7th Pay Commission: ಅಣ್ಣಾ ಹಜಾರೆ ನೇತೃತ್ವದಲ್ಲಿ ಬೆಂಗಳೂರಲ್ಲಿ ಸರ್ಕಾರಿ ನಿವೃತ್ತ ನೌಕರರ ಬೃಹತ್ ಪ್ರತಿಭಟನೆ
ಮಂಗಳೂರು, ಫೆಬ್ರವರಿ 26: 7ನೇ ವೇತನ ಆಯೋಗ ಕೇಂದ್ರ ಸರ್ಕಾರದಲ್ಲೂ, ರಾಜ್ಯದಲ್ಲೂ ಜಾರಿಯಲ್ಲಿದೆ. ಈ ಏಳನೇ ವೇತನ ಆಯೋಗದಡಿ ಸರ್ಕಾರಿ ನೌಕರರು ಮಾತ್ರವಲ್ಲದೇ, ಪಿಂಚಣಿದಾರರು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕರ್ನಾಟಕದಲ್ಲಿ 26,700 ಸರ್ಕಾರಿ ನಿವೃತ್ತ ನೌಕರರು (ಪಿಂಚಣಿದಾರರು) ಸರ್ಕಾರದ ವಿರುದ್ಧ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ರಾಜ್ಯದಲ್ಲಿ 2022ರ ಜುಲೈ 1ರಿಂದ 2024ರ ಜುಲೈ 31 ರವರೆಗೆ ನಿವೃತ್ತರಾದ 26,700 ನಿವೃತ್ತ ಸರ್ಕಾರಿ ನೌಕರರು ರಾಜ್ಯ ಸರ್ಕಾರದ ವಿರುದ್ಧ ಬೇಸರ ಹೊರ ಹಾಕಿದ್ದಾರೆ. ಫೆಬ್ರವರಿ 28ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಈ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಮುಖ್ಯ ಸಂಯೋಜಕ ಸಿರಿಲ್ ರಾಬರ್ಟ್ ಡಿ'ಸೋಜಾ ಅವರು ನಿರ್ಧಾರ ಪ್ರಕಟಿಸಿದ್ದಾರೆ.

7ನೇ ವೇತನ ಆಯೋಗದ ಅಡಿಯಲ್ಲಿ ತಮಗೆ ಸಿಗಬೇಕಾದ ಅನೇಕ ನಿವೃತ್ತಿ ಆರ್ಥಿಕ ಸೌಲಭ್ಯಗಳ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ನಿರೀಕ್ಷೆ ಹುಸಿಯಾದ ಹಿನ್ನೆಲ್ಲೆಯಲ್ಲಿ ತಮಗೆ ಸಿಗಬೇಕಾದ ನಿವೃತ್ತಿ ಆರ್ಥಿಕ ಸೌಲಭ್ಯಗಳನ್ನು ಒದಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಿದ್ದಾರೆ.
ಈ ಬೇಡಿಕೆಯನ್ನು ಮುಂದಿಟ್ಟುಕೊಂಡು ರಾಜಧಾನಿಯಲ್ಲಿ ಶುಕ್ರವಾರ (ಫೆಬ್ರವರಿ 28) ದೊಡ್ಡ ಪ್ರಮಾಣದಲ್ಲಿ ಅನಿರ್ದಿಷ್ಟಾವಧಿಯ ಪ್ರತಿಭಟನೆ ಶುರು ಮಾಡಲಿದ್ದಾರೆ. ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ದ.ಕ. ಜಿಲ್ಲಾ ಮುಖ್ಯ ಸಂಯೋಜಕ ಸಿರಿಲ್ ರಾಬರ್ಟ್ ಡಿ'ಸೋಜಾ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ 10 ದಿನಗಳಲ್ಲಿ ನಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು. ಈ ಸಂಬಧಂ ಚರ್ಚೆಗೆ ನೌಕರ ಮುಖಂಡರನ್ನು ಆಹ್ವಾನಿಸಬೇಕು. ಹಿರಿಯ ಸಾಮಾಜಿಕ ಅಣ್ಣಾ ಹಜಾರೆ ಮತ್ತು ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು.
ಸರ್ಕಾರಿ ಉದ್ಯೋಗ ಮಾಡಿ ನಿವೃತ್ತರಾಗಿದ್ದೇವೆ. ನಮಗೆ ಸಿಗಬೇಕಾದ ಎಲ್ಲ ಸವಲತ್ತು ಸಿಗಬೇಕು. ನಮ್ಮ ಸಮಸ್ಯೆಗೆ ಪರಿಹಾರದ ನೀಡುವ ತುರ್ತು ಅಗತ್ಯವಿದೆ. ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ವೇತನ ಮತ್ತು ಪಿಂಚಣಿಗಳನ್ನು ಪರಿಷ್ಕರಿಸಲು ಸರ್ಕಾರ ಡಾ. ಸುಧಾಕರ್ ರಾವ್ ಅವರ ನೇತೃತ್ವದಲ್ಲಿ 7 ನೇ ವೇತನ ಆಯೋಗವನ್ನು ರಚಿಸಿತು. ಅದರ ಅಡಿಯಲ್ಲಿ ಆರ್ಥಿಕ ಸೌಲಭ್ಯ ಒದಗಿಸಲು ಸರ್ಕಾರ ಒಪ್ಪಿಗೆ ನೀಡುವಂತೆ ಅವರು ಒತ್ತಾಯಿಸಿದರು.
ನಿವೃತ್ತಿ ಆರ್ಥಿಕ ಪ್ರಯೋಜನ ಸಿಕ್ಕಿಲ್ಲ: ಆರ್ಥಿಕ ನಷ್ಟ
ಪಿಂಚಣಿದಾರರಿಗೆ 2022ರ ಜುಲೈ 1ರಿಂದಲೇ ಈ ಸವಲತ್ತು ಅನುಮೋದನೆ ನೀಡಿ ಜಾರಿಗೆ ತರಬೇಕಿತ್ತು. ಅದು ಹಾಗಾಗದಿದ್ದ ಕಾರಣ ಅಲ್ಲಿಂದ 2024 ರ ಜುಲೈ 31ರ ಮಧ್ಯ ನಿವೃತ್ತರಾದ ನೌಕರರು, 25 ತಿಂಗಳ ಕಾಲ ಸೇವೆ ಸಲ್ಲಿಸಿದರು. 7ನೇ ವೇತನ ಆಯೋಗದ ಅಡಿಯಲ್ಲಿ ನಿವೃತ್ತಿ ಪ್ರಯೋಜನಗಳ ಪಡೆಯದೇ ಆರ್ಥಿಕ ನಷ್ಟ ಅನುಭವಿಸಿದ್ದಾರೆ ಎಂದು ವಿವರಿಸಿದರು.
ಗಳಿಕೆ ರಜೆಯ ನಗದೀಕರಣ ಸೇರಿದಂತೆ ವಿವಿಧ ನಿವೃತ್ತಿ ನಂತರದ ಹಣಕಾಸು ಲಾಭಗಳು, ಪ್ರಯೋಜನಗಳು ಸಿಕ್ಕಿಲ್ಲ. ಈ ಸಂಬಂಧ ಕಳೆದ ಕೆಲವು ತಿಂಗಳುಗಳಿಂದ ವಿವಿಧ ರೀತಿಯಲ್ಲಿ ಹೋರಾಟ ಮಾಡಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಸಿಎಂ ಸಿದ್ದರಾಮಯ್ಯ ಅವರು ನಮ್ಮ ಮನವಿಗೆ ಸ್ಪಂದಿಸಬೇಕು. ಇದನ್ನು ಸರ್ಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ಅನಿರ್ದಿಷ್ಟಾವಧಿ ಹೋರಾಟ ಆರಂಭಿಸಲಿದ್ದೇವೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ನಡೆಯುವ ಈ ಪ್ರತಿಭಟನೆಯಲ್ಲಿ ಕೇವಲ ನೌಕರರು ಮಾತ್ರವಲ್ಲದೇ, ಕರಾವಳಿ ಜಿಲ್ಲೆಯ ಸುಮಾರು 600 ಕ್ಕೂ ಹೆಚ್ಚು ಜನರು ತಮ್ಮ ಕುಟುಂಬಗಳೊಂದಿಗೆ ಭಾಗವಹಿಸಲಿದ್ದಾರೆ ಎಂದು ಹೇಳಿದರು.












Click it and Unblock the Notifications