108 ಸೇವೆಗೆ 248 ಹೊಸ ಆಂಬ್ಯುಲೆನ್ಸ್ ಸೇರ್ಪಡೆ
ಬೆಂಗಳೂರು, ಜೂ. 20 : 108 ತುರ್ತು ಸೇವೆಗಳಿಗೆ ಹೊಸದಾಗಿ 248 ಆಂಬ್ಯುಲೆನ್ಸ್ ಗಳನ್ನು ಸೇರಿಸಲು ಸರ್ಕಾರ ನಿರ್ಧರಿಸಿದೆ. ಕೆಲವು ತಿಂಗಳಿನಲ್ಲಿ ಹೊಸ ವಾಹನಗಳನ್ನು ಖರೀದಿ ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್, ಒಂದು ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ ಪ್ರದೇಶಗಳಿಗೆ ತುರ್ತು ಸೇವೆ ಒದಗಿಸಲು 98 ಆಂಬ್ಯುಲೆನ್ಸ್ ಖರೀದಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ 150 ಆಂಬ್ಯುಲೆನ್ಸ್ ಗಳನ್ನು ನೀಡುವುದಾಗಿ ಭರವಸೆ ನೀಡಿದೆ. ಈ ಆಂಬ್ಯುಲೆನ್ಸ್ ಗಳಲ್ಲಿ ಹಳೆಯದಾಗಿರುವ ಸುಮಾರು 100 ವಾಹನಗಳನ್ನು ಬದಲಾವಣೆ ಮಾಡಲು ನಿರ್ಧರಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಪ್ರತಿ ಜಿಲ್ಲೆಯಲ್ಲಿಯೂ ನಿರ್ವಹಣೆ ಕೇಂದ್ರ : ತುರ್ತು ಕರೆ ಬಂದ 15 ನಿಮಿಷಗಳಲ್ಲಿ ಆಂಬ್ಯುಲೆನ್ಸ್ ಸ್ಥಳಕ್ಕೆ ತೆರಳುವಂತೆ ಸಹಾಯಕವಾಗಲು ಪ್ರತಿ ಜಿಲ್ಲೆಯಲ್ಲಿಯೂ ನಿರ್ವಹಣೆ ಕೇಂದ್ರ ಆರಂಭಿಸುವ ಚಿಂತನೆ ಸರ್ಕಾರದ ಮುಂದಿದೆ. ಕೆಲವು ದಿನಗಳಲ್ಲಿ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು. [ಆಶಾ ಕಾರ್ಯಕರ್ತೆಯರಿಗೆ ಕೈಗೆ ಮೊಬೈಲ್]
ಮಾನಸಿಕ ಕೇಂದ್ರ : ಮಾನಸಿಕ ಅಸ್ವಸ್ಥರಿಗಾಗಿ ಪ್ರತಿ ಜಿಲ್ಲೆಯಲ್ಲಿ ಚಿಕಿತ್ಸಾ ಕೇಂದ್ರ ತೆರೆಯಲು ಸರ್ಕಾರ ನಿರ್ಧರಿಸಿದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ಚಿಕಿತ್ಸಾ ಕೇಂದ್ರಕ್ಕೆ ಓರ್ವ ತಜ್ಞ ವೈದ್ಯ ಸೇರಿ ಅಗತ್ಯ ಸಿಬ್ಬಂದಿ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸಲಾಗುವುದು. ಒಳ ರೋಗಿಯಾಗಿ ಚಿಕಿತ್ಸೆ ಪಡೆಯುವ ವ್ಯವಸ್ಥೆ ಸಹ ಕಲ್ಪಿಸಲಾಗುವುದು ಎಂದರು.












Click it and Unblock the Notifications