಯ ಕಾರ್ಯಕ್ರಮದ ವಿರುದ್ಧ ಇತ್ತೀಚೆಗೆ ಪ್ರತಿಭಟನೆಗಳು ನಡೆದಿತ್ತು. ಇಂಥ ಕಾರ್ಯಕ್ರಮಗಳಿಂದ ಜ್ಯೋತಿಷಿಗಳು ಜನರಿಗೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಜೊತೆಗೆ ಜ್ಯೋತಿಷಿಗಳಿಗಿಂತ ಅವರನ್ನು ಟಿವಿ ಸ್ಟುಡಿಯೋಗೆ ಕರೆಸಿಕೊಳ್ಳುವ ಮಾಧ್ಯಮ ಸಂಸ್ಥೆ ಎಚ್ಚೆತ್ತುಕೊಳ್ಳಬೇಕು ಎಂಬ ವಾದವೂ ಇದೆ. ಹೀಗಾಗಿ ಈ ರೀತಿ ಬೆಳವಣಿಗೆಯೊಂದು ಕಾಣಿಸಿಕೊಂಡಿದೆ.












Click it and Unblock the Notifications