ಚಾಮರಾಜನಗರದಲ್ಲಿ ನಳಂದ ವಿವಿ ಸ್ಥಾಪನೆಗೆ 25 ಎಕರೆ ಭೂಮಿ
Recommended Video
ಬೆಂಗಳೂರು, ಜನವರಿ 11: ನಳಂದ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಚಾಮರಾಜನಗರದ ಉತ್ತುವಳ್ಳಿ ಗ್ರಾಮದಲ್ಲಿ 25 ಎಕರೆ ಭೂಮಿ ನೀಡಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಕಸಬಾ ಹೋಬಳಿ ಉತ್ತುವಳ್ಳಿ ಗ್ರಾಮದ ಸರ್ವೆ ನಂಬರ್ 117ರಲ್ಲಿ 464 ಎಕರೆ ಜಮೀನು ಇದ್ದು, ಈ ಪೈಕಿ 25 ಎಕರೆ ಗೋಮಾಳ ಭೂಮಿಯನ್ನು ಮಾರ್ಗಸೂಚಿ ದರದ ಶೇ 50ರಷ್ಟು ದರದಲ್ಲಿ ಮಂಜೂರು ಮಾಡಲು ನಿರ್ಧರಿಸಲಾಗಿದೆ, ಇಲ್ಲಿ ಇಂಟರ್ ನ್ಯಾಷನಲ್ ಬುದ್ಧಿಸ್ಟ್ ಮಾಂಕ್ಸ್ ಚಾರಿಟೆಬಲ್ ಟ್ರಸ್ಟ್ ನಳಂದ ವಿವಿ ಸ್ಥಾಪಿಸಲಿದೆ ಎಂದರು.[ಭೂ ಕಬಳಿಕೆ ವಿಚಾರಣೆಗೆ ಆ.31ರಂದು ಕೋರ್ಟ್ ಆರಂಭ]
ಇನ್ನು 550 ಪಶುವೈದ್ಯಾಧಿಕಾರಿಗಳು,ಪಶು ವೈದ್ಯಕೀಯ ಇಲಾಖೆಯಲ್ಲಿ ಖಾಲಿ ಇರುವ 100 ಬ್ಯಾಕ್ಲಾಗ್ ಹಾಗೂ 450 ವೈದ್ಯಾಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ, ಉಚಿತ ರೋಗ ಪತ್ತೆ ಕೇಂದ್ರಗಳಿಗೆ ₹103.53 ಕೋಟಿ ವೆಚ್ಚದಲ್ಲಿ ಸಿ.ಟಿ ಸ್ಕ್ಯಾನ್, ಎಂ.ಆರ್.ಐ ಸ್ಕ್ಯಾನ್ ಯಂತ್ರ ಖರೀದಿ ಸೇರಿದಂತೆ 33ಕ್ಕೂ ಹೆಚ್ಚು ಯೋಜನೆ, ಕಾರ್ಯಕ್ರಮಗಳಿಗೆ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದರು.[ಸರಕಾರವೇ ಮಾಡಲಿದೆಯಂತೆ ರಿಯಲ್ ಎಸ್ಟೇಟ್ ವ್ಯವಹಾರ]
ಫೆಬ್ರುವರಿ 6 ರಿಂದ 10ರವರೆಗೆ 5 ದಿನ ರಾಜ್ಯ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಮೊದಲ ದಿನ ಉಭಯ ಸದನಗಳ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ವಜುಭಾಯಿ ವಾಲಾ ಭಾಷಣ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.