ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ಕಲ್ಲು ತೂರಾಟ, ಪ್ರಕ್ಷುಬ್ಧ ವಾತಾವರಣ
ಬೆಳಗಾವಿ, ಡಿಸೆಂಬರ್ 19: ಕ್ಷುಲ್ಲಕ ಕಾರಣಕ್ಕೆ ಬೆಳಗಾವಿ ನಗರದ ಖಡಕ್ ಗಲ್ಲಿಯಲ್ಲಿ ಸೋಮವಾರ ಮದ್ಯರಾತ್ರಿ ಏಕಾಏಕಿ ಕಲ್ಲು ತೂರಾಟ ನಡೆದಿದ್ದು, ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.
ಸೋಮವಾರ ರಾತ್ರಿ ಖಡಕ್ ಗಲ್ಲಿಯಲ್ಲಿ ಒಂದು ಕೋಮಿನ ಜನ ಕಲ್ಲು ತೂರಾಟ ನಡೆಸಿದ್ದಾರೆ. ಇದಕ್ಜೆ ಪ್ರತಿಯಾಗಿ ಮತ್ತೊಂದು ಕೋಮಿನ ಜನ ಕಲ್ಲು ತೂರಾಟ ನಡೆಸಿದಾಗ ಪರಿಸ್ಥಿತಿ ಉದ್ವಿಗ್ನಗೊಂಡು ನಿರಂತರವಾಗಿ ಕಲ್ಲು ತೂರಾಟ ನಡೆದ ಬಳಿಕ ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಘಟನೆಯಲ್ಲಿ ಎಸಿಪಿ ಶಂಕರ ಮಾರಿಹಾಳ ಪಿಎಸ್ ಐ ಸೌಧಾಗರ ಸೇರಿದಂತೆ ಹಲವು ಪೋಲೀಸರು ಗಾಯಗೊಂಡಿದ್ದಾರೆ.
ಗಲಭೆಯಲ್ಲಿ ಹಲವಾರು ವಾಹನಗಳು ಜಖಂ ಗೊಂಡಿದ್ದು, ಗಲಭೆಗೆ ಕಾರಣ ಏನು ಎಂಬುದು ಗೊತ್ತಾಗಿಲ್ಲ. ಗಲಭೆ ಆರಂಭವಾಗುತ್ತಿದ್ದಂತೆಯೇ ಪೋಲೀಸರು ಸ್ಥಳಕ್ಕೆ ಧಾವಿಸಿ ಲಾಠಿ ಪ್ರಹಾರ ಮಾಡಿ ಗಲಭೆಯನ್ನು ನಿಯಂತ್ರಣ ತಂದಿದ್ದು, ಪರಿಸ್ಥಿತಿ ಈಗ ಸಹಜ ಸ್ಥಿತಿಗೆ ಮರಳಿದೆ.
ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಹೆಚ್ಚಿನ ಪೊಲೀಸ್ ನಿಯೋಜಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಮಚಂದ್ರಪ್ಪ ತಿಳಿಸಿದ್ದಾರೆ. ನಗರದಲ್ಲಿ ಕಳೆದ ಎರಡು ತಿಂಗಳಲ್ಲಿ ನಾಲ್ಕನೇಯ ಬಾರಿಗೆ ಖಡಕ್, ಖಂಜರ್,ದರ್ಬಾರ್ ಮತ್ತು ಭಡಕಲ್ ಗಲ್ಲಿ ಪ್ರದೇಶದಲ್ಲಿ ಹಾಗಾಗ ಗಲಭೆಗಳು ನಡೆಯುತ್ತಲೇ ಇವೆ. ಆದರೆ, ಗಲಭೆಗೆ ಕಾರಣ ಏನೂ ? ಎಂಬುದು ತಿಳಿಯುತ್ತಿಲ್ಲ.