ಬೆಳಗಾವಿ : ಸದನದಲ್ಲಿ ಕಣ್ಣೀರಿಟ್ಟ ಜೆಡಿಎಸ್ ಶಾಸಕ
ಬೆಳಗಾವಿ, ಡಿ.18 : ಜೆಡಿಎಸ್ ಪಕ್ಷದ ನಾಯಕರಿಗೂ ಕಣ್ಣೀರಿಗೂ ಅವಿನಾಭಾವ ಸಂಬಂಧವಿದ್ದಂತೆ ಕಾಣುತ್ತದೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಗುರುವಾರದ ಕಲಾಪದ ವೇಳೆ ಜೆಡಿಎಸ್ ಶಾಸಕರೊಬ್ಬರು ಕಣ್ಣೀರು ಹಾಕಿದ್ದಾರೆ.
ಗುರುವಾರ ವಿಧಾನಸೌಭೆಯ ಕಲಾಪದಲ್ಲಿ ಕುಡಿಯುವ ನೀರು ಯೋಜನೆ ಬಗ್ಗೆ ಜಲಸಂಪನ್ಮೂಲ ಸಚಿವ ಎಚ್.ಕೆ. ಪಾಟೀಲ್ ಮಾತನಾಡುತ್ತಿದ್ದಾಗ, ಮಧ್ಯೆ ಪ್ರವೇಶಿಸಿದ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ, ತಮ್ಮ ಕ್ಷೇತ್ರದಲ್ಲಿನ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿಲ್ಲ ಎಂದು ಕಣ್ಣೀರು ಹಾಕಿದರು. [ಸದನದಲ್ಲಿ ಸಾರಿಗೆ ಇಲಾಖೆ ನಷ್ಟದ ಮಾಹಿತಿ ]

ಹಾಸನ ಜಿಲ್ಲೆಯ ಅರಸೀಕೆರೆ ಕ್ಷೇತ್ರದ ಜನರು ಹೇಮಾವತಿ ನದಿಯಿಂದ ಕುಡಿಯುವ ನೀರು ಬರುತ್ತದೆ ಎಂದು ಕಾಯುತ್ತಿದ್ದಾರೆ. ಆದರೆ, ಈವರೆಗೂ ಅವರಿಗೆ ದಕ್ಕಿದ್ದು ಫ್ಲೋರೈಡ್ ಯುಕ್ತ ನೀರು ಮಾತ್ರ ಎಂದು ಶಾಸಕರು ಕಣ್ಣೀರು ಹಾಕಿದರು. ಇದಕ್ಕೆ ಉತ್ತರ ನೀಡಿದ ಸಚಿವರು ಗುತ್ತಿಗೆದಾರರು ಮತ್ತು ಅಧಿಕಾರಿಗಳಿಂದ ಯೋಜನೆ ವಿಳಂಬವಾಗಿದ್ದು ಆದಷ್ಟು ಶೀಘ್ರದಲ್ಲಿ ಯೋಜನೆ ಜಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. [ಸಿಎಂ ಸಿದ್ದರಾಮಯ್ಯ ದೆಹಲಿ ಓಡಾಟಕ್ಕೆ ಹೊಸ ಕಾರು]
ಬರಗಾಲ ಪೀಡಿತವಾಗಿರುವ ಅರಸೀಕೆರೆ ತಾಲೂಕಿನಲ್ಲಿ ಈ ಬಾರಿಯೂ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಕೆರೆ-ಕಟ್ಟೆಗಳು ನೀರಿಲ್ಲದೆ ಒಣಗುತ್ತಿವೆ. ತಾಲ್ಲೂಕಿನ ಎಲ್ಲ ಕೆರೆಗಳಿಗೆ ಯಗಚಿ ಜಲಾಶಯದಿಂದ ನೀರು ತುಂಬಿಸಬೇಕು ಎಂದು ಆಗ್ರಹಿಸಿ ಹಾರನಹಳ್ಳಿ ಶಾಶ್ವತ ನೀರಾವರಿ ಹೋರಾಟ ಸಮಿತಿ, ರಾಜ್ಯ ರೈತ ಸಂಘ ಮತ್ತು ಪ್ರಗತಿಪರ ಸಂಘಟನೆಗಳು ಜುಲೈ 14ರಂದು ಅರಸೀಕೆರೆ ಬಂದ್ ನಡೆಸಿದ್ದರು.












Click it and Unblock the Notifications