ಸಾಕಬೇಕೆಂದು ಯಲ್ಲಮ್ಮನ ಜಾತ್ರೆಯಲ್ಲಿ ಬಾಲಕಿ ಅಪಹರಿಸಿದ್ದ ಮಹಿಳೆ
ಬೆಳಗಾವಿ, ಜುಲೈ 29: ತಾನು ಸಾಕಬೇಕೆಂದು 6 ವರ್ಷದ ಬಾಲಕಿಯನ್ನು ಯಲ್ಲಮ್ಮನ ಜಾತ್ರೆಯಲ್ಲಿ ಅಪಹರಿಸಿದ್ದ ಮಹಿಳೆಯನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.
ಸವದತ್ತಿ ಯಲ್ಲಮ್ಮನ ಜಾತ್ರೆಗೆ ರಾಜ್ಯ ಅಂತರಾಜ್ಯಗಳಿಂದ ಲಕ್ಷಾಂತರ ಭಕ್ತರು ಬರುತ್ತಾರೆ. ಹಾಗೆಯೇ ಫೆಬ್ರುವರಿ 21ರಂದು ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಅದರಳ್ಳಿ ತಾಂಡಾದ ಮಾನಪ್ಪ ಲಮಾಣಿ ದಂಪತಿ ತಮ್ಮ ಮಕ್ಕಳೊಂದಿಗೆ ಬಂದಿದ್ದರು. ಜಾತ್ರೆಯ ಗದ್ದಲದಲ್ಲಿ ಲಮಾಣಿ ದಂಪತಿಯ 6 ವರ್ಷದ ಹೆಣ್ಣು ಮಗುವಿನ ಅಪಹರಣವಾಗಿತ್ತು. ಮಗಳು ಕಾಣದೇ ಗಾಬರಿಗೊಂಡ ಪೋಷಕರು ಕಣ್ಣೀರಿಡುತ್ತಾ ಜಾತ್ರೆ ತುಂಬ ಹುಡುಕಾಡಿದರು. ಆದರೆ ಆಕೆ ಸಿಕ್ಕಿರಲಿಲ್ಲ. ಕೂಡಲೇ ಸ್ಥಳೀಯರ ಸೂಚನೆ ಮೇರೆಗೆ ದಂಪತಿ ಸವದತ್ತಿ ಪೊಲೀಸ್ ಠಾಣೆಗೆ ತೆರಳಿ ಅಪಹರಣ ಪ್ರಕರಣ ದಾಖಲಿಸಿದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಬಾಲಕಿಯ ತಲಾಷೆಗೆ ಇಳಿದರು. ಸಿಸಿಟಿವಿ ವಶಕ್ಕೆ ಪಡೆದು ಸ್ಥಳ ಪರಿಶೀಲನೆ ನಡೆಸಿದ ಅವರಿಗೆ ಕೆಲವು ಸುಳಿವುಗಳು ಲಭ್ಯವಾಗಿದ್ದವು. ಕೊಪ್ಪಳ ಜಿಲ್ಲೆಯ ಹುಲಿಗೆಮ್ಮ ದೇವಸ್ಥಾನದ ಬಳಿ ಬಾಲಕಿ ಇರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಅಲ್ಲಿಗೆ ಹೋಗಿ, ಬಾಲಕಿಯನ್ನು ವಶಕ್ಕೆ ಪಡೆದು, ಅಪಹರಿಸಿದ್ದ ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆ ಆಲೂರಿನ ರಂಗವ್ವ ಹಳ್ಳೂರ್ ಎಂಬ ಮಹಿಳೆಯನ್ನು ಬಂಧಿಸಿದ್ದಾರೆ.

ಸಾಕಬೇಕೆಂಬ ಉದ್ದೇಶದಿಂದ ತಾನು ಬಾಲಕಿಯನ್ನು ಅಪಹರಿಸಿದ್ದೆ ಎಂದು ಆರೋಪಿ ಮಹಿಳೆ ಹೇಳಿಕೆ ನೀಡಿದ್ದಾಳೆ. ಪೊಲೀಸರು ತೀವ್ರ ವಿಚಾರಣೆ ಕೈಗೊಂಡಿದ್ದು, ಸದ್ಯ ಅಪಹರಣ ಪ್ರಕರಣ ಸುಖಾಂತ್ಯಗೊಂಡಿದೆ. ಬಾಲಕಿ ಪೋಷಕರ ಮಡಿಲು ಸೇರಿದ್ದಾಳೆ.












Click it and Unblock the Notifications