ಸ್ವಾತಂತ್ರ್ಯೋತ್ಸವ ವೇಳೆ ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯದ ಸಂಚು?
ನಕಲಿ ನೋಂದಾವಣಿ ಸಂಖ್ಯೆಯಿದ್ದ ಬಿಎಂಡಬ್ಲ್ಯೂ ಕಾರು ಪತ್ತೆ. ಗುರುವಾರ ಸಂಜೆ ಭಾರತೀಯ ಸೇನಾ ಫೋರಂನ ಅಧ್ಯಕ್ಷರಿಂದ ಪತ್ತೆ. ಆದರೆ, ಕಾರು ನಿಲ್ಲಿಸಿದಾಗ ಅದರಲ್ಲಿದ್ದ ಒಬ್ಬ ಮಾತ್ರ ಕೆಳಗಿಳಿದು, ಇತರ ಮೂವರು ಕಾರಿನೊಂದಿಗೆ ಪರಾರಿ.
ಬೆಂಗಳೂರು, ಜುಲೈ 21: ನಗರದಲ್ಲಿ ಮಂದಿನ ತಿಂಗಳು ನಡೆಯಲಿರುವ ಸ್ವಾತಂತ್ರ್ಯೋತ್ಸವದ ವೇಳೆ ವಿಧ್ವಂಸಕ ಕೃತ್ಯಗಳನ್ನು ಮಾಡಲು ಕೆಲ ದುಷ್ಟಶಕ್ತಿಗಳು ಸಂಚು ರೂಪಿಸಿದ್ದಾರೆಯೇ? ಸುದ್ದಿ ಜಾಲತಾಣವೊಂದರಲ್ಲಿ ಬಂದ ವರದಿಯೊಂದು ಇಂಥದ್ದೊಂದು ಅನುಮಾನವನ್ನು ಹುಟ್ಟುಹಾಕಿದೆ.
ನೃಪತುಂಗ ರಸ್ತೆಯಲ್ಲಿ ಗುರುವಾರ ಸಂಜೆ 4:30ರ ಸುಮಾರಿಗೆ ಮೇಲ್ನೋಟಕ್ಕೆ ನಕಲಿ ಎಂದೆನಿಸುವ ನಂಬರ್ ಪ್ಲೇಟ್ ಉಳ್ಳ ಬಿಎಂಡಬ್ಲ್ಯೂ ಕಾರೊಂದು ವೇಗವಾಗಿ ಓಡಿದೆ. ಅದನ್ನು ಗಮನಿಸಿದ ಭಾರತೀಯ ಸೇನಾ ಫೋರಂನ ಅಧ್ಯಕ್ಷ ಶಶಾಂಕ್ ಶಿವಕುಮಾರ್ ಅವರು ಕೂಡಲೇ ಬೆನ್ನಟ್ಟಿದ್ದಾರೆ. ಕಾರಿನ ನೋಂದಾವಣಿ ಸಂಖ್ಯೆ WBX 000 ಎಂದಿದ್ದಿದ್ದೇ ಅನುಮಾನಕ್ಕೆ ಕಾರಣವಾಗಿದೆ.

ವೇಗವಾಗಿ ಓಡುತ್ತಿದ್ದ ಕಾರನ್ನು ಚೇಸ್ ಮಾಡಿಕೊಂಡು ಬಂದು ಹಡ್ಸನ್ ವೃತ್ತದಲ್ಲಿ ಅದನ್ನು ನಿಲ್ಲಿಸುವಲ್ಲಿ ಸಫಲರಾಗಿದ್ದಾರೆ. ಆಗ, ಅದರಲ್ಲಿದ್ದ ಒಬ್ಬ ಕೆಳಗಿಳಿದಿದ್ದಾನೆ. ಆದರೆ, ಕಾರಿನಲ್ಲಿದ್ದ ಇತರ ಮೂವರೂ ಕಾರಿನೊಂದಿಗೆ ಪರಾರಿಯಾಗಿದ್ದಾರೆ.
