ಸರ್ಕಾರದ ಕಣ್ಣು ತೆರೆಸಲು ಪ್ರತಿಭಟನೆ : ಲಕ್ಷಣ್ ಸವದಿ
ಬೆಳಗಾವಿ, ಡಿಸೆಂಬರ್ 09 : 'ರೈತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬಿಜೆಪಿ ರೈತ ಸಮಾವೇಶ ನಡೆಸಿ ಸರ್ಕಾರದ ಕಣ್ಣು ತೆರೆಸಲಿದೆ' ಎಂದು ಕರ್ನಾಟಕ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಲಕ್ಷಣ್ ಸವದಿ ಹೇಳಿದರು.
ಬೆಳಗಾವಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, 'ಎಚ್.ಡಿ.ಕುಮಾರಸ್ವಾಮಿ ಅವರು ರೈತರ ಸಾಲಮನ್ನಾ ಭರವಸೆ ನೀಡಿದ್ದರು. ಸರ್ಕಾರಕ್ಕೆ 6 ತಿಂಗಳ ಸಮಯ ನೀಡಿದೆವು. ಸರ್ಕಾರ ಎಲ್ಲರ ಸಾಲ ಮನ್ನಾ ಮಾಡಬೇಕು' ಎಂದು ಒತ್ತಾಯಿಸಿದರು.
'19 ದ್ವಿದಳ ಧಾನ್ಯ ಬೆಳೆಗಳಿಗೆ ಕೇಂದ್ರ ಸರ್ಕಾರ ವೈಜ್ಞಾನಿಕ ಬೆಲೆ ನಿಗದಿ ಮಾಡಿದೆ. ರೈತರ ಬೆಳೆಗಳ ಖರೀದಿ ಕೇಂದ್ರವನ್ನು ರಾಜ್ಯ ಸರ್ಕಾರ ಆರಂಭಮಾಡಿಲ್ಲ. ವಿಜಯಪುರ, ಬೆಳಗಾವಿ, ಬಾಗಲಕೋಟೆ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಬರಬೇಕಾದ ಕಬ್ಬಿನ ಬಾಕಿ ಬಿಲ್ ಕೊಟ್ಟಿಲ್ಲ' ಎಂದು ಆರೋಪಿಸಿದರು.

'ಮೂರು ಜಿಲ್ಲೆಯ 46 ಸಕ್ಕರೆ ಕಾರ್ಖಾನೆಗಳು ಸೇರಿ ಒಟ್ಟು 1630 ಕೋಟಿ ಕಬ್ಬಿನ ಬಿಲ್ ಕೊಡಬೇಕಿದೆ. ಅದೇ ರೀತಿ ಕಲಬುರಗಿ, ಬೀದರ್ ಜಿಲ್ಲೆಯ ಕಬ್ಬಿನ ಬಿಲ್ ಇನ್ನೂ ಕೊಟ್ಟಿಲ್ಲ. ಎಸ್ಎಪಿ ಕಾನೂನಿನ ಅಡಿ ಮೊದಲ ಕಂತು ಹಾಗೂ ಲಾಭಾಂಶದಲ್ಲಿ 2ನೇ ಬಿಲ್ ಕೊಡಬೇಕಿತ್ತು. ಆದರೆ, ಕಾರ್ಖಾನೆ ಲಾಭಿಗೆ ಮಣಿದು ರಾಜ್ಯ ಕ್ರಮ ಕೈಗೊಂಡಿಲ್ಲ' ಎಂದರು.
'ರೈತರ ಬೆಳೆ ಹಾನಿಗೆ ಇಲ್ಲಿಯವರೆಗೆ ವಿಮೆ ಸಿಕ್ಕಿಲ್ಲ. ಸಮ್ಮಿಶ್ರ ಸರ್ಕಾರ ಬರ ಪೀಡಿತ ಪ್ರದೇಶದಲ್ಲಿ ಜಾನುವಾರುಗಳಿಗೆ ನೀರು ಒದಗಿಸಿಲ್ಲ. ಕುಡಿಯುವ ನೀರು ಪೂರೈಕೆ ಮಾಡಲು ಕ್ರಮ ಕೈಗೊಂಡಿಲ್ಲ' ಎಂದು ಲಕ್ಷಣ್ ಸವದಿ ಟೀಕಿಸಿದರು.












Click it and Unblock the Notifications