ಬೆಂಗಳೂರಿನಲ್ಲಿ 2083 ಮಂದಿಯಿಂದ ರಾಜಕಾಲುವೆ ಒತ್ತುವರಿ
ಬೆಳಗಾವಿ, ನವೆಂಬರ್ 22 : ಮೂರು ವರ್ಷಗಳ ಕಾಲ ಕೆರೆಗಳ ಅಧ್ಯಯನ ನಡೆಸಿದ ಸ್ಪೀಕರ್ ಕೆ.ಬಿ.ಕೋಳಿವಾಡ ಅಧ್ಯಕ್ಷತೆಯ ಕೆರೆ ಅಧ್ಯಯನ ಸದನ ಸಮಿತಿಯು 247 ಪುಟಗಳ ಸುದೀರ್ಘ ವರದಿಯನ್ನು ಸದನಕ್ಕೆ ಮಂಡಿಸಿ, ಕೆರೆಗಳ ಒತ್ತುವರಿ ಮಾಹಿತಿ, ಒತ್ತುವರಿದಾರರ ಮಾಹಿತಿ, ಒತ್ತುವರಿಯಿಂದ ಆಗಿರುವ ಹಾನಿ, ಒತ್ತುವರಿಗೆ ಸಹಾಯ ಮಾಡಿದ ಅಧಿಕಾರಿಗಳು ಎಲ್ಲದರ ಸಮಗ್ರ ವರದಿ ನೀಡಿದೆ.
ಬೆಂಗಳೂರಿನಲ್ಲಿ 2083 ಮಂದಿ ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವುದಾಗಿಯೂ ಅವರು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಹಾಗೂ ಮುಂದೆ ಕೆರೆ ಒತ್ತುವರಿ ತಡೆಗಟ್ಟಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಸರ್ಕಾರಕ್ಕೆ ಸೂಚನೆಗಳನ್ನು ಸಮಿತಿಯು ನೀಡಿದೆ. ಕೆರೆ ಅಧ್ಯಯನ ಸದನ ಸಮಿತಿ ಮೂರು ವರ್ಷಗಳ ಕಾಲ ಅಧ್ಯಯನ ನಡೆಸಿ ಸದನಕ್ಕೆ ವರದಿ ಸಲ್ಲಿಸಿದ್ದು, ಸಮಿತಿಯ ಅಧ್ಯಕ್ಷರಾದ ಕೆ.ಬಿ.ಕೋಳಿವಾಡ ಅವರು ಇಂದು ಸುವರ್ಣಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ವರದಿಯ ಬಗ್ಗೆ ಮಾಹಿತಿ ನೀಡಿದರು.
ಕೆರೆ ಒತ್ತುವರಿಯಲ್ಲಿ ಮಖ್ಯವಾಗಿ ರಿಯಲ್ ಎಸ್ಟೇಟ್ ದಂಧೆಯವರು, ಸರ್ಕಾರಿ ಅಧಿಕಾರಿಗಳದ್ದೇ ಪ್ರಮುಖ ಪಾತ್ರ ಈ ಬಗ್ಗೆ ನ್ಯಾಯಾಂಗ ವಿಚಾರಣಾ ಸಮಿತಿ ನೇಮಿಸಬೇಕು, ಒತ್ತುವರಿಗೆ ಸಹಕರಿಸಿದ ಅಧಿಕಾರಿಗಳು ಹಾಗೂ ಒತ್ತುವರಿ ಮಾಡಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಹಾಗೂ ಅವರು ಸ್ಥಿರಾಸ್ತಿ ಮತ್ತು ಚರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಸಮಿತಿ ಶಿಫಾರಸ್ಸು ಮಾಡಿದೆ ಎಂದರು.

ಮೂಲಭೂತ ಸೌಲಭ್ಯಕ್ಕಾಗಿ ಒತ್ತುವರಿ
ಸರ್ಕಾರ ಮಾಡಿರುವ ಕೆರೆ ಒತ್ತುವರಿಗಳು ಸಾರ್ವಜನಿಕ ಮೂಲಭೂತ ಸೌಲಭ್ಯ ಕಲ್ಪಿಸಲು ಮಾಡಿರುವಂತದ್ದು ಆದ್ದರಿಂದ ಸರ್ಕಾರಿ ಅತಿಕ್ರಮಣವನ್ನು ತೆರವು ಮಾಡಲಾಗುವುದಿಲ್ಲ, ಸರಕಾರಿ ಅತಿಕ್ರಮಣ ಒಕ್ಕಲೆಬ್ಬಿಸುವಿಕೆಯೂ ಇಲ್ಲ. ಬಿಡಿಎ, ಬಿಬಿಎಂಪಿ ವಿತರಿಸಿದ ಕೆರೆ ಭೂಮಿಯಿಂದಲೂ ಒಕ್ಕಲೆಬ್ಬಿಸುವಂತಿಲ್ಲ ಎಂದು ವರದಿಯಲ್ಲಿ ಸೂಚಿಸಿರುವುದಾಗಿ ಕೋಳಿವಾಡ ಹೇಳಿದರು.

