ಬೆಳಗಾವಿಯಲ್ಲಿ ದಾಖಲೆ ರಹಿತ ಎರಡು ಕೋಟಿ ನಗದು ಪತ್ತೆ- ಓರ್ವ ಅರೆಸ್ಟ್
ಬೆಳಗಾವಿ ಏಪ್ರಿಲ್ 5: ದಾಖಲೆ ರಹಿತ ಎರಡು ಕೋಟಿ ನಗದು ಹಣವನ್ನು ಬೆಳಗಾವಿಯ ಪೊಲೀಸರು ಜಪ್ತಿ ಮಾಡಿರುವುದು ಬೆಳಕಿಗೆ ಬಂದಿದೆ. ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಟೋಲ್ ಗೇಟ್ನಲ್ಲಿ ಈ ಮಹಾಬೇಟೆ ನಡೆದಿದೆ.
ರಾಜ್ಯ ಸಾರ್ವತ್ರಿಕ ಚುನಾವಣೆ ಬೆನ್ನಲ್ಲೆ ಹಣದ ಹೊಳೆ ಎಲ್ಲೆಡೆ ಹರಿದಾಡುತ್ತಿದೆ. ಚೆಕ್ ಪೋಸ್ಟ್, ವಾಹನ ತಪಾಸಣೆ, ದಾಳಿ ವೇಳೆ ಕಂತೆ ಕಂತೆ ನೋಟು, ಚಿನ್ನಾಭರಣ, ಇನ್ನಿತರ ವಸ್ತುಗಳು ಪತ್ತೆಯಾಗುತ್ತಿವೆ. ಸೂಕ್ತ ದಾಖಲೆಗಳಿಲ್ಲದೆ ಹಣ ಇತರ ವಸ್ತುಗಳ ಸಾಗಣೆ ಮಾಡುತ್ತಿರುವವರನ್ನು ಪೊಲೀಸರು ಬಂಧಿಸುತ್ತಿದ್ದಾರೆ.

ರಾಜ್ಯದಲ್ಲಿ ನೀತಿ ಸಂಹಿತಿ ಜಾರಿಯಲ್ಲಿದ್ದು ಪೊಲೀಸ್ ತಪಾಸಣೆ ಎಲ್ಲೆಡೆ ಚುರುಕುಗೊಂಡಿದೆ. ಕಳೆದ ದಿನ ರಾತ್ರಿ ಬೆಳಗಾವಿಯಲ್ಲಿ ಮಹಾಬೇಟೆಯಲ್ಲಿ ನಗದು ಹಣ ಬಸ್ನಲ್ಲಿ ಪತ್ತೆಯಾಗಿದೆ. ಮುಂಬೈನಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ನಲ್ಲಿ (KA 70 1459)ನಲ್ಲಿ ನಗದು ಹಣ ಸಿಕ್ಕಿದೆ. KA 70 1459 ಬಸ್ ಅನ್ನು ನಸುಕಿನಜಾವ 3.30ರ ವೇಳೆ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಟೋಲ್ ಗೇಟ್ನಲ್ಲಿ ತಪಾಸಣೆ ನಡೆಸಿದಾಗ ಈ ಹಣ ಸಿಕ್ಕಿದೆ.
ಚುನಾವಣಾ ಕಾರ್ಯನಿರತ ಎಫ್ಎಸ್ ಟಿ ಹಾಗೂ ಪೊಲೀಸ್ ಅಧಿಕಾರಿಗಳ ತಂಡ ಜಂಟಿಯಾಗಿ ಪರಿಶೀಲನೆ ನಡೆಸಿದಾಗ ದಾಖಲೆ ರಹಿತ ಅಕ್ರಮ ಹಣ ಪತ್ತೆಯಾಗಿದೆ. ಈ ಬಗ್ಗೆ ಪ್ರಕಣ ದಾಖಲಿಸಿಕೊಂಡ ಪೊಲೀಸರು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, 'ಸುದ್ದಿ ತಿಳಿದ ತಕ್ಷಣವೇ ತಮ್ಮ ತಂಡದೊಂದಿಗೆ ಪ್ರಕರಣವನ್ನು ಪರಿಶೀಲಿಸಿದ್ದೇವೆ. ಹಿರೇಬಾಗೇವಾಡಿ ಠಾಣೆಯಲ್ಲಿ ಕೆ.ಪಿ.ಆ್ಯಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿರುತ್ತದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿರುತ್ತದೆ' ಎಂದರು.

