ಚಿಕ್ಕೋಡಿ ಸದಲಗಾ : ಗಣೇಶ್ ಹುಕ್ಕೇರಿಗೆ ಜಯ
ಬೆಳಗಾವಿ, ಆ.25: ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಆರಂಭದಲ್ಲಿ ಪಡೆದುಕೊಂಡ ಮುನ್ನಡೆಯನ್ನು ಕೊನೆ ತನಕ ಕಾಯ್ದುಕೊಂಡು ಭರ್ಜರಿ ಗೆಲುವು ಸಾಧಿಸಿದೆ. ಸಂಸದ ಪ್ರಕಾಶ್ ಹುಕ್ಕೇರಿ ಅವರ ಪುತ್ರ ಗಣೇಶ್ ಹುಕ್ಕೇರಿ ಅವರು ಪ್ರಪ್ರಥಮ ಬಾರಿಗೆ ಅಸೆಂಬ್ಲಿಗೆ ಶಾಸಕರಾಗಿ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಬಿಜೆಪಿ ಮಾಡಿದ ರಣತಂತ್ರಗಳು ಫಲಿಸದೆ 'ಮೀಸೆ ಮಾವ' ಹುಕ್ಕೇರಿ ಅವರ ಸ್ವಕ್ಷೇತ್ರದಲ್ಲಿ ಮತ್ತೊಮ್ಮೆ ತಮ್ಮ ಕುಟುಂಬದ ಪ್ರಾಬಲ್ಯ ಮೆರೆಯುವಂತಾಗಿದೆ.
ಪಿಯ ಮಹಾಂತೇಶ ಕವಟಗಿ ಮಠ ಅವರು ಆರಂಭದಿಂದಲೂ ಹಿನ್ನಡೆ ಅನುಭವಿಸುತ್ತಾ ಬಂದರು. 8ನೇ ಸುತ್ತಿನ ನಂತರ 13,263 ಮತಗಳ ಮುನ್ನಡೆ ಪಡೆದರು,ಕೊನೆಗೆ 18ನೇ ಸುತ್ತಿನ ನಂತರ ಒಟ್ಟಾರೆ ಗಣೇಶ್ ಅವರು 94, 636 ಮತಗಳನ್ನು ಗಳಿಸಿ ಜಯಘೋಶ ಮೊಳಗಿಸಿದರೆ, ಮಹಾಂತೇಶ ಅವರು 62,816 ಮತ ಪಡೆದು ಸೋಲೊಪ್ಪಿಕೊಂಡರು. ಗಣೇಶ್ ಹುಕ್ಕೇರಿ ಅವರು 31,820 ಮತಗಳ ಅಂತರದಲ್ಲಿ ಚೊಚ್ಚಲ ಗೆಲುವಿನ ರುಚಿ ಕಂಡರು.[ಬಳ್ಳಾರಿ 'ಕೈ' ವಶ, ರೆಡ್ಡಿಪಾಳಯಕ್ಕೆ ಮುಖಭಂಗ]

ಈ ಉಪಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದಲ್ಲಿ ಶೇ.83.53ರಷ್ಟು ಮತದಾನವಾಗಿತ್ತು. ಈ ಕ್ಷೇತ್ರದಲ್ಲಿ ಸಂಸದ ಪ್ರಕಾಶ್ ಹುಕ್ಕೇರಿ ಅವರ ಪುತ್ರ ಗಣೇಶ್ ಹುಕ್ಕೇರಿ ಹಾಗೂ ಬಿಜೆಪಿಯ ಮಹಂತೇಶ್ ಕವಟಗಿ ಮಠ ಅವರ ನಡುವೆ ನೇರ ಪೈಪೋಟಿ ಏರ್ಪಟ್ಟಿತ್ತು. ಇವರಿಬ್ಬರಲ್ಲದೆ ಕರುನಾಡ ಪಾರ್ಟಿಯ ಬಿ.ವೆಂಕಟೇಶ್ ಸೇರಿದಂತೆ ಒಟ್ಟು 9 ಅಭ್ಯರ್ಥಿಗಳು ಕಣದಲ್ಲಿದ್ದರು. [ಶಿಕಾರಿಪುರದಲ್ಲಿ ಬಿ.ವೈ.ರಾಘವೇಂದ್ರಗೆ ಗೆಲುವು]
ಚಿಕ್ಕೋಡಿ ವಿಧಾನಸಭಾ ಕ್ಷೇತ್ರದ ಮತಎಣಿಕೆ ಚಿಕ್ಕೋಡಿಯ ಆರ್.ಡಿ.ಸಂಯುಕ್ತ ಕಿರಿಯ ಕಾಲೇಜಿನಲ್ಲಿ ನಡೆಯಿತು. ಚಿಕ್ಕೋಡಿ- ಸದಲಗಾ, ಶಿಕಾರಿಪುರ ಹಾಗೂ ಬಳ್ಳಾರಿ ಈ ಮೂರು ಕ್ಷೇತ್ರಗಳಿಗೆ ಆ.21 ರಂದು ಮತದಾನ ನಡೆದಿತ್ತು. ಸೋಮವಾರ(ಆ.25) ಮತ ಎಣಿಕೆ ನಡೆದು ಫಲಿತಾಂಶ ಹೊರಬಂದಿದೆ. ಬಿ.ಎಸ್.ಯಡಿಯೂರಪ್ಪ, ಪ್ರಕಾಶ್ ಹುಕ್ಕೇರಿ, ಬಿ.ಶ್ರೀರಾಮುಲು ಅವರು ಸಂಸದರಾಗಿ ಆಯ್ಕೆಯಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಉಪ ಚುನಾವಣೆ ನಡೆಸಬೇಕಾಯಿತು.












Click it and Unblock the Notifications