ರಜೆಗೆ ಬೆಂಗಳೂರು ಬಿಟ್ಟು ಹೋಗ್ತಿರಾ, ಪೊಲೀಸರಿಗೆ ತಿಳಿಸಿ

ದಸರಾ, ಗಣೇಶ ಚತುರ್ಥಿ ಮುಂತಾದ ಸಾಲು ರಜೆಗಳ ಸಂದರ್ಭದಲ್ಲಿ ನಗರದಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚಾಗಿ ನಡೆದಿದ್ದವು. ಅದನ್ನು ತಪ್ಪಿಸಲು ಚಿಂತನೆ ನಡೆಸಿರುವ ಪೊಲೀಸರು, ಮೂರು ದಿನಕ್ಕಿಂತ ಹೆಚ್ಚು ಮನೆ ಬಿಟ್ಟು ತೆರಳುವ ಸಾರ್ವಜನಿಕರು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.
ರಜೆಯ ವೇಳೆಯಲ್ಲಿ ನಗರದಲ್ಲಿ ಭದ್ರತಾ ವ್ಯವಸ್ಥೆ ನೋಡಿಕೊಳ್ಳಲು ಪೊಲೀಸರ ಜೊತೆಗೆ ಗೃಹ ರಕ್ಷಕರನ್ನು ಬಳಸಿಕೊಳ್ಳಲು ನಗರ ಪೊಲೀಸರು ತೀರ್ಮಾನಿಸಿದ್ದಾರೆ. 500 ಹೋಂಗಾರ್ಡ್ ಗಳು ಪೊಲೀಸರೊಂದಿಗೆ ನಗರದ ಭದ್ರತೆಯನ್ನು ನೋಡಿಕೊಳ್ಳಲು ಸಹಕಾರ ನೀಡಲಿದ್ದಾರೆ. ಪ್ರತಿ ಬಡವಾಣೆಯಲ್ಲಿ ಗಸ್ತು ತಿರುಗುವ ಪೊಲೀಸರು ಮತ್ತು ಹೋಂಗಾರ್ಡ್ ಗಳು ಬೀಗ ಹಾಕಿದ ಮನೆಯ ಭದ್ರತೆ ನೋಡಿಕೊಳ್ಳುತ್ತಾರೆ.
ಪ್ರವಾಸದ ಬಗ್ಗೆ ಮಾಹಿತಿ ನೀಡಿದ ಸಾರ್ವಜನಿಕರ ಮನೆಗೆ ಪೊಲೀಸರು ಬೀಟ್ ಬುಕ್ ನೀಡಲಿದ್ದಾರೆ. ಆ ಬಡಾವಣೆಯಲ್ಲಿ ಬೀಟ್ ನಡೆಸುವ ಪೊಲೀಸರು ಅಥವ ಗೃಹ ರಕ್ಷಕ ಸಿಬ್ಬಂದಿ ಮನೆಗೆ ಭೇಟಿ ನೀಡಿ ಸಹಿ ಮಾಡಲಿದ್ದಾರೆ. ಬೀಗ ಹಾಕಿದ ಮನೆಗಳಿಗೆ ಸಿಬ್ಬಂದಿ ದಿನಕ್ಕೆ ಮೂರು ಬಾರಿ ಭೇಟಿ ನೀಡಿ, ಪರಿಶೀಲನೆ ನಡೆಸಲಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಕಮಲ್ ಪಂಥ್, ಪೊಲೀಸ್, ಗೃಹ ರಕ್ಷಕ ಸಿಬ್ಭಂದಿ ಮಾತ್ರವಲ್ಲದೇ ಪೊಲೀಸ್ ಸಿಬ್ಬಂದಿಗಳು ಮಫ್ತಿಯಲ್ಲಿಯೂ ನಗರದ ವಿವಿಧ ಬಡಾವಣೆಯಲ್ಲಿ ಭದ್ರತೆಯ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಹೆಚ್ಚು ಜನರ ಸಂಚಾರವಿರುದ ಮಾರುಕಟ್ಟೆ, ಬಸ್ ನಿಲ್ದಾಣದಲ್ಲೂ ಭದ್ರತೆ ಹೆಚ್ಚಿಸಲು ಸೂಚನೆ ನೀಡಲಾಗಿದೆ ಎಂದು ಕಮಲ್ ಪಂಥ್ ಮಾಹಿತಿ ನೀಡಿದ್ದಾರೆ.
ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಪೊಲೀಸ್ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಆದರೆ, ಸಾರ್ವಜನಿಕರು ಇಲಾಖೆಯೊಂದಿಗೆ ಸಹಕಾರ ನೀಡಿದರೆ ಮಾತ್ರ ಅಪರಾಧ ಚಟುವಟಿಕೆ ನಿಯಂತ್ರಣ ಸಾಧ್ಯ. ಆದ್ದರಿಂದ ನಿಮ್ಮ ಪ್ರವಾಸದ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದು ಕಮಲ್ ಪಂಥ್ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ರಜೆಯ ಪಟ್ಟಿ : ನ.1 ರಿಂದ 4 ರವರೆಗೆ ರಾಜ್ಯೋತ್ಸವ, ಶನಿವಾರ, ಭಾನುವಾರ, ದೀಪಾವಳಿ ಸೇರಿದಂತೆ ಸಾಲು-ಸಾಲು ರಜೆಗಳ ಹಿನ್ನೆಲೆಯಲ್ಲಿ ಈ ನಾಲ್ಕು ದಿನಗಳ ಮಟ್ಟಿಗೆ ಬೆಂಗಳೂರು ಖಾಲಿ ಆಗಲಿದೆ. ಆದ್ದರಿಂದ, ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿ, ಹತ್ತಿರದ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ. (2014ರ ಸರ್ಕಾರಿ ರಜೆ ಪಟ್ಟಿ)












Click it and Unblock the Notifications