"ಲಂಚಮುಕ್ತ ಕರ್ನಾಟಕ” ಎಎಪಿಯಿಂದ 100ದಿನದ ಅಭಿಯಾನ

ಬೆಂಗಳೂರು, ಜ.21: ಕಳೆದ ಎರಡೂಮುಕ್ಕಾಲು ವರ್ಷದಿಂದ ಆಡಳಿತ ನಡೆಸುತ್ತಿರುವ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ, ಪರಿಣಾಮಕಾರಿ ಆಡಳಿತ ನೀಡುವಲ್ಲಿ ಸೋತಿದೆ ಮತ್ತು "ಭ್ರಷ್ಟಾಚಾರ ರಹಿತ ಆಡಳಿತ" ನೀಡುತ್ತೇವೆ ಎಂದು 2013 ರ ಚುನಾವಣಾ ಸಮಯದಲ್ಲಿ ನೀಡಿದ್ದ ಆಶ್ವಾಸನೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ "ಲಂಚಮುಕ್ತ ಕರ್ನಾಟಕ" ನಿರ್ಮಿಸುವ ಜನಪರ ಕಾಳಜಿಯಿಂದ ಆಮ್ ಆದ್ಮಿ ಪಕ್ಷ ಅಭಿಯಾನವನ್ನು ಆರಂಭಿಸಿದೆ.

ಲೋಕಾಯುಕ್ತ ಸಂಸ್ಥೆಯನ್ನು ಸಶಕ್ತಗೊಳಿಸುತ್ತೇವೆ ಮತ್ತು ಮತ್ತಷ್ಟು ಸ್ವಾಯತ್ತತೆ ಮತ್ತು ಅಧಿಕಾರಗಳನ್ನು ನೀಡುತ್ತೇವೆ ಎಂದು ಕೊಟ್ಟಿದ್ದ ಆಶ್ವಾಸನೆಗೆ ವ್ಯತಿರಿಕ್ತವಾಗಿ ಲೋಕಾಯುಕ್ತ ಸಂಸ್ಥೆಯನ್ನೇ ದುರ್ಬಲಗೊಳಿಸಲು ಮುಂದಾಗಿದ್ದರು ಮತ್ತು ಆ ಪ್ರವೃತ್ತಿ ಈಗಲೂ ಮುಂದುವರೆಯುತ್ತಿದೆ.

ಸರ್ಕಾರವೇ ಮುಂದೆ ನಿಂತು ಆಡಳಿತದಲ್ಲಿ ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ಕೊಡುತ್ತಿದೆ ಮತ್ತು ಸರ್ಕಾರಿ ನೌಕರರಿಗೆ ಲೋಕಾಯುಕ್ತ ಅಥವ ಯಾವುದೇ ಭ್ರಷ್ಟಾಚಾರ ನಿಗ್ರಹ ತಂಡದ ಕಾನೂನು ಭಯಪಡುವ ಅಗತ್ಯವಿಲ್ಲದ ರೀತಿಯಲ್ಲಿ ವಾತಾವರಣ ಸೃಷ್ಟಿಸಿದೆ. ಇದೆಲ್ಲದರಿಂದಾಗಿ ಇಂದು ಸರ್ಕಾರಿ ಕಚೇರಿಗಳಲ್ಲಿ ಲಂಚ ಮತ್ತು ದುರಾಡಳಿತ ಸ್ವಚ್ಛಂದ ಮತ್ತು ಅವ್ಯಾಹತವಾಗಿ ನಡೆಯುತ್ತಿದೆ.

ಈ ಹಿನ್ನೆಲೆಯಲ್ಲಿ "ಲಂಚಮುಕ್ತ ಕರ್ನಾಟಕ" ನಿರ್ಮಿಸುವ ಜನಪರ ಕಾಳಜಿಯಿಂದ ಆಮ್ ಆದ್ಮಿ ಪಕ್ಷ ಅಕ್ಟೋಬರ್ 10, 2015 ರಂದು "ಭ್ರಷ್ಟಾಚಾರ ವಿರೋಧಿ ಸಹಾಯವಾಣಿ" (93425 22223) ಯನ್ನು ಆರಂಭಿಸಿತು. ಅಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮತ್ತು ನಾಡಿನ ಸಾಕ್ಷಿಪ್ರಜ್ಞೆಯಾಗಿರುವ ಹೆಚ್.ಎಸ್.ದೊರೆಸ್ವಾಮಿಯವರು ಈ ಅಭಿಯಾನಕ್ಕೆ ಚಾಲನೆ ನೀಡಿದರು.

