ಬಿಜೆಪಿ ಭದ್ರಕೋಟೆಯಲ್ಲಿ ಈ ಬಾರಿ ಅಷ್ಟು ಸುಲಭವಿಲ್ಲ ಚುನಾವಣೆ!
ಬೆಳಗಾವಿ, ಏಪ್ರಿಲ್ 27; ಪ್ರತಿ ಬಾರಿಯ ಚುನಾವಣೆಯಲ್ಲಿ ಗಮನ ಸೆಳೆಯುವ ಜಿಲ್ಲೆ ಬೆಳಗಾವಿ. ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದ ಜಿಲ್ಲೆ 18 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ರಾಜ್ಯ ರಾಜಕೀಯದ ಮೇಲೆ ತನ್ನದೇ ಆದ ಪ್ರಭಾವವನ್ನು ಹೊಂದಿದೆ. ಈ ಬಾರಿಯೂ ಬೆಳಗಾವಿಯಲ್ಲಿ ಯಾರು ಹೆಚ್ಚು ಸ್ಥಾನಗಳಿಸುತ್ತಾರೆ? ಎಂಬ ಲೆಕ್ಕಾಚಾರ ಆರಂಭವಾಗಿದೆ.
ಕಳೆದ ಎರಡು ದಶಕಗಳಿಂದ ಬೆಳಗಾವಿ ಬಿಜೆಪಿ ಭದ್ರಕೋಟೆಯಾಗಿದೆ. ಆದರೆ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಅಂತಹ ಕಾಂಗ್ರೆಸ್ನ ಪ್ರಭಾವಿ ನಾಯಕರು ಜಿಲ್ಲೆಯಲ್ಲಿದ್ದಾರೆ. ಬಿಜೆಪಿ ಟಿಕೆಟ್ ಸಿಗದೇ ಅಸಮಾಧಾನಗೊಂಡು ಮಾಜಿ ಸಚಿವ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರಿದ್ದಾರೆ. ಆದ್ದರಿಂದ ಬೆಳಗಾವಿ ಚುನಾವಣಾ ಕಣ ಕುತೂಹಲಕ್ಕೆ ಕಾರಣವಾಗಿದೆ.

ಬಿಜೆಪಿ ಪ್ರಭಾವಿ ನಾಯಕರಾದ ಸುರೇಶ ಅಂಗಡಿ, ಉಮೇಶ್ ಕತ್ತಿ ಇಲ್ಲದೇ ಜಿಲ್ಲೆಯಲ್ಲಿ ಚುನಾವಣೆ ಎದುರಿಸುತ್ತಿದೆ. ಸದ್ಯಕ್ಕೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜಿಲ್ಲೆಯ ಪ್ರಭಾವಿ ನಾಯಕ ಲಕ್ಷ್ಮಣ ಸವದಿ ಪಕ್ಷಾಂತರ ಸಹ ಜಿಲ್ಲಾ ರಾಜಕೀಯದ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದೆ. 18 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ಇದೆ. ಆದರೆ ಎಷ್ಟು ಕ್ಷೇತ್ರ ಯಾರಿಗೆ ಸಿಗಲಿದೆ? ಎಂಬುದು ಪ್ರಶ್ನೆ.
2018ರ ಚುನಾವಣೆ; ಬೆಳಗಾವಿಯಲ್ಲಿ ಬಿಜೆಪಿ ಪ್ರಬಲವಾಗಿದೆ 2018ರ ಚುನಾವಣೆಯೆಲ್ಲಿ ಬಿಜೆಪಿ 10 ಮತ್ತು ಕಾಂಗ್ರೆಸ್ 8 ಕ್ಷೇತ್ರಗಳಲ್ಲಿ ಜಯಗಳಿಸಿದ್ದವು. ಆದರೆ 2019ರಲ್ಲಿ ಇದು ಬದಲಾಯಿತು. ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಮತ್ತು ಶ್ರೀಮಂತ ಪಾಟೀಲ್ ಕಾಂಗ್ರೆಸ್ ತೊರೆದು, ಬಿಜೆಪಿ ಸೇರಿದರು. ಈ ಬಾರಿ ಲಕ್ಷ್ಮಣ ಸವದಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ದೂರವಾಗಿರುವುದು. ಸುರೇಶ್ ಅಂಗಡಿ, ಉಮೇಶ್ ಕತ್ತಿ ಅನುಪಸ್ಥಿತಿ, ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರಿರುವುದು ಈ ಬಾರಿ ಬಿಜೆಪಿಗೆ ಜಿಲ್ಲೆಯಲ್ಲಿ ತುಸು ಹಿನ್ನಡೆ ಉಂಟು ಮಾಡಬಹುದು ಎಂಬುದು ಸದ್ಯದ ಚಿತ್ರಣವಾಗಿದೆ. ಆದರೆ ರಮೇಶ್ ಜಾರಕಿಹೊಳಿ ಪ್ರಭಾವವನ್ನು ಕಡೆಗಣಿಸುವಂತೆಯೂ ಇಲ್ಲ.
