Vande Bharat Train: ಬೆಂಗಳೂರು-ಧಾರವಾಡ ವಂದೇ ಭಾರತ್ ಬೆಳಗಾವಿಗೆ ವಿಸ್ತರಣೆ, ಶೆಟ್ಟರ್ ಪತ್ರ
ಬೆಳಗಾವಿ, ಸೆಪ್ಟೆಂಬರ್ 16: ಹುಬ್ಬಳ್ಳಿ-ಬೆಳಗಾವಿ-ಪುಣೆ ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಚಾಲನೆ ನೀಡಲಿದ್ದಾರೆ. ಈಗ ಬೆಳಗಾವಿಯ ಜನರು ಮತ್ತೆ ಕೆಎಸ್ಆರ್ ಬೆಂಗಳೂರು-ಧಾರವಾಡ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡುವ ಬೇಡಿಕೆ ಇಟ್ಟಿದ್ದಾರೆ. ಈ ಬೇಡಿಕೆಗೆ ಸಂಸದ ಜಗದೀಶ್ ಶೆಟ್ಟರ್ ಸಹ ಧ್ವನಿಗೂಡಿಸಿದ್ದು, ರೈಲು ಸೇವೆ ವಿಸ್ತರಣೆ ಮಾಡಬೇಕು ಎಂದು ರೈಲ್ವೆ ಸಚಿವರಿಗೆ ಪತ್ರವನ್ನು ಬರೆದಿದ್ದಾರೆ.
ಸದ್ಯ ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವೆ ರೈಲು ಸಂಖ್ಯೆ 20662/ 20661 ಸಂಚಾರ ನಡೆಸುತ್ತಿದೆ. ಈ ಬಿಳಿ ಬಣ್ಣದ 8 ಬೋಗಿಯ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಬೇಕು ಎಂಬುದು ಬೇಡಿಕೆ. ಇದಕ್ಕೆ ರೈಲ್ವೆ ಇಲಾಖೆ ಒಪ್ಪಿಗೆ ಸಿಕ್ಕಿದೆ, ಪ್ರಾಯೋಗಿಕ ಸಂಚಾರವೂ 2023ರ ನವೆಂಬರ್ನಲ್ಲಿ ಪೂರ್ಣಗೊಂಡಿದೆ.

ಸದ್ಯ ರೈಲು ಯಶವಂತಪುರ, ತುಮಕೂರು, ದಾವಣಗೆರೆ, ಎಸ್ಎಸ್ಎಸ್ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ನಿಲುಗಡೆ ಹೊಂದಿದೆ. ಪ್ರಾಯೋಗಿಕ ಸಂಚಾರ ಪೂರ್ಣಗೊಂಡರೂ ಬೆಳಗಾವಿಗೆ ಏಕೆ ರೈಲು ಓಡಿಸುತ್ತಿಲ್ಲ ಎಂಬುದು ಕುಂದಾ ನಗರ ಜನರ ಪ್ರಶ್ನೆಯಾಗಿದೆ. ಈಗ ಈ ಕುರಿತು ಸಂಸದ ಜಗದೀಶ್ ಶೆಟ್ಟರ್ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ಗೆ ಪತ್ರವನ್ನು ಬರೆದಿದ್ದಾರೆ. ರೈಲು ಸೇವೆ ವಿಸ್ತರಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಸಂಸದರ ಪೋಸ್ಟ್: ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. 'ಬೆಳಗಾವಿ ಜನರ ಮಹತ್ವದ ಬೇಡಿಕೆಯಾದ ಬೆಂಗಳೂರು -ಹುಬ್ಬಳ್ಳಿ-ಧಾರವಾಡ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಬೆಳಗಾವಿಯ ವರೆಗೆ ವಿಸ್ತರಿಸಲು ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದೇನೆ' ಎಂದು ಹೇಳಿದ್ದಾರೆ.
'ಪುಣೆ-ಬೆಳಗಾವಿ-ಹುಬ್ಬಳ್ಳಿ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಪ್ರಾರಂಭಿಸಬೇಕು ಎಂಬ ನಮ್ಮ ಮನವಿಗೆ ಸ್ಪಂದಿಸಿ, ನಮ್ಮ ಬೆಳಗಾವಿ ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸಲು ಇಂದು (ಸೆಪ್ಟೆಂಬರ್ 16) ಪುಣೆ-ಬೆಳಗಾವಿ-ಹುಬ್ಬಳ್ಳಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಂದ ಚಾಲನೆ ದೊರೆಯಲಿರುವುದು ಅತ್ಯಂತ ಸಂತಸದ ಸಂಗತಿ. ಇದಕ್ಕಾಗಿ ನಿಮಗೆ ತುಂಬು ಹೃದಯದ ಧನ್ಯವಾದಗಳು' ಎಂದು ತಿಳಿಸಿದ್ದಾರೆ.
'ಇದೀಗ ನಮ್ಮ ಕ್ಷೇತ್ರದ ಜನರ ಮತ್ತೊಂದು ಮಹತ್ವದ ಬೇಡಿಕೆಯಾದ ಬೆಂಗಳೂರು-ಹುಬ್ಬಳ್ಳಿ-ಧಾರವಾಡ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಬೆಳಗಾವಿಯ ವರೆಗೆ ವಿಸ್ತರಿಸಲು ತಮ್ಮಲ್ಲಿ ವಿನಂಬ್ರ ಮನವಿ. ಈ ಹಿಂದೆ ಈ ರೈಲನ್ನು ಬೆಳಗಾವಿಯ ವರೆಗೆ ಟ್ರಯಲ್ ರನ್ ಮಾಡಿದಾಗ ಅದು ಯಶಸ್ವಿಯಾಗಿತ್ತು. ತಾಂತ್ರಿಕ ಕಾರಣಗಳನ್ನು ನೀಡಿದ ರೈಲ್ವೆ ಅಧಿಕಾರಿಗಳು ಹೊಸ ವೇಳಾಪಟ್ಟಿಯನ್ನು ಆರಂಭಿಸುವ ಪ್ರಕ್ರಿಯೆಯನ್ನು ನಿಲ್ಲಿಸಿದ್ದಾರೆ. ಈ ಎಲ್ಲ ಮಾಹಿತಿಗಳನ್ನು ನಾನು ಈಗಾಗಲೇ ನಿಮ್ಮೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ ಸಂದರ್ಭದಲ್ಲಿ ತಿಳಿಸಿದ್ದೇನೆ' ಎಂದು ಪತ್ರದಲ್ಲಿ ವಿವರಿಸಿದ್ದಾರೆ.
'ಕ್ಷೇತ್ರದ ಜನರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಬೆಂಗಳೂರು-ಹುಬ್ಬಳ್ಳಿ-ಧಾರವಾಡ ವಂದೇ ಭಾರತ್ ಸೇವೆಗಳನ್ನು ಬೆಳಗಾವಿ (ಕರ್ನಾಟಕ) ವರೆಗೆ ವಿಸ್ತರಿಸಲು ನೀಡಿದ ಮನವಿಯನ್ನು ತಾವು ಪರಿಶೀಲಿಸುವಂತೆ ನಾನು ಮತ್ತೊಮ್ಮೆ ವಿನಂತಿಸುತ್ತೇನೆ' ಎಂದು ಪತ್ರದಲ್ಲಿ ಶೆಟ್ಟರ್ ಮನವಿ ಮಾಡಿದ್ದಾರೆ.












Click it and Unblock the Notifications