100 days of the "Bribe-Free Karnataka" campaign

ಅದರ ಮುಂದಿನ ವಾರದಲ್ಲಿ, ಅಂದರೆ ಅಕ್ಟೋಬರ್ 13 ರಿಂದ 17 ರವರೆಗೆ, ಬೆಂಗಳೂರು ನಗರದಲ್ಲಿ "ಲಂಚಮುಕ್ತ ಬೆಂಗಳೂರು ಸಪ್ತಾಹ" ಕಾರ್ಯಕ್ರಮವನ್ನು ಹಮ್ಮಿಕೊಂಡು ಕೋರಮಂಗಲ, ರಾಜಾಜಿನಗರ, ಇಂದಿರಾನಗರ, ಯಲಹಂಕ, ಮತ್ತು ಜಯನಗರದ ಆರ್‌ಟಿಒ ಮತ್ತು ಸಬ್‌ರಿಜಿಸ್ಟ್ರಾರ್ ಕಚೇರಿಗಳಲ್ಲಿ ಈ ಅಭಿಯಾನ ನಡೆಸಿ, ಆ ಎಲ್ಲಾ ದಿನಗಳಲ್ಲಿ ಅಲ್ಲಿ ಲಂಚ ಮತ್ತು ಭ್ರಷ್ಟಾಚಾರವನ್ನು ಹತೋಟಿಗೆ ತಂದಿದ್ದೇ ಅಲ್ಲದೆ, ಸ್ಥಳದಲ್ಲಿಯೇ ಅನೇಕ ಜನರ ಅನೇಕ ದಿನಗಳ ಸಮಸ್ಯೆಯನ್ನು ಸ್ಥಳದಲ್ಲಿಯೇ ಅಧಿಕಾರಿಗಳ ಗಮನಕ್ಕೆ ತಂದು ಸಾರ್ವಜನಿಕರ ಕಾನೂನುಬದ್ಧ ಕೆಲಸ ಆಗುವ ಹಾಗೆ ಮಾಡಲಾಯಿತು.

ಇದಾದ ನಂತರ ಅಭಿಯಾನವನ್ನು ರಾಜ್ಯದಾದ್ಯಂತ ವಿಸ್ತರಿಸಲಾಯಿತು. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಕೊಪ್ಪಳ, ಬಳ್ಳಾರಿ, ಗುಲ್ಬರ್ಗ, ಬೀದರ್, ಬಿಜಾಪುರ, ಧಾರವಾಡ, ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮಂಗಳೂರು, ಮೈಸೂರು, ಮಂಡ್ಯ ಜಿಲ್ಲೆಯ ಅನೇಕ ಕಡೆಗಳಲ್ಲಿ ನಡೆಸಲಾಗಿದೆ.

ಈ ಅಭಿಯಾನ ನಡೆಸಿದ ಕಡೆಯೆಲ್ಲೆಲ್ಲ ಸಾರ್ವಜನಿಕರಿಂದ ಒಳ್ಳೆಯ ಸ್ಪಂದನೆ ದೊರಕಿದ್ದು, ಅನೇಕ ಸರ್ಕಾರಿ ಕಚೇರಿಗಳಲ್ಲಿ ಪಾರದರ್ಶಕ ಆಡಳಿತಕ್ಕೆ ಪೂರಕವಾದ ವಾತಾವರಣ ನಿರ್ಮಿಸುವಂತೆ ಮಾಡಲಾಗಿದೆ. ಎಲ್ಲಾ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ತಮ್ಮ ಬ್ಯಾಡ್ಜ್‌ಗಳನ್ನು ಧರಿಸಲು ಆರಂಭಿಸಿದ್ದಾರೆ ಮತ್ತು ತಮ್ಮ ಮೇಜುಗಳ ಮೇಲೆ ತಮ್ಮ ಹೆಸರು ಮತ್ತು ಪದನಾಮಗಳ ಫಲಕಗಳನ್ನು ಇಡುತ್ತಿದ್ದಾರೆ.

ಇದೆಲ್ಲದರಿಂದಾಗಿ ಸಾರ್ವಜನಿಕರು ಯಾವುದೇ ಮಧ್ಯವರ್ತಿ ಅಥವ ಮೂರನೇ ವ್ಯಕ್ತಿಯ ಅಗತ್ಯವಿಲ್ಲದೇ ತಾವೇ ನೇರವಾಗಿ ಸಂಬಂಧಪಟ್ಟವರನ್ನು ಭೇಟಿಯಾಗಲು ಅನುಕೂಲವಾಗುತ್ತಿದೆ.

