ಬೆಂಗಳೂರಿನ ಈ ಕಂಟೇನ್ಮೆಂಟ್ ಝೋನ್ಗಳ ಬಗ್ಗೆ ಎಚ್ಚರವಿರಲಿ
ಬೆಂಗಳೂರು, ಮಾರ್ಚ್ 22: ಕರ್ನಾಟಕದ ಮಟ್ಟಿಗೆ ಕೊರೊನಾವೈರಸ್ 2ನೇ ಅಲೆಯಿಂದ ಬೆಂಗಳೂರು ನಗರ ಹೆಚ್ಚು ಅಪಾಯವನ್ನು ಎದುರಿಸುತ್ತಿದೆ. ನಗರದಲ್ಲಿ ಕಳೆದ ಎರಡು ದಿನಗಳಲ್ಲೇ ಮೂರು ಹೊಸ ಕಂಟೆನ್ಮೆಂಟ್ ಝೋನ್ಗಳನ್ನು ಗುರುತಿಸಲಾಗಿದೆ.
Recommended Video
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಕೊರೊನಾವೈರಸ್ ಶಿಷ್ಟಾಚಾರದ ಪ್ರಕಾರ, ಶುಕ್ರವಾರ ಎರಡು ಹೊಸ ಕಂಟೇನ್ಮೆಂಟ್ ಝೋನ್ಗಳನ್ನು ಗುರುತಿಸಲಾಗಿದೆ. ಈ ಪೈಕಿ ಪಶ್ಚಿಮ ವಲಯದ ವೈಯಾಲಿಕಾವಲ್ ಪ್ರದೇಶದಲ್ಲಿ 5 ಪ್ರಕರಣಗಳು ಪತ್ತೆಯಾಗಿವೆ. ನಗರದ ಪೂರ್ವ ವಲಯದಲ್ಲಿರುವ ಸ್ಪಾಂಡಿಕ್ಸ್ ಅಪಾರ್ಟಮೆಂಟ್ ಅಲ್ಲಿ ಏಳು ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ.
ಕೊರೊನಾ ಎರಡನೇ ಅಲೆಯಿಂದ ತಪ್ಪಿಸಿಕೊಳ್ಳಲು ನೀವು ಮಾಡಬೇಕಾಗಿದ್ದೇನು?
ಶನಿವಾರ ದಾಸರಹಳ್ಳಿ ವಲಯದ ಶೋಭಾ ಅಪಾರ್ಟಮೆಂಟ್ ಅನ್ನು ಕಂಟೇನ್ಮೆಂಟ್ ಝೋನ್ ಎಂದು ಬಿಬಿಎಂಪಿ ಗುರುತಿಸಿದೆ. ಬೆಂಗಳೂರು ನಗರದಲ್ಲಿ ಒಟ್ಟು ಕಂಟೇನ್ಮಂಟ್ ಝೋನ್ಗಳ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಕೊರೊನಾವೈರಸ್ ಕಂಟೇನ್ಮೆಂಟ್ ಝೋನ್ ಮತ್ತು ಕೊವಿಡ್-19 ಎರಡನೇ ಅಲೆಯ ಕುರಿತು ಒಂದು ವರದಿ ಇಲ್ಲಿದೆ.
ಸಿಲಿಕಾನ್ ಸಿಟಿಯಲ್ಲಿ ಕೊರೊನಾವೈರಸ್ ಅಪಾಯ
ಕೊರೊನಾವೈರಸ್ ಸೋಂಕಿನ 2ನೇ ಅಲೆಯಿಂದ ಬೆಂಗಳೂರಿನಲ್ಲಿ ಹೆಚ್ಚಿನ ಅಪಾಯ ಎದುರಾಗಿದೆ. ಕಳೆದ ಒಂದು ವಾರದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ ಕ್ರಮೇಣ ಏರಿಕೆಯಾಗಿದೆ. ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಏರುಮುಖವಾಗಿ ಸಾಗಿದೆ. ಕಳೆದ ಮಂಗಳವಾರ ಒಂದೇ ದಿನ 710 ಮಂದಿಗೆ ಕೊವಿಡ್19 ಸೋಂಕು ತಗುಲಿತ್ತು. ಬುಧವಾರ 786, ಗುರುವಾರ 925, ಶುಕ್ರವಾರ 1037 ಮತ್ತು ಶನಿವಾರ 1186 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.