ಈ ಹಿನ್ನೆಲೆಯಲ್ಲಿ, ತಮ್ಮ ಅನುಮಾನ ಮತ್ತಷ್ಟು ಗಟ್ಟಿ ಮಾಡಿಕೊಂಡ ಶಶಾಂಕ್, ಕೂಡಲೇ ಆ ವ್ಯಕ್ತಿಯನ್ನು ಹತ್ತಿರದ ಹಲಸೂರು ಗೇಟ್ ಪೊಲೀಸ್ ಠಾಣೆಗೆ ಕರೆದೊಯ್ದು ನಡೆದ ಘಟನೆಯನ್ನು ಪೊಲೀಸರಲ್ಲಿ ತಿಳಿಸಿ ಆ ವ್ಯಕ್ತಿಯನ್ನು ಒಪ್ಪಿಸಿ, ಕಾರ್ಯ ನಿಮಿತ್ತ ತೆರಳಿದ್ದಾರೆ.
ಆದರೆ, ಕೆಲವು ಗಂಟೆಗಳ ನಂತರ ಮತ್ತೆ ಪೊಲೀಸ್ ಠಾಣೆಗೆ ಬಂದ ಶಶಾಂಕ್ ಅವರಿಗೆ ಕೊಂಚ ಶಾಕ್ ಆಗಿದೆ. ಅವರು ಒಪ್ಪಿಸಿದ್ದ ವ್ಯಕ್ತಿ ಅಲ್ಲಿಂದ ಪರಾರಿಯಾಗಿದ್ದಾನೆ.
ಪೊಲೀಸರನ್ನು ಕೇಳಿದರೆ, ಆ ವ್ಯಕ್ತಿಯು ಎದೆ ನೋವು ಎಂದು ಹೇಳಿದ್ದು, ತಕ್ಷಣವೇ ಪೊಲೀಸ್ ಠಾಣೆಯಿಂದ ಓಡಿ ಹೋದ ಎಂದಿದ್ದಾರೆ.
ಇದರಿಂದ ಕುಪಿತಗೊಂಡ ಶಶಾಂಕ್, ಹಲಸೂರು ಗೇಟ್ ವ್ಯಾಪ್ತಿಯ ಸಹಾಯಕ ಪೊಲೀಸ್ ಕಮೀಷನರ್ (ಎಸಿಪಿ) ಅವರಿಗೆ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಎಸಿಪಿ ಅವರು ತನಿಖೆಗೆ ಆದೇಶಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಶಾಂಕ್, ''ಮುಂದಿನ ತಿಂಗಳು ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಆದರೆ, ಇದರ ನಡುವೆಯೇ ಇಂಥದ್ದೊಂದು ಘಟನೆ ನಡೆದಿರುವುದು ಹಲವಾರು ಅನುಮಾನಗಳನ್ನು ಹುಟ್ಟುಹಾಕಿದೆ. ಕಾರಿನಲ್ಲಿದ್ದವರು ಉಗ್ರರಲ್ಲದಿದ್ದರೂ, ಮತ್ಯಾವುದೋ ಸಮಾಜ ಘಾತುಕ ಶಕ್ತಿಗಳಾಗಿರಬಹುದು. ಆ ಕಾರಿನಲ್ಲಿ ಏನೋ ಇದ್ದಿರಬಹುದು. ಹಾಗಾಗಿಯೇ ಅವರು ನಾನು ಆ ಕಾರನ್ನು ನಿಲ್ಲಿಸಿದ ಕೆಲವೇ ಸೆಕೆಂಡ್ ಗಳಲ್ಲಿ ಪರಾರಿಯಾಗಿದ್ದಾರೆ. ಇದರಲ್ಲಿ ಹಲಸೂರು ಗೇಟ್ ಪೊಲೀಸರೂ ಬೇಜವಾಬ್ದಾರಿಯಾಗಿ ನಡೆದುಕೊಂಡಿದ್ದು ಬೇಸರ ತರಿಸಿದೆ'' ಎಂದಿದ್ದಾರೆ.












Click it and Unblock the Notifications