ಬೆಂಗಳೂರಿನಲ್ಲಿ ಕ್ವಾರೆಂಟೈನ್ ಗೆ ಒಪ್ಪದ 45 ಮಂದಿ ದೆಹಲಿಗೆ ವಾಪಸ್!
ಬೆಂಗಳೂರು, ಮೇ.14: ಕೊರೊನಾ ವೈರಸ್ ಮತ್ತು ಭಾರತ ಲಾಕ್ ಡೌನ್ ನಡುವೆ ಸಂಕಷ್ಟಕ್ಕೆ ಸಿಲುಕಿದ ವಲಸೆ ಕಾರ್ಮಿಕರನ್ನು ತವರಿಗೆ ಕರೆಸಿಕೊಳ್ಳಲು ಭಾರತೀಯ ರೈಲ್ವೆ ಶ್ರಮಿಕ್ ರೈಲುಗಳ ವ್ಯವಸ್ಥೆ ಕಲ್ಪಿಸಿದೆ. ಹೀಗೆ ಶ್ರಮಿಕ್ ವಿಶೇಷ ರೈಲಿನಲ್ಲಿ ನವದೆಹಲಿಯಿಂದ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ 45 ಮಂದಿ ತಗಾದೆ ತೆಗೆದಿದ್ದಾರೆ.
ಕೇಂದ್ರ ಸರ್ಕಾರದ ನಿಯಮದಂತೆ ವಲಸೆ ಕಾರ್ಮಿಕರನ್ನು ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರೆಂಟೈನ್ ನಲ್ಲಿ ಇರಿಸಬೇಕು. ವೈದ್ಯಕೀಯ ತಪಾಸಣೆ ಬಳಿಕ ಕ್ವಾರೆಂಟೈನ್ ನಲ್ಲಿ ಇರುವಂತೆ ಬಿಬಿಎಂಪಿ ಅಧಿಕಾರಿಗಳು ಸೂಚಿಸುತ್ತಿದ್ದಂತೆ ಪ್ರತಿಭಟನೆ ನಡೆಸಿದ್ದಾರೆ.
ರಾಜ್ಯಕ್ಕೆ ವಾಪಸ್ ಆದ ಪ್ರಯಾಣಿಕರು ರೈಲ್ವೆ ನಿಲ್ದಾಣದ ಬಳಿಯೇ ಪ್ರತಿಭಟನೆ ನಡೆಸಿದ್ದು, ನಮಗೆ ಕ್ವಾರೆಂಟೈನ್ ನಲ್ಲಿ ಇರಲು ಇಷ್ಟವಿಲ್ಲ. ನಾವು ನವದೆಹಲಿಗೆ ವಾಪಸ್ ಹೋಗುತ್ತೇವೆ. ಅದಕ್ಕೆ ವ್ಯವಸ್ಥೆ ಕಲ್ಪಿಸಿ ಎಂದು ರೈಲ್ವೆ ಇಲಾಖೆ ಡಿಜಿಪಿ ಡಿ.ರೂಪಾ ಅವರಿಗೆ ಮನವಿ ಮಾಡಿಕೊಂಡಿದ್ದರು.

ನವದೆಹಲಿಗೆ ವಾಪಸ್ ಹೊರಟ ಪ್ರಯಾಣಿಕರು:
ರಾಜ್ಯದಲ್ಲಿ ಕ್ವಾರೆಂಟೈನ್ ಗೆ ಒಳಗಾಗಲು ವಿರೋಧಿಸಿ 45 ಪ್ರಯಾಣಿಕರು ತಮ್ಮನ್ನು ವಾಪಸ್ ಕಳುಹಿಸುವಂತೆ ಮನವಿ ಮಾಡಿದ್ದರು. ಈ ಬಗ್ಗೆ ರೈಲ್ವೆ ಇಲಾಖೆ ಡಿಜಿಪಿ ಡಿ.ರೂಪಾ ನೈಋತ್ಯ ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಪ್ರಯಾಣಿಕರ ಮನವಿಗೆ ಸ್ಪಂದಿಸಿದ ಅಧಿಕಾರಿಗಳು 45 ಮಂದಿಯನ್ನು ನವದೆಹಲಿಗೆ ವಾಪಸ್ ಕಳುಹಿಸಲು ಅನುಮತಿ ನೀಡಿದ್ದಾರೆ. ಹೀಗೆ ಅನುಮತಿ ಸಿಕ್ಕಿದ್ದೇ ತಡ, ರಾಜಧಾನಿ ನವದೆಹಲಿಗೆ ಹೊರಟಿದ್ದ ವಿಶೇಷ ರೈಲಿನಲ್ಲಿ 45 ಮಂದಿ ಪ್ರಯಾಣಿಕರು ವಾಪಸ್ ಹೋಗಿದ್ದಾರೆ.












Click it and Unblock the Notifications