ಬೆಂಗಳೂರಿನಲ್ಲಿ ಮೊದಲ ಕಂಟೇನ್ಮೆಂಟ್ ಝೋನ್ ಪತ್ತೆ
ಸಿಲಿಕಾನ್ ಸಿಟಿಯಲ್ಲಿ ದಿಢೀರ್ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಗಮಿಸಿದ ಬಿಬಿಎಂಪಿ ಮೊದಲ ಕಂಟೇನ್ಮೆಂಟ್ ಝೋನ್ನ್ನು ಗುರುತಿಸಿತು. ವಿದ್ಯಾರಣ್ಯಪುರದ 9ನೇ ವಾರ್ಡ್ ಗೋವರ್ಧನ್ ರೆಸಿಡೆನ್ಸಿಯ ನಿವಾಸಿಯಲ್ಲಿ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿತ್ತು.
ಕೇರಳದಿಂದ ಬಂತು ಕೊರೊನಾ ಸೋಂಕಿನ ಅಪಾಯ
ಮಾರ್ಚ್ 1ರಂದು ಕೇರಳದಿಂದ ಬೆಂಗಳೂರಿಗೆ ವಾಪಸ್ಸಾದ ವ್ಯಕ್ತಿಯಲ್ಲಿ ಕೊರೊನಾವೈರಸ್ ಸೋಂಕು ತಗುಲಿರುವುದು ಮಾರ್ಚ್ 8ರಂದು ದೃಢಪಟ್ಟಿತ್ತು. ಗೋವರ್ಧನ್ ರೆಸಿಡೆನ್ಸಿ ಕಟ್ಟಡದ ಏಳು ಮಂದಿ ನಿವಾಸಿಗಳಿಗೆ ಕೊವಿಡ್-19 ಸೋಂಕು ತಗುಲಿದ್ದು, ತದನಂತರದಲ್ಲಿ ಬೆಳಕಿಗೆ ಬಂದಿತ್ತು. ಕ್ವಾರೆಂಟೈನ್ ನಿಯಮಗಳನ್ನು ಉಲ್ಲಂಘಿಸಿದ ಒಬ್ಬ ಸೋಂಕಿತನು ಇಸ್ಕಾನ್ ದೇವಸ್ಥಾನಕ್ಕೆ ಹೋಗಿ ಬಂದಿದ್ದರು ಎಂದು ತಿಳಿದು ಬಂದಿದೆ.
ಸಮುದಾಯಕ್ಕೆ ಹರಡುತ್ತಿರುವ ಕೊವಿಡ್-19 ಸೋಂಕು
ಬೆಂಗಳೂರು ವಿದ್ಯಾರಣ್ಯಪುರದ ಸುತ್ತಮುತ್ತಲಿನ ಪ್ರದೇಶದಲ್ಲಿ ವಿವಾಹ ಕಾರ್ಯಕ್ರಮಕ್ಕೆ ತೆರಳಿದ ಒಂದೇ ಕುಟುಂಬದ ಸದಸ್ಯರಲ್ಲಿ ಕೊವಿಡ್19 ಸೋಂಕು ಪತ್ತೆಯಾಗಿತ್ತು. ಗುರುವಾರ ಚಿಕ್ಕಬೊಮ್ಮಸಂದ್ರ ಮತ್ತು ಯಲಹಂಕದಲ್ಲಿ ನಾಲ್ವರಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು, ಬುಧವಾರ ಮತ್ತಿಬ್ಬರಿಗೆ ಸೋಂಕು ದೃಢಪಟ್ಟಿತ್ತು. ಕಳೆದ 24 ಗಂಟೆಗಳಲ್ಲಿ ಬೆಂಗಳೂರು ನಗರವೊಂದರಲ್ಲೇ 1039 ಹೊಸ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದವು.
ರಾಜ್ಯದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳು
ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ 1715 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 970202ಕ್ಕೆ ಏರಿಕೆಯಾಗಿದೆ. ಒಂದು ದಿನದಲ್ಲಿ ಮಹಾಮಾರಿಗೆ ಇಬ್ಬರು ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 12434ಕ್ಕೆ ಏರಿಕೆಯಾಗಿದೆ. 24 ಗಂಟೆಗಳಲ್ಲಿ 1048 ಸೋಂಕಿತರು ಗುಣಮುಖರಾಗಿದ್ದು, ಈವರೆಗೂ 944256 ಜನರು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 13493ಕ್ಕೆ ಏರಿಕೆಯಾಗಿದೆ.