World Book Of Record ಸೇರಿದ ಕೆಂಪೇಗೌಡರ ಕಂಚಿನ ಪ್ರತಿಮೆ
ಬೆಂಗಳೂರು, ನವೆಂಬರ್ 10; ಬೆಂಗಳೂರಿನ ದೇವನಹಳ್ಳಿಯಲ್ಲಿರುವ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಲೋಕಾರ್ಪಣೆ ಮಾಡಲಿದ್ದಾರೆ.
ಬೆಂಗಳೂರು ನಗರದ ನಿರ್ಮಾತೃ ನಾಡಪ್ರಭು ಕೆಂಪೇಗೌಡರ 'ಪ್ರಗತಿಯ ಪ್ರತಿಮೆ'ಯು ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಸೇರಿದೆ. ಈ ಮೂಲಕ ಲೋಕಾರ್ಪಣೆಗೆ ಮೊದಲೇ ಪ್ರತಿಮೆಗೆ ಹಿರಿಮೆ ಲಭಿಸಿದೆ.
Infographics; 108 ಅಡಿ ಕೆಂಪೇಗೌಡ ಪ್ರತಿಮೆ ವಿಶೇಷತೆಗಳು
ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಮಾಹಿತಿಯಂತೆ ನಗರವನ್ನು ನಿರ್ಮಾಣ ಮಾಡಿದವರ ಮೊದಲ ಹಾಗೂ ಅತ್ಯಂತ ಎತ್ತರದ ಕಂಚಿನ ಪ್ರತಿಮೆ ಇದಾಗಿದೆ. 108 ಅಡಿಯ ಈ ಪ್ರತಿಮೆ ಸಮೀಪವೇ ಕೆಂಪೇಗೌಡ ಥೀಮ್ ಪಾರ್ಕ್ ಸಹ 23 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿದೆ.
ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ: ಆದಿಚುಂದಚನಗಿರಿ ಶ್ರೀಗಳ ನೇತೃತ್ವದಲ್ಲಿ ಒಕ್ಕಲಿಗ ಪ್ರಮುಖರ ಸಭೆ
ಮೋದಿಯಿಂದ ಲೋಕಾರ್ಪಣೆ; ಭಾರತದ ಪ್ರಧಾನಿ ನರೇಂದ್ರ ಮೋದಿ ನವೆಂಬರ್ 11ರ ಶುಕ್ರವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. ನಾಡಪ್ರಭು ಕೆಂಪೇಗೌಡರ 'ಪ್ರಗತಿಯ ಪ್ರತಿಮೆ'ಯನ್ನು ಅವರು ಲೋಕಾರ್ಪಣೆ ಮಾಡಲಿದ್ದಾರೆ.
ಸಂಸತ್ತಿನಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಾಪಿಸುವಂತೆ ಮೋದಿಗೆ ದೇವೇಗೌಡ ಪತ್ರ
ಬೆಂಗಳೂರಿನ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಅನಾವರಣಗೊಳ್ಳಲಿರುವ 108 ಅಡಿ ಎತ್ತರದ ಪ್ರತಿಮೆ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದ್ದಾರೆ.
ನಾಡಪ್ರಭು ಕೆಂಪೇಗೌಡರು ಬೆಂಗಳೂರು ನಗರದ ನಿರ್ಮಾತೃ. ಈ ಪ್ರತಿಮೆಗೆ ಕರ್ನಾಟಕ ಸರ್ಕಾರ ಪ್ರಗತಿಯ ಪ್ರತಿಮೆ ಎಂದು ನಾಮಕರಣ ಮಾಡಿದೆ. ನಗರ ನಿರ್ಮಾತೃವೊಬ್ಬರ ವಿಶ್ವದ ಅತಿ ಎತ್ತರದ ಪ್ರತಿಮೆ ಇದು. ಗುಜರಾತ್ನಲ್ಲಿ ಏಕತಾ ಪ್ರತಿಮೆ ನಿರ್ಮಾಣ ಮಾಡಿದ ರಾಮ್ ಸುತಾರ್ ಕ್ರಿಯೇಷನ್ಸ್ ಈ ಕೆಂಪೇಗೌಡ ಪ್ರತಿಮೆಯ ವಿನ್ಯಾಸ ಹಾಗೂ ನಿರ್ಮಾಣ ಮಾಡಿದ್ದಾರೆ.
ಕೆಂಪೇಗೌಡ ಪ್ರತಿಮೆಯ ಖಡ್ಗ 4 ಸಾವಿರ ಕೆಜಿ ತೂಕವಿದೆ. ಪ್ರತಿಮೆ ನಿರ್ಮಾಣ ಮಾಡಲು 120 ಟನ್ ಉಕ್ಕನ್ನು ಬಳಸಲಾಗಿದೆ. 98 ಟನ್ ಕಂಚು ಬಳಕೆಯಾಗಿದೆ. ಈ ಪ್ರತಿಮೆ ನಿರ್ಮಾಣಕ್ಕೆ ಖರ್ಚಾಗಿರುವ ಒಟ್ಟು ವೆಚ್ಚ 84 ಕೋಟಿ ರೂ..
ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಬೆಂಗಳೂರು ನಗರದ ಅತಿ ಎತ್ತರದ ಪ್ರತಿಮೆಗಳಲ್ಲಿ ಒಂದಾಗಿದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೆಬ್ಬಾಗಿಲಿನಲ್ಲಿಯೇ ಕಂಚಿನ ಪ್ರತಿಮೆ ನಗರಕ್ಕೆ ವಿಮಾನದ ಮೂಲಕ ಆಗಮಿಸುವವರನ್ನು ಸ್ವಾಗತಿಸುತ್ತದೆ.
ರಾಜ್ಯದ ಅತಿ ಎತ್ತರದ ಪ್ರತಿಮೆಗಳು; ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ 108 ಅಡಿ ಎತ್ತರವಿದೆ. ತುಮಕೂರು ಜಿಲ್ಲೆಯ ಪಂಚಮುಖಿ ಆಂಜನೇಯ ಪ್ರತಿಮೆ 161 ಅಡಿ, ಮುರುಡೇಶ್ವರದಲ್ಲಿರುವ ಶಿವನ ಪ್ರತಿಮೆ 123 ಅಡಿ ಎತ್ತರವಿದೆ.
ಕರ್ನಾಟಕ ಸರ್ಕಾರವೇ ಪ್ರತಿಮೆ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿತ್ತು. ಸಚಿವ ಡಾ. ಸಿ. ಎನ್. ಅಶ್ವತ್ಥ ನಾರಾಯಣ ಉಪಾಧ್ಯಕ್ಷತೆಯಲ್ಲಿ ಇದಕ್ಕಾಗಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲಾಗಿದೆ.
ಒಟ್ಟು ಎರಡು ಹಂತದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ 18 ಅಡಿ ಎತ್ತರದ ಪೀಠದ ಮೇಲೆ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಎರಡನೇ ಹಂತದಲ್ಲಿ ಥೀಮ್ ಪಾರ್ಕ್ ನಿರ್ಮಾಣವಾಗಲಿದೆ.
23 ಎಕರೆ ಪ್ರದೇಶದಲ್ಲಿ ಥೀಮ್ ಪಾರ್ಕ್ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಶಂಕುಸ್ಥಾಪನೆ ಮಾಡಲಿದ್ದಾರೆ. ಉದ್ಯಾನ, ಥಿಯೇಟರ್, ಪಾದಚಾರಿ ಮಾರ್ಗ, ಕಾರಂಜಿ ಸೇರಿದಂತೆ ವಿವಿಧ ವ್ಯವಸ್ಥೆಗಳನ್ನು ಥೀಮ್ ಪಾರ್ಕ್ ಹೊಂದಿರಲಿದೆ.
ಯಾರು ಈ ಕೆಂಪೇಗೌಡ?; ಹಿರಿಯ ಕೆಂಪೇಗೌಡರು ನಾಡಪ್ರಭು ಕೆಂಪೇಗೌಡರ ಎಂದೇ ಖ್ಯಾತಿ ಪಡೆದಿದ್ದಾರೆ. ಇವರು ವಿಜಯನಗರ ಪ್ರಮುಖ ಪಾಳೇಗಾರರಾಗಿದ್ದರು. 1537ರಲ್ಲಿ ಬೆಂಗಳೂರು ನಗರವನ್ನು ಕೇಂದ್ರವಾಗಿಟ್ಟುಕೊಂಡು ಆಡಳಿತ ನಡೆಸಿದವರು.
ಯಲಹಂಕದಲ್ಲಿ ಜನಿಸಿದ ಅವರು ಹೆಸರಘಟ್ಟದಲ್ಲಿ ಶಿಕ್ಷಣ ಪಡೆದರು. ದೂರದೃಷ್ಟಿಯ, ದಕ್ಷ ಆಡಳಿತದ ಮೂಲಕ ಬೆಂಗಳೂರು ನಗರವನ್ನು ಕಟ್ಟಿದರು. ನಗರದ ನಾಲ್ಕು ದಿಕ್ಕಿಗೆ ನಾಲ್ಕು ಗೋಪುರ, ಪ್ರತಿ ಬಡಾವಣೆಗೆ ಕೆರೆ ಸೇರಿದಂತೆ ಭವಿಷ್ಯದ ದೃಷ್ಟಿಯಿಂದ ಯೋಜನಾ ಬದ್ಧವಾಗಿ ನಗರ ಕಟ್ಟಿದರು.