ಶೇ 40ರಷ್ಟು ಮರಾಠಿ ಭಾಷಿಕರು ಬೆಳಗಾವಿಯಲ್ಲಿದ್ದಾರೆ. ಎಂಇಎಸ್ ಬೆಳಗಾವಿ-ಕರ್ನಾಟಕ ಗಡಿ ವಿಚಾರವನ್ನು ಜೀವಂತವಾಗಿಟ್ಟು ಚುನಾವಣೆಯಲ್ಲಿ ಬಿಜೆಪಿ ಪ್ರಭಾವ ಕುಗ್ಗಿಸಲು ಪ್ರಯತ್ನವನ್ನು ಸಹ ಪಡಲಿದೆ. 4-5 ಕ್ಷೇತ್ರಗಳಲ್ಲಿ ಎಂಇಎಸ್ ಪ್ರಭಾವ ಹೊಂದಿದೆ ಎಂದು ಅಂದಾಜಿಸಲಾಗಿದೆ. ಮೊದಲಿನಿಂದಲೂ ಜೊಲ್ಲೆ, ಜಾರಕಿಹೊಳಿ ಮತ್ತು ಕತ್ತಿ ಕುಟುಂಬಗಳು ಜಿಲ್ಲಾ ರಾಜಕೀಯದ ಮೇಲೆ ಪ್ರಭಾವ ಹೊಂದಿವೆ.
ಜಾರಕಿಹೊಳಿ ಕುಟುಂಬದಲ್ಲಿಯೇ ಗೋಕಾಕ್ನಿಂದ ರಮೇಶ್ ಜಾರಕಿಹೊಳಿ, ಅರಭಾವಿಯಿಂದ ಬಾಲಚಂದ್ರ ಜಾರಕಿಹೊಳಿ ಬಿಜೆಪಿಯ ಅಭ್ಯರ್ಥಿಗಳು. ಯಮಕನಮರಡಿಯಿಂದ ಸತೀಶ್ ಜಾರಕಿಹೊಳಿ ಕಾಂಗ್ರೆಸ್ನಿಂದ ಕಣಕ್ಕಿಳಿಯುತ್ತಾರೆ. ಉಳಿದಂತೆ ಬೆಳಗಾವಿ ಗ್ರಾಮೀಣದಿಂದ ಲಕ್ಷ್ಮೀ ಹೆಬ್ಬಾಳ್ಕರ್, ಅಥಣಿಯಿಂದ ಲಕ್ಷ್ಮಣ ಸವದಿ ಕಾಂಗ್ರೆಸ್ ಅಭ್ಯರ್ಥಿಗಳು ಜಿಲ್ಲೆಯಲ್ಲಿ ಪ್ರಭಾವ ಹೊಂದಿರುವ ನಾಯಕರು.
ರಮೇಶ್ ಜಾರಕಿಹೊಳಿ ಲಕ್ಷ್ಮೀ ಹೆಬ್ಬಾಳ್ಕರ್, ಲಕ್ಷ್ಮಣ ಸವದಿ ಸೋಲಿಸಲು ಪಣತೊಟ್ಟು ತಂತ್ರ ರೂಪಿಸುತ್ತಿದ್ದಾರೆ. ಅಲ್ಲದೇ ಲಕ್ಷ್ಮಣ ಸವದಿಗೆ ಟಿಕೆಟ್ ಕೈತಪ್ಪಲು ರಮೇಶ್ ಜಾರಕಿಹೊಳಿ ತಮ್ಮ ಆಪ್ತ ಮಹೇಶ್ ಕುಮಟಳ್ಳಿ ಪರವಾಗಿ ನಿಂತಿದ್ದು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ರಮೇಶ್ ಜಾರಕಿಹೊಳಿ ಹಸ್ತಕ್ಷೇಪದ ಬಗ್ಗೆ ಬಿಜೆಪಿ ನಾಯಕರು ಅಸಮಾಧಾನಗೊಂಡಿರುವುದು ಗುಟ್ಟಾಗಿ ಏನೂ ಉಳಿದಿಲ್ಲ.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಜಗದೀಶ್ ಶೆಟ್ಟರ್ ಮತ್ತು ಅಥಣಿಯಲ್ಲಿ ಲಕ್ಷ್ಮಣ ಸವದಿ ಸೋಲಿಸಬೇಕು ಎಂದು ಬಿಜೆಪಿ ನಾಯಕರು ತಂತ್ರ ತೂಪಿಸುತ್ತಿದ್ದಾರೆ. ಅಥಣಿಯಲ್ಲಿ ಆಪ್ತನನ್ನು ಗೆಲ್ಲಿಸಲು ರಮೇಶ್ ಜಾರಕಿಹೊಳಿ ಸಾಕಷ್ಟು ಶ್ರಮಿಸಬೇಕಿದೆ. ಜೊತೆಗೆ ಜಿಲ್ಲೆಯಲ್ಲಿಯೂ ಹೆಚ್ಚು ಸ್ಥಾನಗಳನ್ನು ಪಕ್ಷಕ್ಕೆ ತಂದುಕೊಡಬೇಕಿದೆ.












Click it and Unblock the Notifications