ಬೆಳಗಾವಿ ಚುನಾವಣೆ; ಜಾರಕಿಹೊಳಿ ಕುಟುಂಬದ ಬೆಂಬಲ ಯಾರಿಗೆ?
ಬೆಳಗಾವಿ, ಏಪ್ರಿಲ್ 06; ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಕಣ ರಂಗೇರುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಬಿರುಸಿನ ಪ್ರಚಾರವನ್ನು ನಡೆಸುತ್ತಿದೆ. ಆದರೆ ಉಪ ಚುನಾವಣೆಯಲ್ಲಿ ಜಾರಕಿಹೊಳಿ ಕುಟುಂಬದ ಬೆಂಬಲ ಯಾರಿಗೆ? ಎಂಬುದು ಸದ್ಯದ ಪ್ರಶ್ನೆ.
ಬೆಳಗಾವಿ ರಾಜಕೀಯದಲ್ಲಿ ಜಾರಕಿಹೊಳಿ ಕುಟುಂಬ ಸಾಕಷ್ಟು ಪ್ರಭಾವವನ್ನು ಹೊಂದಿದೆ. ಜಿಲ್ಲೆಯಲ್ಲಿ ಜಾರಕಿಹೊಳಿ ಸಹೋದರರು ತಮ್ಮದೇ ಆದ ಅಭಿಮಾನಿ ಬಳಗ, ಬೆಂಬಲಿಗರನ್ನು ಹೊಂದಿದ್ದಾರೆ.
ಬೆಳಗಾವಿ ಉಪ ಚುನಾವಣೆ; ಕಣದಲ್ಲಿ ಬಿಜೆಪಿಯದ್ದೇ ಪ್ರಾಬಲ್ಯ!
ಏಪ್ರಿಲ್ 17ರಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ. ವಿವಿಧ ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ಜಾರಕಿಹೊಳಿ ಸಹೋದರರು ಯಾರನ್ನು ಬೆಂಬಲಿಸಲಿದ್ದಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಬೆಳಗಾವಿ ಉಪ ಚುನಾವಣೆ: ನಾಮಪತ್ರ ವಾಪಸ್; ಬಿಜೆಪಿಗೆ ಸಿಹಿ ಸುದ್ದಿ!
ಬೆಳಗಾವಿ ಉಪ ಚುನಾವಣೆಯಲ್ಲಿ ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಕಾಂಗ್ರೆಸ್ ಅಭ್ಯರ್ಥಿ. ಉಪ ಚುನಾವಣೆಯಲ್ಲಿ ಜೆಡಿಎಸ್ ಕಣಕ್ಕಿಳಿದಿಲ್ಲ. ಆದ್ದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ಇದೆ.
ಬೆಳಗಾವಿ ಉಪ ಚುನಾವಣೆ; ಕಾಂಗ್ರೆಸ್ ಗೆಲುವಿಗೆ 60 ನಾಯಕರ ತಂಡ!
ಜಾರಕಿಹೊಳಿ ಸಹೋದದರು
ರಮೇಶ್ ಜಾರಕಿಹೊಳಿ (ಗೋಕಾಕ), ಬಾಲಚಂದ್ರ ಜಾರಕಿಹೊಳಿ (ಅರಭಾವಿ), ಸತೀಶ್ ಜಾರಕಿಹೊಳಿ (ಯಮಕನಮರಡಿ) ರಾಜಕೀಯದಲ್ಲಿದ್ದಾರೆ. ಲಖನ್ ಜಾರಕಿಹೊಳಿ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದಾರೆ. ಈಗ ಅವರು ಬಿಜೆಪಿಯತ್ತ ಮುಖ ಮಾಡಿದ್ದಾರೆ ಎಂಬ ಸುದ್ದಿಯೂ ಹಬ್ಬಿದೆ. ರಾಜಕೀಯವಾಗಿ ಪ್ರಭಾವಿಯಾದ ಕುಟುಂಬ ಯಾರಿಗೆ ಬೆಂಬಲ ನೀಡಲಿದೆ? ಕಾದು ನೋಡಬೇಕು.
ಪ್ರಚಾರದಿಂದ ದೂರ ಉಳಿದ ಸಹೋದರರು
ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಮಂಗಲ ಸುರೇಶ್ ಅಂಗಡಿ ಅಭ್ಯರ್ಥಿ. ನಾಮಪತ್ರ ಸಲ್ಲಿಕೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಆಗಮಿಸಿದ್ದರು. ಆದರೆ, ರಮೇಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ದೂರ ಉಳಿದಿದ್ದರು. ಉಪ ಚುನಾವಣೆ ಪ್ರಚಾರದಲ್ಲಿಯೂ ಬಾಲಚಂದ್ರ ಜಾರಕಿಹೊಳಿ ಕಾಣಿಸಿಕೊಂಡಿಲ್ಲ. ರಮೇಶ್ ಜಾರಕಿಹೊಳಿಗೆ ಕೋವಿಡ್ ಸೋಂಕು ತಗುಲಿದ್ದು, ಆಸ್ಪತ್ರೆಯಲ್ಲಿದ್ದಾರೆ.
ಲಖನ್ ಜಾರಕಿಹೊಳಿ ಬಿಜೆಪಿಗೆ?
ಲಖನ್ ಜಾರಕಿಹೊಳಿ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದಾರೆ. ಅವರು ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಮಂಗಲ ಸುರೇಶ್ ಅಂಗಡಿ ಮತ್ತು ಇತರ ಬಿಜೆಪಿ ನಾಯಕರು ಲಖನ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇದು ಕಾಂಗ್ರೆಸ್ಗೆ ಹಿನ್ನಡೆ ಉಂಟು ಮಾಡಲಿದೆಯೇ? ಕಾದು ನೋಡಬೇಕಿದೆ.
ಸತೀಶ್ ಜಾರಕಿಹೊಳಿ ಪ್ರಭಾವ
ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಸತೀಶ್ ಜಾರಕಿಹೊಳಿ ಜಿಲ್ಲೆಯಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದಾರೆ. ಅವರು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಹ ಪ್ರಚಾರಕ್ಕೆ ಕೈ ಜೋಡಿಸಿದ್ದಾರೆ.