ವಿಧಾನಸೌಧ ಮುಂದೆ ಗಾಂಧೀಜಿ ಕಂಚಿನ ಪ್ರತಿಮೆ

ಸಂಸತ್ ಭವನದ ಆವರಣದಲ್ಲಿ 11 ಅಡಿ ಎತ್ತರದ ಪ್ರತಿಮೆಯಿದ್ದರೆ ವಿಧಾನಸೌಧದೆದುರು 27 ಅಡಿ ಎತ್ತರದ ಪ್ರತಿಮೆ ತಲೆಯೆತ್ತಲಿದೆ. ಮುಂದಿನ ಅಕ್ಟೋಬರ್ 2ರಂದು ಗಾಂಧಿ ಜಯಂತಿ ದಿನದ ವೇಳೆಗೆ ಲೋಕೋಪಯೋಗಿ ಇಲಾಖೆ (PWD) ಈ ಪ್ರತಿಮೆಯನ್ನು ನಿರ್ಮಿಸಿ ಕೊಡಲಿದೆ. ಆರು ತಿಂಗಳಲ್ಲಿ ಇಡೀ ಯೋಜನೆಯನ್ನು ಪೂರ್ಣಗೊಳಿಸಿಕೊಡುವಂತೆ ಇಲಾಖೆಯು ಶಿಲ್ಪ ಕುಶಲಕರ್ಮಿಗಳಿಗೆ ಸೂಚಿಸಿದೆ.
ವೇದಿಕೆಯನ್ನು ಬಿಟ್ಟು, ಧ್ಯಾನಾಸಕ್ತ ಗಾಂಧೀಜಿ ಪ್ರತಿಮೆಯನ್ನು ನಿರ್ಮಿಸಲಾಗುವುದು. ವಿಧಾನಸೌಧವು ಕಬ್ಬನ್ ಪಾರ್ಕ್ ವ್ಯಾಪ್ತಿಯಲ್ಲಿರುವುದರಿಂದ Karnataka Government Parks (Preservation) Act- 1975ಗೆ ತುಸು ಮಾರ್ಪಾಡು ತಂದು ಕಾಯಂ ಪುತ್ಥಳಿಯನ್ನು ಇಲ್ಲಿ ಸ್ಥಾಪಿಸಲಾಗುವುದು.
ಇದೇ ಪ್ರಮಾಣದ ಪ್ರತಿಮೆಯನ್ನು ತಯಾರಿಸಿಕೊಟ್ಟ, ಅರ್ಹ ಶಿಲ್ಪ ಕುಶಲಕರ್ಮಿಗಳಿಂದ ಇಲಾಖೆಯು ಅರ್ಜಿಯನ್ನು ಆಹ್ವಾನಿಸಿದೆ. ಖರ್ಚು-ವೆಚ್ಚದ ವಿವರವನ್ನೂ ನಮೂದಿಸುವಂತೆ ಸೂಚಿಸಲಾಗಿದೆ. ಗಾಂಧೀಜಿಯವರ ಮಹತ್ವವನ್ನು ಅರಿತು ಇಲಾಖೆಯು ಅಂತಾರಾಷ್ಟ್ರೀಯ ಖ್ಯಾತಿಯ ಕುಶಲಕರ್ಮಿಗಳಿಂದ ಅರ್ಜಿ ಆಹ್ವಾನಿಸಿದೆ.
ವೇದಿಕೆಯನ್ನು (pedestal) ಪ್ರತಿಮೆಯ ಕುಶಲಕರ್ಮಿಗಳೇ ನಿರ್ಮಿಸುವ ಅಗತ್ಯವಿಲ್ಲ. ಆ ಕಾರ್ಯಯೋಜನೆಯನ್ನು ಬೇರೆ ಗುತ್ತಿಗೆದಾರರಿಗೆ ಒಪ್ಪಿಸುವ ಇರಾದೆ ಇಲಾಖೆಯದ್ದಾಗಿದೆ.
ಅಂದಹಾಗೆ ಈ ಹಿಂದೆ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ (2011ರಲ್ಲಿ) ಇಂತಹ ಯೋಜನೆಯ ಪ್ರಸ್ತಾವನೆ ಬಂದಿತ್ತು. 21 ಅಡಿ ಎತ್ತರದ ಪ್ರತಿಮೆ ಮತ್ತು 15 ಅಡಿ ಎತ್ತರದ ವೇದಿಕೆ ನಿರ್ಮಾಣದ ಪ್ರಸ್ತಾವನೆಯಾಗಿತ್ತು. ಆದರೆ ತನ್ನದೇ ಆದ ಸಮಸ್ಯೆಗಳ ಸುಳಿಗೆ ಸಿಲುಕಿದ್ದ ಬಿಜೆಪಿ ಸರಕಾರ ಇದನ್ನು ಕಾರ್ಯಗತಗೊಳಿಸುವಲ್ಲಿ ವಿಫಲವಾಗಿತ್ತು.












Click it and Unblock the Notifications