ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 7 ಚಿರತೆ 13 ಜಿಂಕೆಗಳ ಸಾವು: ಕಾರಣವೇನು..?
ಬೆಂಗಳೂರು, ಸೆಪ್ಟೆಂಬರ್ 20: ವನ್ಯ ಜೀವಿ ಪ್ರೇಮಿಗಳ ನೆಚ್ಚಿನ ತಾಣ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಾಣಿಗಳ ಸರಣಿ ಸಾವು ಆತಂಕ ಹೆಚ್ಚಿಸಿದೆ. ಜಿಂಕೆ ಹಾಗೂ ಚಿರತೆ ಮರಿಗಳ ಸಾವು ಮುಂದುವರಿಯುತ್ತಿದೆ.
ಪ್ರಾಣಿ ಪಕ್ಷಿಗಳ ಆಶ್ರಯ ತಾಣವಾಗಿರುವ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಇದೀಗ ಮಾರಕ ವೈರಸ್ ಹಾವಳಿಗೆ ಪಾರ್ಕಿನಲ್ಲಿನ ಚಿರತೆ ಮರಿಗಳ ಮಾರಣ ಹೋಮವಾಗಿದ್ದು ಸೂತಕದ ಛಾಯೆ ಆವರಿಸಿದೆ.

ರಾಜ್ಯದ ನಾನಾ ಭಾಗಗಳ ರೈತರ ಜಮೀನುಗಳ ಬಳಿ ಸಿಕ್ಕ ಚಿರತೆ ಮರಿಗಳನ್ನು ತಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಪೋಷಣೆ ಮಾಡಲಾಗುತ್ತಿತ್ತು. ಅವುಗಳನ್ನು ಸಫಾರಿ ಹಾಗೂ ಮೃಗಾಲಯದಲ್ಲಿಟ್ಟು ನೋಡಿಕೊಳ್ಳಲಾಗುತ್ತಿತ್ತು. ಆದರೆ ಕಳೆದ ಆಗಸ್ಟ್ 22 ರಿಂದ ಸೆಪ್ಟೆಂಬರ್ 5ರ ಒಳಗೆ 7 ಚಿರತೆ ಮರಿಗಳು ಪೆಲಿನ್ ಪ್ಯಾನ್ಲೂಕೋಪೇನಿಯಾ ಎಂಬ ಮಾರಕ ವೈರಸ್ ರೋಗದಿಂದ ದಾರುಣವಾಗಿ ಮೃತಪಟ್ಟಿವೆ.
ನೂತನವಾಗಿ ನಿರ್ಮಾಣವಾಗುತ್ತಿರುವ ಲೆಪರ್ಡ್ ಸಫಾರಿಯಲ್ಲಿನ ಚಿರತೆ ಮರಿಯೊಂದಕ್ಕೆ ಆಗಸ್ಟ್ 22ರಂದು ಸೋಂಕು ಕಾಣಿಸಿಕೊಂಡಿತ್ತು.ಬಳಿಕ ಉಳಿದ ಸಫಾರಿ ಹಾಗೂ ಝೂನಲ್ಲಿನ ಚಿರತೆ ಮರಿಗಳಿಗೂ ಮಾರಕ ರೋಗ ಕಾಣಿಸಿಕೊಂಡ ಹತ್ತೇ ದಿನದಲ್ಲಿ ಏಳು ಚಿರತೆಗಳು ಮೃತಪಟ್ಟಿವೆ. ರೋಗ ಕಾಣಿಸಿಕೊಳ್ಳುತ್ತಿದ್ದಂತೆ ರಕ್ತ ವಾಂತಿ ಹಾಗೂ ಭೇದಿಯಾಗಿ ಚಿರತೆ ಮರಿಗಳು ಮೃತಪಟ್ಟಿರುವುದು ತಿಳಿದು ಬಂದಿದೆ.
ಸಾಮಾನ್ಯವಾಗಿ ಚಿರತೆ ಮರಿಗಳಿಗೆ ಒಂದು ವರ್ಷದ ಒಳಗೆ ಯಾವುದೇ ವ್ಯಾಕ್ಸಿನ್ ನೀಡುವುದಿಲ್ಲ. ಇದರಿಂದಾಗಿ ಈ ಮಾರಕ ರೋಗ ಮರಿಗಳ ಮೇಲೆ ಬೇಗ ಪ್ರಭಾವ ಬೀರಿದೆ. ಚಿರತೆ ಮರಿಗಳು ಮಾರಕ ವೈರಸ್ ಗೆ ಬಲಿಯಾಗುತ್ತಿದ್ದಂತೆ ಪ್ರಾಣಿ ಪಾಲಕರನ್ನು ಕೂಡ ಪ್ರತ್ಯೇಕವಾಗಿ ಇರುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ.

ಇನ್ನು ಇದೀಗ ಬನ್ನೇರುಘಟ್ಟದಲ್ಲಿ ಜಿಂಕೆ ಮರಿಗಳ ಮಾರಣಹೋಮ ಆರಂಭವಾಗಿದೆ. 37 ಜಿಂಕೆಗಳನ್ನು ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಬೆಂಗಳೂರು ಸೆಂಟ್ ಜಾನ್ಸ್ ಆಸ್ಪತ್ರೆಯ ಉದ್ಯಾನವನದಲ್ಲಿದ್ದ 37 ಜಿಂಕೆಗಳನ್ನು ತರಲಾಗಿತ್ತು. ಆದರೆ ಈಗ ನಾನಾ ಕಾರಣದಿಂದಾಗಿ 13 ಜಿಂಕೆಗಳು ಮೃತಪಟ್ಟಿವೆ. ಹತ್ತು ದಿನಗಳ ಕ್ವಾರೆಂಟೈನ್ ಬಳಿಕ ಸಫಾರಿಗೆ ಬಿಡಲಾಗಿತ್ತು. ಹಿಂಡುಗಳ ಕಾದಾಟ ಹಾಗೂ ಜಂತುಹುಳು ಸಮಸ್ಯೆಯಿಂದ ಜಿಂಕೆಗಳು ಮೃತಪಡುತ್ತಿವೆ. ಕೆಲ ಜಿಂಕೆಗಳು ಹೃದಯಾಘಾತದಿಂದ ಮರಣ ಹೊಂದುತ್ತಿವೆ. ಇದುವರೆಗೂ 13 ಜಿಂಕೆಗಳು ಪ್ರಾಣ ಬಿಟ್ಟಿವೆ.
ಒಟ್ಟಿನಲ್ಲಿ ನೂರಾರು ಪ್ರಭೇದದ ಪ್ರಾಣಿ ಪಕ್ಷಿಗಳಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಇದೀಗ ಮಾರಕ ವೈರಸ್ ಸೋಂಕಿನಿಂದ ಚಿರತೆಗಳ ಸರಣಿ ಸಾವು ಹಾಗೂ ಜಿಂಕೆಗಳ ಸಾವಿನಿಂದ ಸೂತಕದ ಛಾಯೆ ಆವರಿಸಿದ್ದು, ಆತಂಕ ಕೂಡ ಹೆಚ್ಚಾಗಿದೆ.












Click it and Unblock the Notifications