ಪುನಶ್ಚೇತನ ಆಗದ ಕೆರೆಯಿಂದ ಸ್ಥಳಾಂತರ ಇಲ್ಲ
ಕೆರೆ ಪ್ರದೇಶದಲ್ಲಿರುವ ಸ್ಲಂ ಸ್ಥಳಾಂತರಕ್ಕೆ ವರದಿಯಲ್ಲಿ ಶಿಫಾರಸ್ಸು ನೀಡಲಾಗಿದೆ. ಖಾಸಗಿ ಬಿಲ್ಡರ್ಗಳು, ಪ್ಲ್ಯಾಟ್ ಹಂಚಿಕೆ ಕೆರೆಯಲ್ಲಿ ಆಗಿದ್ದರೆ ಆ ಕೆರೆಯ ಪುನಶ್ಚೇತನ ಸಾಧ್ಯವಿದ್ದರೆ ತೆರವು ಮಾಡಬೇಕು. ಪುನಶ್ಚೇತನ ಸಾದ್ಯವಿಲ್ಲದ ಕೆರೆಯನ್ನು ಬಿಲ್ಡರ್ ಒತ್ತುವರಿ ಮಾಡಿಕೊಂಡಿದ್ದರೆ ಅದನ್ನು ಸಕ್ರಮಗೊಳಿವುದು ಮತ್ತು ಕೆರೆಯನ್ನು ನಿರ್ಜೀವ ಕೆರೆ ಎಂದು ಘೋಷಿಸಬಹುದು ಎಂದು ಸಮಿತಿ ಶಿಫಾರಸು ಮಾಡಿದೆ.

ಖಾಸಗಿ ವಾಣಿಜ್ಯ ತೆರವು
ಕೆರೆಯಲ್ಲಿ ಖಾಸಗಿ ವಾಣಿಜ್ಯ ಕಟ್ಟಡಗಳು ನಿರ್ಮಾಣಗೊಂಡಿದ್ದರೆ ತೆರವುಗೊಳಿಸಬೇಕು, ಪುನಶ್ಚೇತನಗೊಳಿಸಲು ಸಾದ್ಯವಿರುವ ಕೆರೆಯನ್ನು ಪುನಶ್ವೇತನಗೊಳಿಸಬೇಕು, ಪುನಶ್ಚೇತನ ಸಾದ್ಯವಿಲ್ಲದ ಕೆರೆಯ ಮೇಲೆ ನಿರ್ಮಿಸಿರೋ ವಾಣಿಜ್ಯ ಕಟ್ಟಡಗಳನ್ನು ಸರಕಾರ ಸ್ವಾಧೀನಪಡಿಸಬೇಕು ಎಂದು ಸಮಿತಿಯು ವರದಿಯಲ್ಲಿ ಸೂಚಿಸಿದೆ.

ನಿರ್ಜೀವ ಕೆರೆ ಘೋಷಣೆ ಅಧಿಕಾರ ವಿಧಾನಸಭೆ
ಕೆರೆಯಲ್ಲಿ ಕಟ್ಟಿರುವ ದೇವಸ್ಥಾನ ಮುಜರಾಯಿ ಇಲಾಖೆ ಸುಪರ್ದಿಗೆ ನೀಡಬೇಕು. ಕೆರೆ ಪುನಶ್ಚೇತನ ಸಾದ್ಯವಿದ್ದರೆ ದೇವಸ್ಥಾನ ತೆರವು ಮಾಡಲೇಬೇಕು. ಮತ್ತು ನಿರ್ಜೀವ ಕೆರೆ ಎಂದು ಘೋಷಿಸುವ ಅಧಿಕಾರ ರಾಜ್ಯದ ವಿಧಾನಮಂಡಲ ತೆಗೆದುಕೊಳ್ಳಬೇಕು. ಈವರೆಗೂ ನಿರ್ಜೀವ ಕೆರೆ ಘೋಷಣೆ ಅಧಿಕಾರ ಸಚಿವ ಸಂಪುಟದ ಬಳಿ ಇತ್ತು.

2083 ಮಂದಿಯಿಂದ ಕಾಲುವೆ ಒತ್ತುವರಿ
ಬೆಂಗಳೂರಿನ ರಾಜಕಾಲುವೆಯನ್ನು 2083 ಜನ ಒತ್ತುವರಿ ಮಾಡಿದ್ದಾರೆ, ರಾಜಕಾಲುವೆ ಒತ್ತುವರಿ ತೆರವಿಗೆ ನಿರ್ದಾಕ್ಷಿಣ್ಯವಾಗಿ ಕ್ರಮ ಕಡ್ಡಾಯವಾಗಿ ಕೈಗೊಳ್ಳಬೇಕು. ಬಫರ್ ಝೋನ್ ಗಳನ್ನು ಕಡ್ಡಾಯವಾಗಿ ನಿರ್ವಹಿಸುವಂತೆಯೂ ಕೆರೆ ಅಧ್ಯಯನ ಸಮಿತಿ ವರದಿ ನೀಡಿದೆ.












Click it and Unblock the Notifications