ಬೆಳಗಾವಿ: ಸುವರ್ಣ ಸೌಧದ ಎದುರೇ ಪ್ರತ್ಯೇಕ ರಾಜ್ಯದ ಧ್ವಜಾರೋಹಣ
ಬೆಳಗಾವಿ, ಜು.30: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಜು.31ರಂದು ಬೆಳಗಾವಿ ಸುವರ್ಣಸೌಧದ ಎದುರು ಪ್ರತ್ಯೇಕ ರಾಜ್ಯ ಧ್ವಜಾರೋಹಣ ಮಾಡಲು ವಿವಿಧ ಮಠಾಧೀಶರು ಮುಂದಾಗಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಈಗಾಗಲೇ ಪ್ರತ್ಯೇಕ ರಾಜ್ಯದ ಹೋರಾಟ ಬೇಕಿಲ್ಲ ಎಂದು ಪದೇ ಪದೇ ಸ್ಪಷ್ಟನೆ ನೀಡಿದಾಗ್ಯೂ ಕೂಡ ಪ್ರತ್ಯೇಕತೆಯ ಹೋರಾಟಗಾರರ ಧ್ವನಿದಿನದಿಂದ ದಿನಕ್ಕೆ ಗಟ್ಟಿಯಾಗುತ್ತಲೇ ಇದೆ. ಈಗಾಗಲೇ ಉತ್ತರ ಕರ್ನಾಟಕದ ಹಲವಾರು ಸಂಘಟನೆಗಳು ಆ.2ರಂದು ಉತ್ತರ ಕರ್ನಾಟಕ ಬಂದ್ಗೆ ಕರೆ ನೀಡಿದ್ದು, ಈ ಬಂದ್ಗೆ ಬೆಂಬಲ ನೀಡಬಾರದು ಎಂದು ರಾಜ್ಯ ಸರ್ಕಾರ ಮನವಿ ಮಾಡಿದೆ.
ಆದಾಗ್ಯೂ ಕೂಡ ಹಲವಾರು ಸಂಘಟನೆಗಳು ಈ ಬಂದ್ಗೆ ಬೆಂಬಲ ನೀಡಿದೆ. ಈ ಮಧ್ಯೆ ರಾಜ್ಯ ಸರ್ಕಾರ ಪ್ರತ್ಯೇಕತೆಯ ಕೂಗು ಶಮನಗೊಳಿಸಲು ಉತ್ತರ ಕರ್ನಾಟಕದ ಪ್ರಮುಖ ರಾಜಕಾರಣಿಗಳು, ಸಾಹಿತಿಗಳು ಹೋರಾಟಗಾರರ ಸಭೆಯನ್ನು ಕೆಯಲು ಸಿದ್ಧ ಎಂದು ಘೋಷಿಸಿದೆ.

ಅಲ್ಲದೆ ಹೈದರಾಬಾದ್ ಕರ್ನಾಟಕದ ಹಲವಾರು ಸಂಘಟನೆಗಳು ಪ್ರತ್ಯೇಕ ರಾಜ್ಯದ ಬೇಡಿಕೆಗೆ ವಿರೋಧ ವ್ಯಕ್ತಪಡಿಸಿದೆ. ಜತೆಗೆ ರಾಜ್ಯ ಸಚಿವ ಸಂಪುಟದಲ್ಲಿರುವ ಉತ್ತರ ಕರ್ನಾಟಕದ ಶಾಸಕರು ಬಂದ್ಗೆ ಬೆಂಬಲಿಸದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ರಾಜ್ಯ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್ ಹಾಗೂ ವಿರೋಧ ಪಕ್ಷವಾದ ಬಿಜೆಪಿ ಕೂಡ ಪ್ರತ್ಯೇಕತೆ ಕೂಗಿಗೆ ಓಗೊಡಬಾರದು ಎಂದು ಮನವಿ ಮಾಡಿದ್ದರೂ ಕೂಡ ಆಗಸ್ಟ್ 2ರಂದು ಶತಸಿದ್ಧ ಎಂದು ಉತ್ತರ ಕರ್ನಾಟಕ ಸಂಘಟನೆಗಳು ಸ್ಪಷ್ಟಪಡಿಸಿದೆ.
ಈ ಮಧ್ಯೆ ಮಂಗಳವಾರ ಬೆಳಗಾವಿಯಲ್ಲಿ ಹಲವಾರು ಮಠಾಧೀಶರು ಸುವಷರ್ಣ ಸೌಧದೆದುರೇ ಪ್ರತ್ಯೇಕ ರಾಜ್ಯದ ಧ್ವಜಾರೋಹಣ ಮಾಡಲು ಮುಂದಾಗಿರುವುದು ಬೆಂಕಿಗೆ ತುಪ್ಪ ಸುರಿದಂತಾಗಿದೆ. ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರತ್ಯೇಕ ರಾಜ್ಯದ ಧ್ವಜಾರೋಹಣ ಮಾಡಲು ಮುಂದಾಗುವ ಮಠಾಧೀಶರ ಹಾಗೂ ಹೋರಾಟಗಾರರ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications