ಡಾ. ನಂಜುಂಡಪ್ಪ ವರದಿಯ ಮರುಮೌಲ್ಯಮಾಪನವಾಗಬೇಕು: ಶೆಟ್ಟರ್
ಬೆಳಗಾವಿ, ನವೆಂಬರ್ 20 : ಇಂದಿರಾ ಕ್ಯಾಂಟೀನ್ ನಲ್ಲಿ ವಿತರಿಸುವ ಆಹಾರದ ಪ್ರಮಾಣ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಇದೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸೋಮವಾರ (ನ.20) ನಡೆದ ವಿಧಾನ ಸಭೆಯಲ್ಲಿ ಹೇಳಿದರು.
ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ಗುತ್ತಿಗೆದಾರರಿಂದ ಕಡಿಮೆ ಪ್ರಮಾಣದ ಆಹಾರ ವಿತರಣೆಯಾಗುತ್ತಿದೆ, ಸಾಂಬಾರಿನಲ್ಲಿ ತರಕಾರಿಗಳ ಕೊರತೆಯಿದೆ. ಮೊಸರನ್ನದಲ್ಲಿ ಉತ್ತಮ ಗುಣಮಟ್ಟವಿಲ್ಲ.

ಗುತ್ತಿಗೆದಾರರಿಂದ ಬಡವರಿಗೆ ವಂಚನೆಯಾಗುತ್ತಿದೆ ಹಾಗೂ ಡಾ. ನಂಜುಂಡಪ್ಪ ವರದಿಯ ಜಾರಿ ಸಮರ್ಪಕವಾಗಿಲ್ಲ. ವರದಿಯಲ್ಲಿ ಶಿಫಾರಸು ಮಾಡಿರುವ ಅನುದಾನಗಳನ್ನು ಬೇರೆ ಉದ್ದೇಶಕ್ಕೂ ಬಳಸಿಕೊಳ್ಳಲಾಗುತ್ತಿದೆ ಎಂದರು.
ಇದರಿಂದಲೂ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಅಡ್ಡಿಯಾಗಿದೆ. ಇದರ ಬಗ್ಗೆಯೂ ಸಂಪೂರ್ಣ ತನಿಖೆಯಾಗಬೇಕು 2003ರಿಂದ 2017ರವರೆಗೆ 31 ಸಾವಿರ ಕೋಟಿ ವೆಚ್ಚಮಾಡಬೇಕಿತ್ತು. ನಂಜುಂಡಪ್ಪ ವರದಿಯನ್ವಯ ಇಷ್ಟು ಮೊತ್ತದ ಹಣ ವೆಚ್ಚ ಮಾಡಿಲ್ಲ, ಹಾಗಾದರೆ ಹಿಂದುಳಿದ ತಾಲೂಕುಗಳ ಅಭಿವೃದ್ಧಿ ಹೇಗಾಗುತ್ತದೆ? ಹೈದರಾಬಾದ್ ಕರ್ನಾಟಕ ಭಾಗದ ತಾಲೂಕುಗಳ ಅಭಿವೃದ್ಧಿಗೆ ಒತ್ತು ಕೊಟ್ಟಿಲ್ಲ. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ನೀರಾವರಿ ಅಭಿವೃದ್ಧಿಗೆ ಆದ್ಯತೆ ನೀಡಿಲ್ಲ.
ಆ ಭಾಗಗಳಲ್ಲಿ ಗುಳೇ ಹೋಗುವ ಸಮಸ್ಯೆ ನಿವಾರಣೆಯಾಗಿಲ್ಲ. ಗ್ರಾಮೀಣ ಭಾಗದಲ್ಲಿ ಜನರಿಗೆ ಉದ್ಯೋಗ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಅಪೌಷ್ಠಿಕತೆ ನಿವಾರಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಡಾ. ನಂಜುಂಡಪ್ಪ ಅವರ ವರದಿಯ ಅನುಷ್ಠಾನವನ್ನು ಮರು ಮೌಲ್ಯಮಾಪನ ನಡೆಸಬೇಕು. ವರದಿ ಅನುಷ್ಠಾನ ವಿವರಗಳ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಜಗದೀಶ್ ಶೆಟ್ಟರ್ ಸರ್ಕಾರವನ್ನು ಒತ್ತಾಯಿಸಿದರು.












Click it and Unblock the Notifications