ಇನ್ನು ನಮ್ಮ ಸಹಾಯವಾಣಿಗೆ ಕಳೆದ ನೂರು ದಿನಗಳಲ್ಲಿ 5000 ಕ್ಕೂ ಹೆಚ್ಚು ಕರೆಗಳು ಬಂದಿದ್ದು, ಇದು ನಮ್ಮ ಅಭಿಯಾನದ ಯಶಸ್ಸನ್ನು ತೋರಿಸುತ್ತದೆ. ನಮಗೆ ಬಂದಿರುವ ಕರೆಗಳಲ್ಲಿ ಲಂಚಕ್ಕೆ ಸಂಬಂಧಪಟ್ಟ ಗಂಭೀರ ಪ್ರಕರಣಗಳನ್ನಷ್ಟೇ ನಾವು ದಾಖಲಿಸಿಕೊಳ್ಳುತ್ತಿದ್ದು ಅಂತಹವು ಇಲ್ಲಿಯವರೆಗೆ ಸುಮಾರು 300 ಇದ್ದು, ಈಗ ಅವುಗಳ ವಿಲೇವಾರಿಯಲ್ಲಿ ನಮ್ಮ ತಂಡ ತೊಡಗಿಕೊಂಡಿದ್ದು, ಅವೆಲ್ಲವೂ ವಿವಿಧ ಹಂತದಲ್ಲಿವೆ.

ಸುಮಾರು ನೂರಕ್ಕೂ ಹೆಚ್ಚು ಪ್ರಕರಣಗಳು ಮುಕ್ತಾಯದ ಹಂತದಲ್ಲಿದ್ದು, ಬಹುತೇಕ ಕಡೆ ಅಧಿಕಾರಿಗಳು ನಮ್ಮ ಕರೆಗೆ ಕೂಡಲೆ ಸ್ಪಂದಿಸಿ ದೂರುದಾರರ ಕಾನೂನುಬದ್ಧ ಕೆಲಸವನ್ನು ಸತಾಯಿಸದೆ ಮಾಡಿಕೊಡುತ್ತಿದ್ದಾರೆ. ಹಲವು ಕಡೆ ಅಧಿಕಾರಿಗಳಿಂದ ಲಂಚವನ್ನೂ ಕಕ್ಕಿಸಿದ್ದಾರೆ. ನಮ್ಮ ಕಾರ್ಯಕರ್ತರು ಹಲವು ಕಡೆ ದೂರುದಾರರೊಂದಿಗೆ ಹೋಗಿ ಕುಟುಕು ಕಾರ್ಯಾಚರಣೆ ಸಹ ಮಾಡಿದ್ದಾರೆ.

ಈಗ ಅಭಿಯಾನವನ್ನು ಇನ್ನೊಂದು ಮಜಲಿಗೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ "ಲಂಚಮುಕ್ತ ಕರ್ನಾಟಕ ಅಭಿಯಾನ - 100 ದಿನ" ಕಾರ್ಯಕ್ರಮವನ್ನು ಶನಿವಾರ, 23-01-2016 ರಂದು, ಮಧ್ಯಾಹ್ನ 4 ಗಂಟೆಗೆ ಬೆಂಗಳೂರು ನಗರದ "ಜೈನ್ ಸಮುದಾಯ ಭವನ, ವುಡ್ ಸ್ಟ್ರೀಟ್, ಶೂಲೆ ವೃತ್ತ, ಅಶೋಕನಗರ, ಬೆಂಗಳೂರು - 560025", ಇಲ್ಲಿ ಆಯೋಜಿಸಲಾಗಿದೆ.

ಹಿರಿಯ ಸ್ವಾತಂತ್ರ್ಯ ಹೋರಾಟಗಾರರೂ, ಭ್ರಷ್ಜಾಚಾರದ ವಿರುದ್ಧದ ಆಂದೋಳನದಲ್ಲಿ ಮುಂಚೂಣಿಯಲ್ಲಿರುವ ಹೆಚ್.ಎಸ್.ದೊರೆಸ್ವಾಮಿಯವರು ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ. ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಂಕಜ್ ಗುಪ್ತರವರು ವಿಶೇಷ ಆಹ್ವಾನಿತರಾಗಿದ್ದು, ಪಕ್ಷದ ರಾಜ್ಯ ಘಟಕದ ಸಂಚಾಲಕರಾದ ಪೃಥ್ವಿ ರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರು ಇತ್ತೀಚೆಗೆ ಮಾಡಲಾಗಿರುವ ಕೆಲವು "ಕುಟುಕು ಕಾರ್ಯಾಚರಣೆ"ಯ ವಿಡಿಯೊ ಸಹ ಪ್ರದರ್ಶಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+