ಎರಡನೇ ಮದುವೆಯಾದ ಗಂಡನಿಗೆ ಹೆಂಡತಿಯಿಂದ ಥಳಿತ
ಬೆಳಗಾವಿ, ಅಕ್ಟೋಬರ್ 09 : ಎರಡನೇ ಮದುವೆಯಾದ ಗಂಡನಿಗೆ ಮೊದಲನೇ ಹೆಂಡತಿ ಥಳಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಗಂಡ-ಹೆಂಡತಿ ಜಗಳ ಕಿತ್ತೂರು ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಪ್ರೀತಿಸಿ ವಿವಾಹವಾದ ಹೆಂಡತಿಯನ್ನು ಬಿಟ್ಟು, ಎರಡನೇ ಮದುವೆಯಾಗಿರುವುದು ಮಡಿವಾಳಪ್ಪ ಬಡಿಗೇರ. ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಹಿರೇನಂದಿಹಳ್ಳಿಯ ನಿವಾಸಿ ಮಡಿವಾಳಪ್ಪ ಹೆಂಡತಿಯ ಸ್ನೇಹಿತೆಯನ್ನು ವಿವಾಹವಾಗಿ ಪತ್ನಿಯಿಂದ ಒದೆ ತಿಂದಿದ್ದಾನೆ.

ಬೆಂಗಳೂರಿನ ಸಮೀಪದ ನೆಲಮಂಗಲದಲ್ಲಿ ಕೆಲಸ ಮಾಡಿಕೊಂಡಿದ್ದ ಮಡಿವಾಳಪ್ಪ ಅಲ್ಲಿ ಶಶಿಕಲಾ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಹತ್ತು ವರುಷಗಳ ಕಾಲ ಆಕೆಯ ಜೊತೆ ಸಂಸಾರ ಮಾಡಿದ್ದ.
ನಂತರ ಪತ್ನಿ ಸ್ನೇಹಿತೆ ರಾಧಾಳನ್ನು ವಿವಾಹವಾಗಿ ಹಿರೇನಂದಿಹಳ್ಳಿಗೆ ಕರೆದುಕೊಂಡು ಬಂದಿದ್ದ. ಮೊದಲೇ ವಿವಾಹವಾಗಿ ಎರಡು ಮಕ್ಕಳಿದ್ದ ರಾಧಾಳನ್ನು ಮಡಿವಾಳಪ್ಪ 2ನೇ ವಿವಾಹವಾಗಿದ್ದ. ಈ ವಿಷಯ ತಿಳಿದ ಶಶಿಕಲಾ ಹಿರೇನಂದಿಹಳ್ಳಿಗೆ ಸೋಮವಾರ ಆಗಮಿಸಿ, ಗಂಡನನ್ನು ಹಿಡಿದು ಥಳಿಸಿದ್ದಾಳೆ.
ಈ ವಿಷಯ ತಿಳಿದು ಗ್ರಾಮಸ್ಥರು ಮಡಿವಾಳಪ್ಪ ಮನೆಗೆ ಆಗಮಿಸಿದರು. ಈ ಸಂದರ್ಭದಲ್ಲಿ ಶಶಿಕಲಾ ಅಣ್ಣ ಉಮೇಶ ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿಯು ನಡೆಯಿತು. ನಂತರ ಈ ಪ್ರಕರಣದ ಕಿತ್ತೂರು ಪೊಲೀಸ್ ಠಾಣೆ ಮೆಟ್ಟಿಲೇರಿದೆ.












Click it and Unblock the Notifications