ಡಿಸಿಪಿ ಸ್ನೇಹಾ, ಗ್ರಾಮೀಣ ಎಸಿಪಿ ಗೋಪಾಲಕೃಷ್ಣ ಗೌಡರ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಚುನಾವಣಾಧಿಕಾರಿ ರಾಜಶೇಖರ್ ಡಂಬಳ, ಸಿಪಿಐ ಅಮರೇಶ್, ಎಫ್.ಎಸ್.ಟಿ. ತಂಡದ ಶಂಭುಲಿಂಗಪ್ಪ, ರಾಜೇಂದ್ರ ಮೊರಬದ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪೊಲೀಸ್ ಹಾಗೂ ಎಫ್.ಎಸ್.ಟಿ. ತಂಡದ ಕಾರ್ಯವನ್ನು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹಾಗೂ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಅವರು ಶ್ಲಾಘಿಸಿದ್ದಾರೆ.
ಅಗಡಿ ಚೆಕ್ ಪೋಸ್ಟ್ ಬಳಿ ಹಣ ಪತ್ತೆ
ಈ ಹಿಂದೆ ಅಗಡಿ ಚೆಕ್ ಪೋಸ್ಟ್ ಬಳಿ ಸೂಕ್ತ ದಾಖಲೆ ಇಲ್ಲದೇ ಸ್ಕೂಟಿಯಲ್ಲಿ ಸಾಗಿಸುತ್ತಿದ್ದ ₹3.39 ಲಕ್ಷ ಹಣವನ್ನು ವಶಪಡಿಸಿಕೊಳ್ಳಲಾಗಿತ್ತು. ಉತ್ತರಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನ ಅಗಡಿ ಚೆಕ್ ಪೋಸ್ಟ್ನಲ್ಲಿ ಚುನಾವಣಾ ಅಧಿಕಾರಿಗಳು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಸ್ಕೂಟಿಯಲ್ಲಿ ಹಣ ಪತ್ತೆಯಾಗಿರುವುದು ಕಂಡುಬಂದಿತ್ತು.
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತೆರೆದಿರುವ ಅಗಡಿ ಚೆಕ್ ಪೋಸ್ಟ್ನಲ್ಲಿ ವಾಹನ ತಪಾಸಣೆ ಕಾರ್ಯ ಚುರುಕಾಗಿ ನಡೆಯುತ್ತಿದೆ. ಪಟ್ಟಣದ ನಿವಾಸಿಯೊಬ್ಬರು ಹುಬ್ಬಳ್ಳಿಯಿಂದ ಕಲಘಟಗಿ ಮಾರ್ಗವಾಗಿ ಸ್ಕೂಟಿಯಲ್ಲಿ ಬರುತ್ತಿದ್ದರು. ಈ ವೇಳೆ ಚೆಕ್ ಪೋಸ್ಟ್ನಲ್ಲಿರುವ ಸಿಬ್ಬಂದಿ ಸ್ಕೂಟಿಯನ್ನು ತಪಾಸಣೆ ನಡೆಸಿದಾಗ ಹಣ ಪತ್ತೆಯಾಗಿದೆ.

ರಾಜ್ಯ ವಿಧಾನಸಭಾ ಚುನಾವಣೆ 2023
ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದ ಚುನಾವಣೆ ನಡೆಯಲಿದ್ದು, ಏಪ್ರಿಲ್ 13 ರಂದು ಚುನಾವಣೆಗೆ ಅಧಿಕೃತ ಅಧಿಸೂಚನೆ ಪ್ರಕಟವಾಗಲಿದೆ. ಏಪ್ರಿಲ್ 20ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಏಪ್ರಿಲ್ 21ಕ್ಕೆ ನಾಮ ಪತ್ರ ಪರಿಶೀಲನೆ ನಡೆಯಲಿದ್ದು, ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ. ಇನ್ನೂ ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಶನಿವಾರ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಮೇ 15 ರೊಳಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ ಎಂದು ರಾಜೀವ್ ಕುಮಾರ್ ತಿಳಿಸಿದ್ದರು.












Click it and Unblock the Notifications