ಬೆಳಗಾವಿ ವಿಚಾರಕ್ಕೆ ಬಂದರೆ ನಾವು ಸುಮ್ಮನಿರಲ್ಲ: ನಾರಾಯಣ ಗೌಡ
ಬೆಳಗಾವಿ, ಜನವರಿ 02: ಬೆಳಗಾವಿ ಜಿಲ್ಲೆಯನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲು ಬಾಳಾ ಠಾಕ್ರೆಗೇ ಸಾಧ್ಯವಾಗಿಲ್ಲ, ಇನ್ನು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಯಿಂದ ಸಾಧ್ಯವಾಗುತ್ತಾ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡ ಹೇಳಿದರು.
ಹುಕ್ಕೇರಿ ಹಿರೇಮಠದಲ್ಲಿ ಮಾತನಾಡಿದ ಅವರು, ಪದೇ ಪದೇ ಮಹಾರಾಷ್ಟ್ರ ಸಿಎಂ ಅವರು ಗಡಿ ವಿವಾದವನ್ನು ಕೆದಕುತ್ತಿದ್ದಾರೆ. ಗಡಿ ವಿಚಾರ ಮುಗಿದು ಹೋಗಿರುವ ಅಧ್ಯಾಯ ಇಲ್ಲಿಗೆ ಕೈ ಬಿಡಬೇಕು ಎಂದು ಎಚ್ಚರಿಸಿದರು.
ಮುಖ್ಯಮಂತ್ರಿ ಠಾಕ್ರೆ ಅವರು ಕನ್ನಡಿಗರು ಹಾಗೂ ಮರಾಠಿಗರ ಮಧ್ಯೆ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ ಎಂದರು.

ಅದೇ ರೀತಿ ಮಹಾರಾಷ್ಟ್ರ ಸಿಎಂ ಕನ್ನಡಿಗರನ್ನು ಕೆರಳಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ತಡೆದುಕೊಳ್ಳುವ ಮತ್ತು ಎದುರಿಸುವ ಶಕ್ತಿ ಕರವೇ ಗೆ ಇದೆ. ಗಡಿ ಉಸ್ತುವಾರಿ ಸಚಿವರನ್ನು ರಾಜ್ಯ ಸರ್ಕಾರ ಶೀಘ್ರವೇ ನೇಮಕ ಮಾಡಬೇಕೆಂದು ನಾರಾಯಣ ಗೌಡ ಒತ್ತಾಯಿಸಿದರು.
ಗೋಕಾಕ್ ನಲ್ಲಿ ಮಾತನಾಡಿದ ಸಂದರ್ಭದಲ್ಲಿ, ರಮೇಶ್ ಜಾರಕಿಹೊಳಿ ಅವರು ಇತ್ತೀಚಿಗೆ ಏನೇನೋ ಮಾತನಾಡಿದ್ದಾರೆ. ಇದಕ್ಕೆ ಅವರು ಸ್ಪಷ್ಟನೆ ಕೊಡಬೇಕು. ಕನ್ನಡ ವಿಚಾರಕ್ಕೆ ಬಂದರೆ ಮುಖ್ಯಮಂತ್ರಿನೇ ಆಗಲಿ ಅವರ ಮಾನ ಉಳಿಯುವುದಿಲ್ಲ ಎಂದು ಎಚ್ಚರಿಕೆ ಕೊಟ್ಟರು.
ನಾನು ಈಗಾಗಲೇ ಎಲ್ಲಾ ಜೈಲುಗಳನ್ನು ನೋಡಿ ಬಂದಿದ್ದೇನೆ. ನನಗೆ ಕನ್ನಡಕ್ಕಿಂತ ದೊಡ್ಡದು ಯಾವುದೂ ಇಲ್ಲ, ಎಲ್ಲೇ ಇದ್ದರೂ ಕನ್ನಡ ಪರವಾಗಿ ಮಾತನಾಡುತ್ತೇನೆ ಎಂದರು.












Click it and Unblock the Notifications