ಶಿವಾಜಿ ಮೂಲ ಕನ್ನಡ; ಡಿಸಿಎಂ ಗೋವಿಂದ ಕಾರಜೋಳ
ಬೆಳಗಾವಿ, ಜನವರಿ 31; "ಛತ್ರಪತಿ ಶಿವಾಜಿ ಮಹಾರಾಜರ ಮೂಲವೇ ಕನ್ನಡ" ಎಂದು ಹೇಳಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಭವ್ ಠಾಕ್ರೆ ಹೇಳಿಕೆಗೆ ತಿರುಗೇಟು ನೀಡಿದರು.
ಭಾನುವಾರ ಬೆಳಗಾವಿಯಲ್ಲಿ ಮಾತನಾಡಿದ ಗೋವಿಂದ ಕಾರಜೋಳ, "ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದಲ್ಲಿರುವುದು ಸಮ್ಮಿಶ್ರ ಸರ್ಕಾರ. ಕಾಂಗ್ರೆಸ್ ಪಕ್ಷದವರು ಯಾವಾಗ ಅವರನ್ನು ಕಿತ್ತುಹಾಕುತ್ತಾರೆ ಎಂಬ ಭಯ ಉದ್ಭವ್ ಠಾಕ್ರೆಗಿದೆ. ಖುರ್ಚಿ ಉಳಿಸಿಕೊಳ್ಳಲು ಜನರ ಗಮನ ಬೇರೆಡೆ ಸೆಳೆಯುತ್ತಿದ್ದಾರೆ" ಎಂದರು.
"ಉದ್ಭವ್ ಠಾಕ್ರೆ ಇತಿಹಾಸ ಓದಿಲ್ಲ ಎಂದು ತಿಳಿದುಕೊಂಡಿದ್ದೇನೆ. ಛತ್ರಪತಿ ಶಿವಾಜಿ ಮಹಾರಾಜರ ಮೂಲವೇ ಕನ್ನಡ. ಶಿವಾಜಿ ಮಹಾರಾಜರ ಮೂಲಪುರುಷ ಬೆಳ್ಳಿಯಪ್ಪ ಗದಗ ಜಿಲ್ಲೆಯ ಸೊರಟೂರಿನವರು. ಬರ ಬಿದ್ದ ಸಂದರ್ಭದಲ್ಲಿ ಮಹಾರಾಷ್ಟ್ರಕ್ಕೆ ಬೆಳ್ಳಿಯಪ್ಪ ಗುಳೆ ಹೋಗಿದ್ದರು" ಎಂದು ವಿವರಿಸಿದರು.

"ಗುಳೆ ಹೋದ ಬೆಳ್ಳಿಯಪ್ಪರವರು ಮಹಾರಾಷ್ಟ್ರಕ್ಕೆ ಹೋಗಿ ನೆಲೆಸುತ್ತಾರೆ. ಅವರ ನಾಲ್ಕನೇ ತಲೆಮಾರಿಗೆ ಛತ್ರಪತಿ ಶಿವಾಜಿ ಮಹಾರಾಜರು ಬರ್ತಾರೆ. ಶಿವಾಜಿ ಮಹಾರಾಜರ ಮೂಲ ಕನ್ನಡದ ನೆಲ. ಇದನ್ನು ಮಹಾರಾಷ್ಟ್ರ ಸಿಎಂ ಅರ್ಥ ಮಾಡಿಕೊಳ್ಳಬೇಕು" ಎಂದು ತಿಳಿಸಿದರು.
"ಕರ್ನಾಟಕದಲ್ಲಿ ಮರಾಠಿಗರು ಮತ್ತು ಕನ್ನಡಿಗರು ಅಣ್ಣತಮ್ಮಂದಿರಂತೆ ಇದ್ದಾರೆ. ಕರ್ನಾಟಕದಲ್ಲಿ ಭಾಷಾ ಸಮಸ್ಯೆ ಇಲ್ಲ. ಉದ್ಭವ್ ಠಾಕ್ರೆ ಖರ್ಚಿಗಾಗಿ ಕುಲಗೇಡಿಸುವ ಕೆಲಸ ಮಾಡಬೇಡಿ" ಎಂದು ಗೋವಿಂದ ಕಾರಜೋಳ ಸಲಹೆ ನೀಡಿದರು.
ಸರ್ಕಾರ ನಿಭಾಯಿಸಲಿದೆ; ಮಹಾದಾಯಿ ವಿಚಾರದಲ್ಲಿ ಗೋವಾ ಮುಖ್ಯಮಂತ್ರಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಗೋವಿಂದ ಕಾರಜೋಳ, "ಯಾರೂ ಯಾರ ಮಾತು ಕೇಳಬೇಕಾಗಿಲ್ಲ, ನಾವು ಯಾರ ಮಾತು ಕೇಳಬೇಕಾಗಿಲ್ಲ. ನೆಲ, ಜಲ ಪ್ರಶ್ನೆ ಬಂದಾಗ ನಾವು ನಮ್ಮ ನೆಲ-ಜಲ ಪರವಾಗಿ ಇರುತ್ತೇವೆ. ಸರ್ಕಾರ ಅದನ್ನು ನಿಭಾಯಿಸುತ್ತದೆ" ಎಂದರು.
ಹೋರಾಟ ಕೈ ಬಿಡಿ; "ಹೋರಾಟ ಕೈ ಬಿಡಿ ಎಂದು ರೈತರಿಗೆ ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ. ಕಾನೂನು ಒಪ್ಪಿಕೊಳ್ಳಿ, ರೈತರ ಹಿತಾಸಕ್ತಿಗೆ ವಿರುದ್ಧವಾದರೆ ಕಾನೂನು ಬದಲಾಯಿಸಲು ಅವಕಾಶವಿದೆ. ನಾವು ಈ ಹಿಂದೆ ಅನೇಕ ಬಾರಿ ಕಾನೂನು ಬದಲಾಯಿಸಿದ್ದೇವೆ. ದೆಹಲಿಯಲ್ಲಿ ರೈತರು ಮೊಂಡತನದ ಹೋರಾಟ ಬಿಡಬೇಕು" ಎಂದು ಅವರು ತಿಳಿಸಿದರು.












Click it and Unblock the Notifications