ಕಾಶ್ಮೀರ ಪ್ರವಾಹದಿಂದ ಮರಳಿ ಬಂದ 10 ಕನ್ನಡಿಗರು
ಬೆಂಗಳೂರು, ಸೆ. 11 : ಕಾಶ್ಮೀರದ ಭೀಕರ ಪ್ರವಾಹದಲ್ಲಿ ಸಿಲುಕಿದ್ದ ಚಿಕ್ಕಲಸಂದ್ರದ ನಿವಾಸಿ ಕೃಷ್ಣಮೂರ್ತಿ ಸೇರಿದಂತೆ 10 ಜನರು ಬೆಂಗಳೂರಿಗೆ ಬುಧವಾರ ರಾತ್ರಿ ಸುರಕ್ಷಿತವಾಗಿ ಬಂದು ತಲುಪಿದ್ದಾರೆ. ಸಂಬಂಧಿಕರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸಿಹಿ ನೀಡಿ ಅವರನ್ನು ಬರಮಾಡಿಕೊಂಡರು.
ಚಿಕ್ಕಲಸಂದ್ರದ ನಿವಾಸಿ ಕೃಷ್ಣಮೂರ್ತಿ ಸೇರಿದಂತೆ 10 ಮಂದಿ ಅಮೃತಸರ ಮತ್ತು ಮುಂಬೈ ವಿಮಾನ ನಿಲ್ದಾಣದ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬುಧವಾರ ರಾತ್ರಿ ಆಗಮಿಸಿದರು. ಕೃಷ್ಣಮೂರ್ತಿ ಅವರ ಜತೆಗೆ ವತ್ಸಲ, ಶ್ರೀಹರ್ಷ, ಪೂರ್ಣಿಮಾ, ಗಂಗಾಧರ್, ಭಾರತಿ, ಸೀತಾಲಕ್ಷ್ಮಿ, ಕಿರಣ್, ಪೂರ್ಣಿಮಾ ಅವರ ಪುತ್ರಿ ಹಾಗೂ ಪೂರ್ಣಮಾ ಅವರ ತಾಯಿ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು.

ಕೃಷ್ಣಮೂರ್ತಿ ಮತ್ತು ಇತರರು ಕಳೆದ ಶುಕ್ರವಾರ ಬೆಳಗ್ಗೆ 8.45ಕ್ಕೆ ವಿಮಾನದಲ್ಲಿ ಪ್ರಯಾಣ ಬೆಳೆಸಿ ಮಧ್ಯಾಹ್ನ 3.50ಕ್ಕೆ ಶ್ರೀನಗರ ತಲುಪಿದ್ದರು. ಅಂದು ಸಂಜೆ ನಗರ ಪ್ರದಕ್ಷಿಣೆ ಹೊರತುಪಡಿಸಿ ಬೇರೆಡೆ ಹೋಗಿರಲಿಲ್ಲ. ನಾವು ಉಳಿದುಕೊಂಡಿದ್ದ ಹೋಟೆಲ್ನ ಮೊದಲನೆ ಮಹಡಿ ತನಕ ನೀರು ನಿಂತಿತ್ತು, ನಾವು ಎರಡನೇ ಮಹಡಿಯಲ್ಲಿದ್ದೆವು ಎಂದು ಕೃಷ್ಣಮೂರ್ತಿ ಅವರು ಪ್ರವಾಹದ ಭೀಕರತೆಯನ್ನು ನೆನಪು ಮಾಡಿಕೊಂಡರು. [ಸಂತ್ರಸ್ತರಿಗೆ ದೇಣಿಗೆ ನೀಡಲು ಮನವಿ]
ಶ್ರೀನಗರದ ಜವಹಾರನಗರದಲ್ಲಿ ಲಾಡ್ಜ್ವೊಂದರಲ್ಲಿ ನಾವು ಇದ್ದೆವು. ಮೊಬೈಲ್ ಚಾರ್ಚ್ ಇರಲಿಲ್ಲ, ವಿದ್ಯುತ್ ಇರಲಿಲ್ಲ, ಚಿಕ್ಕ ಮಕ್ಕಳಿಗೆ ಕುಡಿಯಲು ಹಾಲು ಇರಲಿಲ್ಲ, ನಾವು ನಮ್ಮ ಸಂಬಂಧಿಕರನ್ನು ಪುನಃ ನೋಡುತ್ತೇವೆಯೋ ಇಲ್ಲವೋ? ಎಂದು ಕೊಂಡಿದ್ದೆವು ಎಂದು ಪೂರ್ಣಿಮಾ ಅವರು ಪ್ರವಾಹದಲ್ಲಿ ಸಿಲುಕಿ ಅನುಭವಿಸಿದ ಕಷ್ಟವನ್ನು ನೆನಪು ಮಾಡಿಕೊಂಡರು. [ಕಾಶ್ಮೀರ ಪ್ರವಾಹದಲ್ಲಿ ಸಿಲುಕಿರುವ 200 ಕನ್ನಡಿಗರು]
ಐಎಎಸ್ ಅಧಿಕಾರಿ ವಾಪಸ್ : ಕಾಶ್ಮೀರದಲ್ಲಿ ಕನ್ನಡಿಗರನ್ನು ರಕ್ಷಿಸಲು ತೆರಳಿದ್ದ ಐಎಎಸ್ ಅಧಿಕಾರಿ ಅನಾರೋಗ್ಯದ ಹಿನ್ನಲೆಯಲ್ಲಿ ದೆಹಲಿಗೆ ಮರಳಿದ್ದಾರೆ. ಪ್ರಸ್ತುತ ಕಾಶ್ಮೀರದಲ್ಲಿ ನೀರು ಇಳಿಮುಖವಾಗುತ್ತಿದ್ದು, ಸಿಲುಕಿಕೊಂಡಿರುವ ಕನ್ನಡಿಗರನ್ನು ಶೀಘ್ರದಲ್ಲಿಯೇ ಬೆಂಗಳೂರಿಗೆ ಕರೆ ತರಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. [ಕಾಶ್ಮೀರ ಪ್ರವಾಹದಲ್ಲಿ ಸಿಲುಕಿರುವ ಕನ್ನಡಿಗರ ಮಾಹಿತಿ ಕೊಡಿ]












Click it and Unblock the Notifications