ನಿಮ್ಮ ಏರಿಯಾದಲ್ಲಿ ಇಂಟರ್ನೆಟ್ ಪ್ರಾಬ್ಲಂ ಇದ್ಯಾ?
ಬೆಂಗಳೂರು, ಅ.9: ನಿಮ್ಮ ಏರಿಯಾದಲ್ಲಿ ಇಂಟರ್ನೆಟ್ ಪ್ರಾಬ್ಲಂ ಇದ್ಯಾ? ನೆಟ್ ಡೌನ್ ಆಗಿದ್ಯಾ ಎಂಬ ಪರಸ್ಪರ ಫೋನ್ ಮಾಡಿ ವಿಚಾರಣೆ ನಡೆಸುವುದು ಕಳೆದೊಂದು ವಾರದಿಂದ ದಕ್ಷಿಣ ಬೆಂಗಳೂರಿನಲ್ಲಿ ಕಾಮನ್ ಆಗಿಬಿಟ್ಟಿದೆ.
ನಗರದ ದಕ್ಷಿಣ ಭಾಗದಲ್ಲಿ ಒಳಚರಂಡಿ ಹಾಗೂ ಜಲಮಂಡಳಿಯವರು ರಸ್ತೆಯನ್ನು ಅಗೆದು ಗುಂಡಿ ತೋಡಿದ್ದು ನೋಡಿ ಸಾಮಾಜಿಕ ಕಾರ್ಯಕರ್ತರು, ಸರ್ಕಾರೇತರ ಸಂಸ್ಥೆಗಳು 'ಗುಂಡಿ ನಗರ' ಎಂದು ಬೆಂಗಳೂರಿಗೆ ಹೆಸರಿಟ್ಟು ಸಂತಸ ಪಟ್ಟಿದ್ದಾರೆ. ಆದರೆ, ಇದರ ಬಿಸಿ ನೇರವಾಗಿ ಬಿಬಿಎಂಪಿಗೆ ತಟ್ಟಿದೆ.
ಹೊಸದಾಗಿ ರಚನೆಯಾಗಿರುವ ಬಿಬಿಎಂಪಿ ಸಮಿತಿ ತಕ್ಷಣವೇ ಕಾರ್ಯಾಚರಣೆ ನಡೆಸಿ ಗುಂಡಿಗಳ ಜಾಲದಲ್ಲಿ ಇಳಿದು ಇಂಟರ್ನೆಟ್ ಕನೆಕ್ಷನ್ ಕಟ್ ಆಗಿದ್ದು ಏಕೆ ಎಂದು ಪತ್ತೆಹಚ್ಚಿದ್ದಾರೆ. 10 ಸದಸ್ಯರ ಬಿಬಿಎಂಪಿ ಸಮಿತಿಯ ನೇತೃತ್ವ ವಹಿಸಿಕೊಂಡಿರುವ ಯಡಿಯೂರು ಕಾರ್ಪೋರೇಟರ್ ಎನ್ ಆರ್ ರಮೇಶ್ ಪ್ರಕಾರ, 'ನಗರದಲ್ಲಿ ಶೇ 90ರಷ್ಟು OFC ಅಳವಡಿಕೆ ಅನಧಿಕೃತವಾಗಿದೆ. 18 ಕ್ಕೂ ಅಧಿಕ ಟೆಲಿಕಾಂ ಸಂಸ್ಥೆಗಳು ಬೇಕಾಬಿಟ್ಟಿ ಕೇಬಲ್ ಎಳೆದು ಜಲಮಂಡಳಿ ಗುಂಡಿಗಳ ಜತೆ ತೂರಿಸಿದ್ದಾರೆ. ಹೀಗಾಗಿ ಎಲ್ಲಾ ಸಮಸ್ಯೆಗಳು ಆರಂಭವಾಗಿದೆ.

ಸುಮಾರು 6140 ಕಿ.ಮೀ ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಕೆಗೆ 18 ಟೆಲಿಕಾಂ ಸಂಸ್ಥೆಗಳಿಗೆ ಅನುಮತಿ ಸಿಕ್ಕಿದೆ ಇದರಲ್ಲಿ 1400 ಕಿ.ಮೀ ಅನಧಿಕೃತವಾಗಿದೆ. ಸುಮಾರು 60,000 ಕಿ.ಮೀ ಗುಂಡಿ ತೋಡಿ OFCಗಳನ್ನು ಹಾಕಲು ಯೋಜಿಸಿದ್ದಾರೆ ಇದರಲ್ಲಿ 55000 ಕಿ.ಮೀ ಅಕ್ರಮವಾಗಿದೆ ಎಂದು ಎನ್ ಆರ್ ರಮೇಶ್ ವಿವರಿಸಿದ್ದಾರೆ. ಇದರ ಜತೆಗೆ 8000 ಕಿ.ಮೀ ಕೇಬಲ್ ಗಳು ಸಾರ್ವಜನಿಕರ ತಲೆ ಮೇಲೆ ಅಕ್ರಮವಾಗಿ ನೇತಾಡುತ್ತಿವೆ.
