₹10 ಲಕ್ಷ ಕೋಟಿಯಲ್ಲಿ ಬೆಂಗಳೂರು ಹೊರಗಡೆ ಶೇ.70 ರಷ್ಟು ಹೂಡಿಕೆ: ಮುರುಗೇಶ್ ನಿರಾಣಿ
ಬೆಂಗಳೂರು, ನವೆಂಬರ್: ₹10 ಲಕ್ಷ ಕೋಟಿಗೂ ಹೆಚ್ಚಿನ ಹೂಡಿಕೆಗೆ ಒಡಂಬಡಿಕೆಯಾಗಿದ್ದು, ಶೇ.70 ರಷ್ಟು ಹೂಡಿಕೆ ಬೆಂಗಳೂರು ಹೊರಗೆ ಹೂಡಿಕೆ ಮಾಡಲು ಒಡಂಬಡಿಕೆ ಆಗಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಶುಕ್ರವಾರ ಅರಮನೆ ಆವರಣದಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಒಡಂಬಡಿಕೆ ಮಾಡಿಕೊಂಡಿರುವವರಿಗೆ ಅಗತ್ಯ ಸೌಲಭ್ಯ, ಸೌಕರ್ಯ ಕಲ್ಪಿಸಲು ನಾವು ಬದ್ದವಾಗಿದ್ದೇವೆ ಎಂದರು.
ಇನ್ನೂ ಪ್ರಧಾನಿ ನರೇಂದ್ರ ಮೋದಿಯವರು ವರ್ಚುವಲ್ ಸಭೆ ಮೂಲಕ ಮಾತನಾಡಿ, ಕರ್ನಾಟಕ ಕೈಗಾರಿಕೆಗಳಿಗೆ ಆಧ್ಯತೆ ನೀಡುತ್ತಾ ಬಂದಿದೆ, ಮೈಸೂರು ಮಹಾರಾಜರ ಕಾಲ, ವಿಶ್ವೇಶ್ವರಯ್ಯ ಕೈಗಾರಿಕೆಗೆ ಫೌಂಡೇಷನ್ ಹಾಕಿ ಅಂದೇ ಆತ್ಮ ನಿರ್ಭರ ಮಾಡಿದ್ದರು. ಹಾಗಾಗಿ ವಿವಿಧ ವಲಯದಲ್ಲಿ ನಾವು ಮೊದಲ ಸ್ಥಾನದಲ್ಲಿದ್ದೇವೆ. ಸೇವಾ ವಲಯ, ಉತ್ಪಾದನಾ ವಲಯದಲ್ಲಿ ಮುಂದಿದ್ದೇವೆ. ಇಡೀ ದೇಶದಲ್ಲಿ ಎಲ್ಲಿಯೂ ಇಲ್ಲದ ವಿನಾಯಿತಿ ಇಲ್ಲಿ ಕೊಡಲಾಗಿದೆ. 10 ಸಾವಿರ ಕೋಟಿ ರೂಪಾಯಿ ಹೂಡಿಕೆಯಾಗಿ 1 ಲಕ್ಷ ಉದ್ಯೋಗ ಸೃಷ್ಟಿ ಹುಬ್ಬಳ್ಳಿಯಲ್ಲಿ ಆಗಲಿದೆ ಎಂದರು. ಪ್ರತಿ ಎರಡು ವರ್ಷಕ್ಕೆ ಸಮಾವೇಶ ನಡೆಯಬೇಕು ಎಂದು ಸಿಎಂ ಬೊಮ್ಮಾಯಿಯವರಿಗೆ ಸಲಹೆ ನೀಡಿದ್ದಾರೆ. 2025 ರ ಜನವರಿಯಲ್ಲಿ ಮತ್ತೆ ಸಮಾವೇಶ ನಡೆಯಲಿದೆ. ನಾವು ಈ ಬಾರಿ ಕಂಪನಿ ಆರಂಭಿಸುವವರೊಂದಿಗೆ ಮಾತ್ರ ಒಡಂಬಡಿಕೆ ಮಾಡಿಕೊಂಡಿದ್ದೇವೆ. ಬಂದ ಬಂದವರ ಜೊತೆ ಎಲ್ಲಾ ಹಿಂದೆ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಈ ಬಾರಿ ಅನುಷ್ಠಾನಕ್ಕೆ ತರುವವರಿಗೆ ಮಾತ್ರ ಅವಕಾಶ ನೀಡಲಾಗಿದೆ. ಶೇ.70 ರಷ್ಟು ಹೂಡಿಕೆ ಬೆಂಗಳೂರು ಹೊರಗೆ ಹೂಡಿಕೆಗೆ ಒಡಂಬಡಿಕೆ ಆಗಿದೆ ಎಂದರು.
