'ಏನೂ ಹೇಳಿಕೆ ನೀಡದಂತೆ ಯತ್ನಾಳ್ ಗೆ ಸೂಚನೆ ನೀಡಿದ್ದೇನೆ'
ಬೆಳಗಾವಿ, ಅಕ್ಟೋಬರ್ 15: "ಒಣ ಭೂಮಿಗೆ 16,500, ನೀರಾವರಿಗೆ 23 ಸಾವಿರ, ತೋಟಗಾರಿಕೆ ಬೆಳೆಗೆ 28 ಸಾವಿರ ರುಪಾಯಿ ಪರಿಹಾರ ನೀಡಲು ತೀರ್ಮಾನಿಸಿದ್ದೇವೆ. ಹದಿನೈದು- ಇಪ್ಪತ್ತು ದಿನ ಬಿಟ್ಟು ಮತ್ತೆ ಎಲ್ಲ ಜಿಲ್ಲೆಗಳಿಗೆ ಬರಲಿದ್ದೇನೆ. ಬುಧವಾರ ಬೆಳಗ್ಗೆಯಿಂದ ಸಂಜೆವರೆಗೂ ಮಹಾರಾಷ್ಟ್ರದಲ್ಲಿ ಪ್ರವಾಸ ಮಾಡಲಿದ್ದೇನೆ. ದೇಶದಲ್ಲಿ ಇನ್ನು ಮುಂದೆ ಬರುವ ಯಾವುದೇ ಚುನಾವಣೆ ನಡೆದರೂ ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ಧ" ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಮಾತನಾಡಿದ ಅವರು, ದೇಶದಲ್ಲೇ ಮೊದಲ ಬಾರಿಗೆ ಬೆಳೆ ನಾಶ ಆದವರಿಗೆ ಹೆಚ್ಚು ಹಣ ಕೊಡುವ ತೀರ್ಮಾನವನ್ನು ಕರ್ನಾಟಕ ಮಾಡಿದೆ ಎಂದರು. ಇನ್ನು ಶಿವಸೇನೆ ಮತ್ತು ಬಿಜೆಪಿ ಸೇರಿ ಮಹಾರಾಷ್ಟ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಗೆಲುವು ಸಾಧಿಸಲಿದೆ. ಪ್ರಧಾನಿ ಹೇಳಿದಂತೆಯೇ ಕಾಂಗ್ರೆಸ್ ಮುಕ್ತ ಭಾರತ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರಿಗೆ ಯಾವುದೇ ಹೇಳಿಕೆ ನೀಡದಂತೆ ಸೂಚನೆ ಕೊಟ್ಟಿದ್ದೇನೆ. ಉಮೇಶ್ ಕತ್ತಿ ಅವರ ಜತೆಗೆ ನಮ್ಮ ಮನೆಯಲ್ಲಿ ಮಾತನಾಡಿದ್ದೇನೆ. ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ. ರಾಜು ಕಾಗೆ ಮತ್ತು ಅಶೋಕ ಪೂಜಾರಿ ಅವರಿಗೆ ಕೂಡ ಅಸಮಾಧಾನ ಇಲ್ಲ. ಅವರೊಂದಿಗೆ ಮಾತುಕತೆ ಮಾಡಿದ್ದೇನೆ. ಟಿಕೆಟ್ ತಪ್ಪುವ ಬಿಜೆಪಿ ನಾಯಕರು ಕಾಂಗ್ರೆಸ್ ಕದ ತಟ್ಟುವ ವಿಷಯ ನನ್ನ ಗಮನಕ್ಕಿಲ್ಲ ಎಂದು ಹೇಳಿದರು.

ಪೊಲೀಸ್ ಇಲಾಖೆ ವೇತನಕ್ಕೆ ಸಂಬಂಧಿಸಿದಂತೆ ರಾಘವೇಂದ್ರ ಔರಾದ್ಕರ್ ವರದಿಗೆ ಸಹಿ ಮಾಡಲಾಗಿದೆ. ಶೀಘ್ರದಲ್ಲಿ ಪೊಲೀಸರಿಗೆ ಸಿಹಿ ಸುದ್ದಿ ನೀಡಲಿದ್ದೇವೆ. ಇನ್ನು ಅನರ್ಹ ಶಾಸಕರ ಕುರಿತು ಅ. 25ರ ನಂತರ ಮಾತನಾಡುತ್ತೇನೆ ಎಂದು ಯಡಿಯೂರಪ್ಪ ಅವರು ತಿಳಿಸಿದರು.












Click it and Unblock the Notifications