ಈ ರೀತಿ ಅಕ್ರಮವಾಗಿ ಕೇಬಲ್ ಎಳೆದಿರುವುದರಿಂದ ಪಾಲಿಕೆಗೆ ಕೋಟಿಗಟ್ಟಲೆ ನಷ್ಟವಾಗಿದೆ. ಕೇಬಲ್ ಅಲ್ಲಲ್ಲಿ ತುಂಡಾಗಿದ್ದು ಇಂಟರ್ನೆಟ್ ಸಂಪರ್ಕ ಅನೇಕ ಕಡೆ ಕಳೆದುಹೋಗಿದೆ.ಪ್ರತಿಷ್ಠಿತ ಸಂಸ್ಥೆಗಳಾದ ಏರ್ ಟೆಲ್, ವೊಡಫೋನ್, ಟಾಟಾ ಡೊಕೊಮೋ, ಏರ್ಸೆಲ್, ರಿಲಾಯನ್ಸ್, ಎಂಟಿಎಸ್ ಸೇರಿದಂತೆ 18 ಸೇವಾ ಸಂಸ್ಥೆಗಳ ಸೇವೆಯಲ್ಲಿ ವ್ಯತ್ಯಯವಾಗಲಿದೆ.
ಕಾರ್ಪೊರೇಟರ್ ಗಳಾದ ಎನ್.ನಾಗರಾಜ್ ಎನ್.ಆರ್.ರಮೇಶ್, ಸಿ.ಕೆ.ರಾಮಮೂರ್ತಿ, ಎಸ್.ಹರೀಶ್, ಆರ್.ಪ್ರಕಾಶ್, ಲತಾ ನರಸಿಂಹಮೂರ್ತಿ, ಸತ್ಯನಾರಾಯಣ, ಕೃಷ್ಣರೆಡ್ಡಿ ಅವರಿರುವ ಸಮಿತಿ ತನ್ನ ವರದಿಯನ್ನು ಮೇಯರ್ ಕಟ್ಟೆ ಸತ್ಯನಾರಾಯಣ ಅವರಿಗೆ ಸಲ್ಲಿಸಿದೆ. ಇಂಟರ್ನೆಟ್ ಸೇವಾ ಸಂಸ್ಥೆಗಳು ನಿಗದಿತ ಶುಲ್ಕ ಪಾವತಿಸದಿದ್ದರೆ, ಬಿಬಿಎಂಪಿ ಸಿಬ್ಬಂದಿ ಕೇಬಲ್ ಗಳನ್ನು ಕತ್ತರಿಸಿ ವಶಕ್ಕೆ ತೆಗೆದುಕೊಳ್ಳಬಹುದಾಗಿದೆ ಎಂದು ಶಿಫಾರಸು ಮಾಡಲಾಗಿದೆ.
ಓಎಫ್ ಸಿಗೆ ನೆಲಬಾಡಿಗೆ ನಿಗದಿ ಮಾಡಬೇಕೆಂದು ಅನೇಕ ಬಾರಿ ಒತ್ತಾಯಿಸಲಾಗಿತ್ತು. ಆದರೆ, ಓಎಫ್ ಸಿ ಅಳವಡಿಸುವ ಟೆಲಿಕಾಂ ಕಂಪನಿಗಳು ಕೋರ್ಟ್ ಮೆಟ್ಟಿಲೇರಿತ್ತು. ಆನಂತರ ಹೈಕೋರ್ಟ್ ಸೂಚನೆಯಂತೆ ಕಾಯ್ದೆಗೆ ತಿದ್ದುಪಡಿ ಮಾಡಿ ನೆಲಬಾಡಿಗೆ ನಿಗದಿಗೆ ದಾರಿ ಮಾಡಲಾಗಿದೆ ಎಂದರು.
ನಗರದ ಕೆ.ಆರ್.ರಸ್ತೆ, ಕೆ.ಎಚ್.ವೃತ್ತದಲ್ಲಿ ಟಾಟಾ ಮತ್ತು ರಿಲಯನ್ಸ್ ಕಂಪನಿಗಳ ಅಕ್ರಮ, ಬನ್ನೇರುಘಟ್ಟ ರಸ್ತೆಯ ಬಿಳೇಕಳ್ಳಿಯಲ್ಲಿ ಚರಂಡಿಯಲ್ಲಿ ಭಾರಿ ಪ್ರಮಾಣದ ಅಕ್ರಮ ಕೇಬಲ್, ಸೌತ್ ಎಂಡ್ ರಸ್ತೆಯಲ್ಲಿ ಫುಟ್ ಪಾತ್ ನಲ್ಲೇ ಕಂಬ ನೆಟ್ಟು ಕೇಬಲ್ ಅಳವಡಿಕೆ, ಜಯನಗರ ವಿಜಯಕಾಲೇಜು ಬಳಿ ಒಳ ಚರಂಡಿಯಲ್ಲೇ ಅಕ್ರಮ ಕೇಬಲ್ ಎಳೆಯಲಾಗಿದೆ ಎಂದು ಸಮಿತಿ ವರದಿ ಹೇಳಿದೆ.












Click it and Unblock the Notifications