ನಂತರ ಮಾತನಾಡಿದ ಇಂಧನ ಸಚಿವ ಸುನೀಲ್ ಕುಮಾರ್, 2022ರ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 2 ಲಕ್ಷ ಕೋಟಿ ಹಸಿರು ಇಂಧನಕ್ಕೆ ಹೂಡಿಕೆ ಮಾಡಲು ಒಡಂಬಡಿಕೆಯಾಗಿದ್ದು ನಾವು ಅವರಿಗೆಲ್ಲಾ ಅಗತ್ಯ ಸೌಲಭ್ಯ ಕಲ್ಪಿಸಲು ಬದ್ದವಿದ್ದೇವೆ ಎಂದರು. ಉದ್ಯಮಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಇಂಧನ ಇಲಾಖೆ ಪ್ರಮುಖವಾಗಿದ್ದು ಆ ನಿಟ್ಟಿನಲ್ಲಿ ನಾವು ಕೆಲಸ ಮಾಡಲಿದ್ದೇವೆ, ರಾಜ್ಯದಲ್ಲಿ ಹಸಿರು ಇಂಧನ ಉತ್ಪಾದನೆ ಕುರಿತು ಹಲವು ವರ್ಷಗಳಿಂದ ಬೇರೆಲ್ಲಾ ರಾಜ್ಯಗಳಿಗಿಂತ ಮುಂದಿದ್ದೇವೆ. 30 ಸಾವಿರ ಮೆಗಾವ್ಯಾಟ್ ನಲ್ಲಿ ಶೇ. 50 ರಷ್ಟು ಹಸಿರು ಇಂಧನದಿಂದ ಉತ್ಪಾದನೆ ಮಾಡಲಾಗುತ್ತಿದೆ. ಮುಂದಿನ 10-15 ವರ್ಷದಲ್ಲಿ ಏನಾಗಬೇಕು ಎಂದು ಸಲಹೆ ಸೂಚನೆ ಸಿಎಂ ನೀಡಿದ್ದು, ಸೋಲಾರ್ ಮತ್ತು ವಿಂಡ್ ಎರಡೂ ಇರುವ ಹೈಬ್ರೀಡ್ ಪಾರ್ಕ್ ಅನ್ನು ಬಜೆಟ್ ನಲ್ಲಿ ಪ್ರಕಟಿಸಿದ್ದಾರೆ. ಹಾಗಾಗಿ ಇಂಧನ ಇಲಾಖೆಯಲ್ಲಿ ಹೂಡಿಕೆಗೆ ಹೆಚ್ಚು ಅವಕಾಶವಿದ್ದು ಹೂಡಿಕೆದಾರರಿಗೆ ಬೇಕಾದ ಎಲ್ಲ ಸೌಕರ್ಯ ಕಲ್ಪಿಸಲು ಬದ್ದವಿದ್ದೇವೆ ಎಂದರು.
2030 ರಲ್ಲಿ ನಮ್ಮ ಉತ್ಪಾದನೆಯಲ್ಲಿ ಶೇ.50 ರಷ್ಟು ಹಸಿರು ಇಂಧನ ಆಗಿರಬೇಕು ಎಂದಿದ್ದಾರೆ. ಅದರಲ್ಲಿ ನಾವು ಮೊದಲ ಸ್ಥಾನದಲ್ಲಿರಲಿದ್ದೇವೆ. ಸೋಲಾರ್ ವಿದ್ಯುತ್ ಉತ್ಪಾದನೆಯಲ್ಲಿ ನಾವು ಮೊದಲ ಸ್ಥಾನದಲ್ಲಿದ್ದೇವೆ. ಮುಂದಿನ ದಿನದಲ್ಲಿ ಹಸಿರು ಇಂಧನ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಸೋಲಾರ್ ಸ್ಟೋರೇಜ್ ಮಾಡಿಕೊಳ್ಳಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದರು.