Breaking; ಬೆಂಗಳೂರು; ಗುಂಡು ಹಾರಿಸಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ
ಬೆಂಗಳೂರು, ಸೆಪ್ಟೆಂಬರ್ 17; ದ್ವಿತೀಯ ಪಿಯುಸಿ ವಿದ್ಯಾರ್ಥಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಂಜಯನಗರ ಮುಖ್ಯ ಬಸ್ ನಿಲ್ದಾಣದ ಸಮೀಪ ಶವ ಪತ್ತೆಯಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.
ಮೃತಪಟ್ಟ ವಿದ್ಯಾರ್ಥಿಯನ್ನು ರಾಹುಲ್ ಭಂಡಾರಿ (17) ಎಂದು ಗುರುತಿಸಲಾಗಿದೆ. ರಾಹುಲ್ ಮಿಲಿಟರಿ ಶಾಲೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದಾನೆ. ಶುಕ್ರವಾರ ಮುಂಜಾನೆ 5 ಗಂಟೆ ಸುಮಾರಿಗೆ ರಾಹುಲ್ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಪಿಸ್ತೂಲ್ 3.2ನಿಂದ ತಲೆಗೆ ಗುಂಡು ಹಾರಿಸಿಕೊಂಡು ರಾಹುಲ್ ಭಂಡಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಂಜಯನಗರ ಮುಖ್ಯ ಬಸ್ ನಿಲ್ದಾಣದ ಸಮೀಪ ಶವ ಪತ್ತೆಯಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಪೋಷಕರಿಗೆ ಸಹ ಘಟನೆ ಬಗ್ಗೆ ಮಾಹಿತಿ ಕೊಡಲಾಗಿದೆ.

ರಾಹುಲ್ ಭಂಡಾರಿ ಜೇಬಿನಲ್ಲಿ ಮೊಬೈಲ್ ಪತ್ತೆಯಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಬೇರೆ ಯಾರಾದರೂ ರಾಹುಲ್ ತಲೆಗೆ ಗುಂಡು ಹಾರಿಸಿದ್ದಾರಾ? ಎಂಬ ಅನುಮಾನ ಸಹ ವ್ಯಕ್ತವಾಗಿದ್ದು, ಸದಾಶಿವನಗರ ಠಾಣೆ ಪೊಲೀಸರು ತನಿಖೆ ನಡೆಸಲಿದ್ದಾರೆ.
ರಾತ್ರಿ ಊಟ ಮಾಡಿ ಮಲಗಿದ್ದ ರಾಹುಲ್ ಭಂಡಾರಿ ಶುಕ್ರವಾರ ಮುಂಜಾನೆ 4 ಗಂಟೆ ವೇಳೆಗೆ ಮನೆಯಿಂದ ಹೊರ ಬಂದಿದ್ದಾನೆ. ಪ್ರತಿದಿನ 3-4 ಗಂಟೆಗೆ ಎದ್ದು ಆತ ಓದಿಕೊಳ್ಳುತ್ತಿದ್ದ. ಕೆಲವು ದಿನ ವಾಕ್ ಸಹ ಹೋಗುತ್ತಿದ್ದ
ಮುಂಜಾನೆ ನಿದ್ದೆ ಇಂದ ಎದ್ದ ಪೋಷಕರು ರೂಂನಲ್ಲಿ ರಾಹುಲ್ ಕಾಣದಿದ್ದಾಗ ಕರೆ ಮಾಡಿದ್ದಾರೆ. ಆದರೆ ಪೋನ್ ಕರೆ ಸ್ವೀಕಾರ ಮಾಡಿಲ್ಲ. ಮುಂಜಾನೆ 5 ಗಂಟೆ ಸುಮಾರಿಗೆ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ರಾಹುಲ್ ಭಂಡಾರಿ ತಲೆಯ ಎಡಭಾಗಕ್ಕೆ ಗುಂಡು ಹೊಕ್ಕಿದೆ. ರಾಹುಲ್ ಶವ ನೋಡಿದ ಪೊಲೀಸರು ಪೋಷಕರಿಂದ ಬರುತ್ತಿದ್ದ ಕರೆ ಗಮನಿಸಿ ಅವರಿಗೆ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ಸೇರಿದಂತೆ ಹಲವು ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಪೋಷಕರ ಅಕ್ರಂದನ ಮುಗಿಲು ಮುಟ್ಟಿದೆ. ರಾಹುಲ್ ಭಂಡಾರಿ ತಂದೆ ಸೇನೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ.
ಡಿಸಿಪಿ ಅನುಚೇತ್ ಹೇಳಿಕೆ; ರಾಹುಲ್ ಭಂಡಾರಿ ಸಾವಿನ ಕುರಿತು ಡಿಸಿಪಿ ಅನುಚೇತ್ ಮಾಧ್ಯಮಗಳ ಜೊತೆ ಮಾತನಾಡಿದರು. "ಸದಾಶಿನಗರ ಠಾಣೆ ವ್ಯಾಪ್ತಿಯಲ್ಲಿ 17 ವರ್ಷದ ಯುವಕ ತಲೆಗೆ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ. ಸ್ಥಳದಲ್ಲಿ ಪರಿಶೀಲನೆ ನಡೆಸಿದಾಗ ಒಂದು ಸಿಂಗಲ್ ಬುಲೆಟ್ ತಲೆಯ ಭಾಗದಿಂದ ನುಗ್ಗಿ ಎಡಭಾಗದಿಂದ ಹೊರಬಂದಿದೆ" ಎಂದರು.
"ಇಂಡಿಯನ್ ಫ್ಯಾಕ್ಟರಿ ಮೇಡ್ ಪಿಸ್ತೂಲ್ ನಮಗೆ ಸಿಕ್ಕಿದೆ. ಆ ಪಿಸ್ತೂಲ್ಗೆ ರಾಹುಲ್ ತಂದೆಯ ಪರವಾನಗಿ ಇದೆ ಎಂದು ತಿಳಿದುಬಂದಿದೆ. ರಾಹುಲ್ ತಂದೆ-ತಾಯಿ, ಅಕ್ಕನ ಜೊತೆ ಮನೆಯಲ್ಲಿ ಇದ್ದ. ಅವನು ಸ್ವಯಂ ಪ್ರೇರಣೆಯಿಂದ ಈ ಕೃತ್ಯ ಮಾಡಿಕೊಂಡಿದ್ದಾನೆ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ" ಎಂದು ಅನುಚೇತ್ ಹೇಳಿದರು.
"ರಾಹುಲ್ ತಂದೆ 2017ರಲ್ಲಿ ಸೇನೆಯಿಂದ ನಿವೃತ್ತರಾಗುವಾಗ ಪಿಸ್ತೂಲ್ ಪಡೆದುಕೊಂಡಿದ್ದಾರೆ. ಮನೆಯ ಅಲ್ಮೆರಾದಲ್ಲಿ ಪಿಸ್ತೂಲ್ ಇತ್ತು ಎಂದು ಅವರು ಹೇಳಿದ್ದಾರೆ. ಪಿಸ್ತೂಲ್ ಬಳಕೆ ಸಹ ಯುವಕನಿಗೆ ತಿಳಿದಿತ್ತು. ಆ ಬಗ್ಗೆ ತರಬೇತಿ ಸಹ ಪಡೆದಿದ್ದ ಎಂದು ಪೋಷಕರು ಹೇಳಿದ್ದಾರೆ" ಎಂದು ಅನುಚೇತ್ ತಿಳಿಸಿದರು.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications