ಅಜ್ಜನ ಕೈ ಜಾರಿ 2ನೇ ಮಹಡಿಯಿಂದ ಬಿದ್ದು 6 ತಿಂಗಳ ಹಸುಗೂಸು ಸಾವು
ಬೆಂಗಳೂರು, ಏಪ್ರಿಲ್ 11: ತಾತನ ಕೈ ಜಾರಿ ಬಿದ್ದು 6 ತಿಂಗಳ ಹಸುಗೂಸು ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಸುಬ್ರಹ್ಮಣ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮಗು ಎರಡನೇ ಮಹಡಿಯಿಂದ ಬಿದ್ದು ಮೃತಪಟ್ಟಿದೆ.
ಬೆಳಗಾವಿಯಲ್ಲಿ ಹಸುಳೆಯನ್ನು ದೇವಸ್ಥಾನದಲ್ಲಿ ಎಸೆದ ಪಾಪಿಗಳು
ಮಾರುತಿ ನಗರ ನಿವಾಸಿ ವಿನಯ್ ಹಾಗೂ ಪ್ರಿಯಾಂಕಾ ದಂಪತಿಯ ಪುತ್ರಿ ಅನ್ವಿ ಮೃತಪಟ್ಟ ಕಂದಮ್ಮ. ದಂಪತಿ ಶುಕ್ರವಾರ ಬೆಳಗ್ಗೆ 9 ಗಂಟೆಗೆ ಮನೆ ಸ್ವಚ್ಛ ಮಾಡುತ್ತಿದ್ದರು.
ಈ ಸಂದರ್ಭದಲ್ಲಿ ವಿನಯ್ ಅವರು ಮಗುವನ್ನು ತಂದೆ ಕೈಗೆ ನೀಡಿದ್ದರು. ಮೊದಲ ಮಹಡಿಯಲ್ಲಿ ವಿನಯ್ ಅವರ ಮನೆ ಇದ್ದು, 70 ವರ್ಷದ ವಿನಯ್ ಅವರ ತಂದೆ ಎರಡನೇ ಮಹಡಿಗೆ ಕರೆದೊಯ್ಯಲು ಮೆಟ್ಟಿಲು ಹತ್ತುವಾಗ ಕಾಲು ಜಾರಿದ್ದಾರೆ. ಆಗ ಆಕಸ್ಮಿಕವಾಗಿ ಕೈಯಲ್ಲಿದ್ದ ಮಗು ಎರಡನೇ ಅಂತಸ್ತಿನಿಂದ ಕೆಳಗೆ ಬಿದ್ದಿದೆ.
ಕೂಡಲೇ ದಂಪತಿ ಮಗುವನ್ನು ಮಲ್ಲೇಶ್ವರದ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಐಸಿಯುವಿಲ್ಲದ ಕಾರಣ ಬೇರೊಂದು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಮಗು ಕೊನೆಯುಸಿರೆಳೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.