ಅದಮ್ಯ ಚೇತನದಿಂದ 166ನೇ ಹಸಿರು ಭಾನುವಾರ ಆಚರಣೆ
ಬೆಂಗಳೂರು, ಮಾರ್ಚ್ 03 : 'ಭಾರತದ ಸಂಸ್ಕೃತಿ ಜಗತ್ತನ್ನೇ ಗೆಲ್ಲುವಂತಹ ಶಕ್ತಿಯನ್ನು ಹೊಂದಿದೆ. ಇಂತಹ ಸಂಸ್ಕೃತಿಯನ್ನು ಬಿಟ್ಟು ಇಂದಿನ ಯುವ ಜನತೆ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನುಸರಿಸುವತ್ತ ಮುಖ ಮಾಡಿರುವುದು ಬಹಳ ವಿಷಾದಕರ' ಎಂದು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ವೀರೇಶಾನಂದ ಸರಸ್ವತಿಗಳು ಹೇಳಿದರು.
ಸಮುಲಕನಾಡು ಸಂಘದ ವತಿಯಿಂದ ಉತ್ತರಹಳ್ಳಿ-ಕೆಂಗೇರಿ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾಗಿರುವ ವೇದ ಬ್ರಹ್ಮಶ್ರೀ ಹೆಗ್ಗನಹಳ್ಳಿ ನಾರಾಯಣ ಶಾಸ್ತ್ರಿ ಮತ್ತು ಶ್ರೀಮತಿ ಗಿರಿಜಾ ಶಾಸ್ತ್ರಿ ಅದ್ವೈತ ಚೇತನ ಉಚಿತ ವಿಧ್ಯಾರ್ಥಿ ನಿಲಯವನ್ನು ಉದ್ಘಾಟಿಸಿ ಹಾಗೂ 166 ನೇ ಹಸಿರು ಭಾನುವಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
'ಭಾರತ ಸಂಸ್ಕೃತಿಯನ್ನು ಜಗತ್ತಿನ ಇತರೇ ದೇಶಗಳು ಬಹಳ ಕಾತುರತೆಯಿಂದ ಗಮನಿಸುತ್ತಿವೆ. ಇದರ ಬಗ್ಗೆ ಬೇರೆ ರಾಷ್ಟ್ರಗಳು ಸಂಶೋಧನೆಯನ್ನೂ ನಡೆಸುತ್ತಿವೆ. ಕೌಟಿಲ್ಯನ ಅರ್ಥಶಾಸ್ತ್ರ ಹಾಗೂ ಭಗವತ್ ಗೀತೆಯ ಬಗ್ಗೆ ಇರುವ ಭಾಷ್ಯಗಳನ್ನು ನಾನು ವಿದೇಶದ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ಮಾಡುತ್ತಿರುವುದನ್ನು ನೋಡಿದ್ದೇನೆ' ಎಂದರು.

ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ಡಾ.ತೇಜಸ್ವಿನಿ ಅನಂತ ಕುಮಾರ್ ಮಾತನಾಡಿ, 'ಅನಂತಕುಮಾರ್ ಅವರು ಹೆಸರುಗಳನ್ನು ಸೂಚಿಸುವುದರಲ್ಲಿ ಸಿದ್ದಹಸ್ತರಾಗಿದ್ದರು. ಅವರೇ ಈ ಅದ್ವೈತ ಚೇತನ ಎನ್ನುವ ಹೆಸರನ್ನೂ ಸೂಚಿಸಿದ್ದರು. ದ್ವಿತೀಯ ಪಿಯೂಸಿ ನಂತರದ ಶಿಕ್ಷಣಕ್ಕೆ ಆಗಮಿಸುವ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿದ್ಯಾರ್ಥಿ ನಿಲಯ ವನ್ನು ನಿರ್ಮಿಸುವುದು ಸಂಘದ ಬಹುದಿನಗಳ ಕನಸಾಗಿತ್ತು' ಎಂದರು
'ಈ ಕನಸು ದಿವಂಗತ ಕೇಂದ್ರ ಸಚಿವರಾದ ಅನಂತ್ ಕುಮಾರ್ ಅವರ ಮೇಲ್ವಿಚಾರಣೆಯಲ್ಲಿ ಪ್ರಾರಂಭಿಸಲಾಗಿತ್ತು. 1995 ರಿಂದ ಪ್ರಾರಂಭವಾಗಿರುವ ಈ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ನಾರಾಯಣ ಶಾಸ್ತ್ರಿಗಳು ಮತ್ತು ಶ್ರೀಮತಿ ಗಿರಿಜಾ ಶಾಸ್ತ್ರಿಗಳ ಭಾಗವಹಿಸಿದ್ದನ್ನು ಅವರು ನೆನೆಪಿಸಿಕೊಂಡರು. ಮುಲಕನಾಡು ಜನಾಂಗದ ಜನಬಳಕೆ ಹಾಗೂ ಸೇವಾ ಮನೋಭಾವವನ್ನು ನಾನು ಹತ್ತಿರದಿಂದ ನೋಡಿದ್ದೇನೆ' ಎಂದರು.
ಬಸವನಗುಡಿ ಶಾಸಕರಾದ ರವಿಸುಬ್ರಮಣ್ಯ ಮಾತನಾಡಿ, 'ವಿದ್ಯಾರ್ಥಿ ನಿಲಯಗಳು ವಿದ್ಯಾರ್ಥಿಗಳಿಗೆ ಬಹಳ ಅನುಕೂಲ ಮಾಡಿಕೊಡುತ್ತವೆ. ಆದರೆ, ವೃದ್ದಾಪ್ಯ ವಸತಿ ಗೃಹಗಳನ್ನು ನಿರ್ಮಿಸುವುದು ಮಾತ್ರಾ ಬಹಳ ತಪ್ಪು' ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಚರಣ್ ಕೋ-ಆಪ್ ಬ್ಯಾಂಕಿನ ಬಿ.ವಿ ದ್ವಾರಕಾನಾಥ್ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲಕನಾಡು ಮಹಾಸಂಘದ ಅಧ್ಯಕ್ಷರಾದ ಎಸ್.ಆರ್ ಕೃಷ್ಣಮೂರ್ತಿಯವರು ವಹಿಸಿದ್ದರು.












Click it and Unblock the Notifications