'ದುಬಾರಿ ಬೆಲೆಗೆ ನೀರಿನ ಬಾಟಲ್ ಮಾರಿದರೆ 6 ತಿಂಗಳು ಜೈಲು'
ಬೆಂಗಳೂರು, ಮೇ 04 : ಕುಡಿಯುವ ನೀರಿನ ಬಾಟಲ್ ಗೆ ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರುತ್ತಿರುವ ಮಲ್ಟಿಪ್ಲೆಕ್ಸ್ ಮತ್ತು ವಿವಿಧ ಮಾಲ್ ಗಳಿಗೆ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕುಡಿಯುವ ನೀರನ್ನು ದುಬಾರಿ ಬೆಲೆಗೆ ಮಾರುವುದು ಗಂಭೀರ ಅಪರಾಧ. ಮೊದಲ ಬಾರಿ ತಪ್ಪು ಮಾಡಿದರೆ 2,000 ರು. ದಂಡ. ಪುನರಾವರ್ತನೆ ಮಾಡಿದರೆ 6 ತಿಂಗಳು ಜೈಲು ಶಿಕ್ಷೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.[ಮಂತ್ರಿ ಮಾಲ್, ಓರೆಯಾನ್ ಮಾಲ್, ಸಿಗ್ಮಾ ಮಾಲ್ ಮೇಲೆ ದಾಳಿ]

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 188 ಕಡೆ ದಾಳಿ ನಡೆಸಿ, 46 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದರು.
20 ರು. ಬೆಲೆಯ ಒಂದು ಲೀಟರ್ ನೀರಿನ ಬಾಟಲಿಯನ್ನು 50 ರಿಂದ 100 ರು. ಬೆಲೆಗೆ ಮಾರುತ್ತಿರುವ ಬಗ್ಗೆ ದೂರು ಬಂದಿತ್ತು. ಬೆಂಗಳೂರು ನಗರದಲ್ಲಿ 8 ಮತ್ತು ರಾಜ್ಯದ ವಿವಿಧೆಡೆ 39 ತಂಡಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು ಎಂದರು.
ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಮಳಿಗೆಗಳ ಮೇಲೂ ದಾಳಿ ನಡೆಸಲಾಗಿತ್ತು. ಮುಂದಿನ ದಿನಗಳಲ್ಲಿ ಪಂಚತಾರಾ ಮತ್ತು ಐಷಾರಾಮಿ ಹೋಟೆಲ್ ಗಳ ಮೇಲೂ ದಾಳಿ ನಡೆಯಲಿದೆ ಎಂದು ಖಾದರ್ ಎಚ್ಚರಿಕೆ ನೀಡಿದರು.












Click it and Unblock the Notifications