ಬೆಂಗಳೂರು-ಮೈಸೂರು ಪ್ರಯಾಣಿಕರಿಗೆ ಸಿಹಿಸುದ್ದಿ ಕೊಟ್ಟ ಕೇಂದ್ರ
ಬೆಂಗಳೂರು, ಆಗಸ್ಟ್ 12; ರಾಜಧಾನಿ ಬೆಂಗಳೂರು ಮತ್ತು ಮೈಸೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯನ್ನು 10 ಪಥಗಳ ರಸ್ತೆಯಾಗಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಈ ಯೋಜನೆ ಪೂರ್ಣಗೊಂಡರೆ ಉಭಯ ನಗರಗಳ ನಡುವಿನ ಪ್ರಯಾಣದ ಅವಧಿ 90 ನಿಮಿಷಗಳಿಗೆ ಇಳಿಕೆಯಾಗಲಿದೆ.
ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಬುಧವಾರ ಈ ಕುರಿತು ಟ್ವೀಟ್ ಮಾಡಿದ್ದಾರೆ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ದಶ ಪಥಗಳ ಆರ್ಥಿಕ ಕಾರಿಡಾರ್ ನಿರ್ಮಾಣ ಕಾಮಗಾರಿಯನ್ನು 2022ರ ಅಕ್ಟೋಬರ್ ಒಳಗೆ ಪೂರ್ಣಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ.
ಭಾರತಮಾಲಾ ಪರಿಯೋಜನ ಹಂತ-1ರ ಅಡಿಯಲ್ಲಿ ಉಭಯ ನಗರಗಳನ್ನು ಸಂಪರ್ಕಿಸುವ ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಎರಡು ಪ್ಯಾಕೇಜ್ಗಳಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಸಚಿವ ನಿತಿನ್ ಗಡ್ಕರಿ ಕಾಮಗಾರಿಗಳ ಚಿತ್ರಗಳನ್ನು ಸಹ ಟ್ವೀಟ್ ಮಾಡಿದ್ದಾರೆ.
ಬೆಂಗಳೂರಿನ ಕೆಂಗೇರಿ ಬಳಿಯಿಂದ ಮೈಸೂರಿನ ಕೊಲಂಬಿಯಾ ಆಸ್ಪತ್ರೆ ತನಕದ ಮಾರ್ಗವನ್ನು 10 ಪಥವಾಗಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಪ್ರಸ್ತುತ ಇರುವ 135 ಕಿ. ಮೀ. ರಸ್ತೆ 4 ಪಥದ ಹೆದ್ದಾರಿಯಾಗಿದ್ದು, ವಾಹನ ದಟ್ಟಣೆ ಹೆಚ್ಚಾದ ಕಾರಣ 10 ಪಥವಾಗಿ ಅಭಿವೃದ್ಧಿಗೊಳಿಸಲಾಗುತ್ತಿದೆ.

ಕಾಮಗಾರಿ ಕುರಿತು ನಿತಿನ್ ಗಡ್ಕರಿ ಟ್ವೀಟ್
ಬೆಂಗಳೂರು-ಮೈಸೂರು ನಡುವಿನ 10 ಪಥಗಳ ಆರ್ಥಿಕ ಕಾರಿಡಾರ್ ಅನ್ನು ದಾಖಲೆಯ ವೇಗದಲ್ಲಿ ನಿರ್ಮಿಸಲಾಗುತ್ತಿದೆ. 8,172 ಕೋಟಿ ವೆಚ್ಚದ ಆರ್ಥಿಕ ಕಾರಿಡಾರ್ 2022ರ ಅಕ್ಟೋಬರ್ ಒಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಇದರಿಂದಾಗಿ ಎರಡು ನಗರಗಳ ನಡುವಿನ ಪ್ರಯಾಣದ ಸಮಯ ಈಗಿನ 3 ಗಂಟೆಯಿಂದ ಒಂದೂವರೆ ಗಂಟೆಗೆ (90) ನಿಮಿಷಕ್ಕೆ ತಗ್ಗಲಿದೆ ಎಂದು ನಿತಿನ್ ಗಡ್ಕರಿ ಟ್ವೀಟ್ ಮೂಲಕ ಮಾಹಿತಿಯನ್ನು ನೀಡಿದ್ದಾರೆ.

ಎರಡು ಹಂತಗಳಲ್ಲಿ ಕಾಮಗಾರಿ
134 ಕಿ. ಮೀ. ರಾಷ್ಟ್ರೀಯ ಹೆದ್ದಾರಿಯನ್ನು 2 ವಿಭಾಗವಾಗಿ ಮಾಡಿಕೊಂಡು ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಕೆಂಗೇರಿ, ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು ತಾಲೂಕಿನ ನಿಡಘಟ್ಟದ ತನಕ 56.20 ಕಿ. ಮೀ. ಒಂದು ಪ್ಯಾಕೇಜ್ ಆಗಿದೆ. 2ನೇ ಪ್ಯಾಕೇಜ್ನಲ್ಲಿ ಮಂಡ್ಯ, ಶ್ರೀರಂಗಪಟ್ಟಣ ಮಾರ್ಗವಾಗಿ ಮೈಸೂರಿನ ಕೊಲಂಬಿಯಾ ಆಸ್ಪತ್ರೆ ತನಕ ರಸ್ತೆಯನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಈ ಪ್ಯಾಕೇಜ್ 61.04 ಕಿ. ಮೀ. ಒಳಗೊಂಡಿದೆ.

ಬೈಪಾಸ್ ರಸ್ತೆಗಳ ನಿರ್ಮಾಣ
ರಾಮನಗರ ಜಿಲ್ಲೆಯ ಬಿಡದಿ ಬಳಿ 6.9 ಕಿ. ಮೀ. ಬೈಪಾಸ್ ರಸ್ತೆ, ರಾಮನಗರದ ಬಸವಪುರಿಂದ ಚನ್ನಪಟ್ಟಣದ ಬೈರಾಪಟ್ಟಣ ತನಕ 22.35 ಕಿ. ಮಿ. ಬೈಪಾಸ್, ಮಂಡ್ಯದಲ್ಲಿ 10 ಕಿ. ಮೀ., ಮದ್ದೂರು ಬಳಿ 4.5 ಕಿ. ಮೀ., ಶ್ರೀರಂಗಪಟ್ಟಣದಲ್ಲಿ 8 ಕಿ. ಮೀ. ಉದ್ದದ ಬೈಪಾಸ್ ನಿರ್ಮಾಣವಾಗುತ್ತಿದೆ. 9 ಸೇತುವೆ, 44 ಕಿರು ಸೇತುವೆ, 4 ರೈಲು ಮೇಲ್ಸೇತುವೆಗಳ ನಿರ್ಮಾಣ ಸಹ ಈ ಯೋಜನೆಯಲ್ಲಿ ಒಳಗೊಂಡಿದೆ.

ಉದ್ಯಮ ಸ್ಥಾಪನೆಗೆ ಅನುಕೂಲ
ಬೆಂಗಳೂರು-ಮೈಸೂರು ನಡುವಿನ ಪ್ರಯಾಣದ ಅವಧಿ ಕಡಿಮೆಯಾದರೆ ಮೈಸೂರಿನಲ್ಲಿ ಉದ್ಯಮಗಳ ಸ್ಥಾಪನೆಗೆ ಸಹಕಾರಿಯಾಗಲಿದೆ. ಈ ರಸ್ತೆ ಅಭಿವೃದ್ಧಿಯಿಂದಾಗಿ ರಾಮನಗರ, ಮಂಡ್ಯ ಜಿಲ್ಲೆಯಲ್ಲಿ ಭೂಮಿಗಳ ಬೆಲೆ ಗಗನಕ್ಕೆ ಏರಿಕೆಯಾಗಿದೆ. "ಲಾಕ್ಡೌನ್ ಸಂಕಷ್ಟದ ನಡುವೆಯೂ ರಿಯಲ್ ಎಸ್ಟೇಟ್ ಉದ್ಯಮ ಚೇತರಿಸಿಕೊಳ್ಳುತ್ತಿದೆ" ರಾಮನಗರದ ಮುರಳೀಧರ್ ಹೇಳಿದ್ದಾರೆ.
|
ಕೇಂದ್ರ ಸಚಿವರ ಟ್ವೀಟ್
ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಬುಧವಾರ ಬೆಂಗಳೂರು-ಮೈಸೂರು 10 ಪಥದ ರಸ್ತೆ ನಿರ್ಮಾಣದ ಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ.












Click it and Unblock the Notifications