ಬೆಳಗಾವಿಯಲ್ಲಿ ಮನೆಯೊಳಗೇ ನುಗ್ಗಿದೆ ನೀರು: ನೆಲಕಚ್ಚುತ್ತಿವೆ ಸೂರು...
Recommended Video
ಬೆಳಗಾವಿ, ಆಗಸ್ಟ್ 6: ಬೆಳಗಾವಿ ಜಿಲ್ಲೆಯಾದ್ಯಂತ ಊಹೆಗೂ ಮೀರಿ ಮಳೆಯಾಗುತ್ತಿದೆ. ಮಳೆ ನಿಂತುಬಿಟ್ಟರೆ ಸಾಕು ಎಂದು ಜನ ಜಪಿಸುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ, ಮಳೆ ಸೃಷ್ಟಿಸಿರುವ ಅವಾಂತರ.
ಬೆಳಗಾವಿ ಕೊಲ್ಹಾಪುರ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಮಳೆ ನೀರು ತುಂಬಿಕೊಂಡು ಸಂಚಾರ ಬಂದ್ ಆಗಿದೆ. ಇಷ್ಟೇ ಅಲ್ಲ, ಬೆಳಗಾವಿ ನಗರದ ಟಿಳಕವಾಡಿ ಗೋಕಾಕ ಸೇತುವೆಯೂ ಜಲಾವೃತವಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಹಲವೆಡೆ ಸಂಚಾರವೇ ನಿಂತುಹೋಗಿದೆ. ಬೆಳಗಾವಿ, ಬೈಲಹೊಂಗಲ ಮತ್ತು ಖಾನಾಪುರದಲ್ಲಿ ಮಳೆಯಿಂದಾಗಿ ಮನೆಗಳ ಗೋಡೆ ಕುಸಿತವೂ ಆಗಿದೆ. ಸುಮಾರು 300ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.
ಇದೇ ಜಿಲ್ಲೆಯ ಶಾಹಾಪುರ ಪ್ರದೇಶದ ಹುಲಬತ್ತಿ ಕಾಲೋನಿಗೆ ಮಳೆ ನೀರು ನುಗ್ಗಿ ಇಡೀ ಕಾಲೋನಿ ನಡುಗಡ್ಡೆಯಂತೆ ಆಗಿದೆ. ಮಹಾಲಕ್ಷ್ಮಿ ದೇವಸ್ಥಾನ, ಮನೆ ಮುಂದೆ ನಿಲ್ಲಿಸಿದ್ದ ಕಾರು, ಬೈಕ್ ಎಲ್ಲವೂ ನೀರಿನಲ್ಲಿ ತೇಲುತ್ತಿರುವಂತೆ ಕಾಣುತ್ತಿವೆ.
ಮಳೆ: ಕರಾವಳಿಯಲ್ಲಿ ಆರೆಂಜ್ ಅಲರ್ಟ್, ಹಲವು ಕಡೆ ಶಾಲೆಗಳಿಗೆ ರಜೆ
ಸುಮಾರು 200ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಶಿವಾಜಿನಗರ, ಶಾಸ್ತ್ರಿ ನಗರ, ಸಮರ್ಥ ನಗರ, ಹುಲಬತ್ತಿ ಕಾಲೋನಿ, ವಡಗಾವಿ ನಗರದ ಹಲವು ಮನೆಗಳಿಗೆ ಮಳೆ ನೀರು ನುಗ್ಗಿದ್ದು, ನೀರನ್ನು ಮನೆಯಿಂದ ಹೊರಗೆ ಹಾಕುವಲ್ಲೇ ಜನ ನಿರತರಾಗಿದ್ದಾರೆ. ಆದರೆ ಮತ್ತೆ ಮತ್ತೆ ಮಳೆಯಾಗುತ್ತಿರುವುದು ಆ ಪ್ರಯತ್ನವನ್ನು ವಿಫಲಗೊಳಿಸುತ್ತಿದೆ.
ಮಳೆ ನೀರು ತುಂಬಿಕೊಂಡ ಮನೆಯೊಳಗೆ ಮಲಗಲೂ ಆಗದೇ ರಾತ್ರಿಯೆಲ್ಲಾ ನಿದ್ದೆ ಇಲ್ಲದೇ ಜನರು ಪರದಾಡುತ್ತಿದ್ದಾರೆ. ಎರಡನೇ ಮಹಡಿಯಲ್ಲಿ ತಂಗಿ ರಾತ್ರಿ ಕಳೆಯಬೇಕಿದೆ. ಆದರೆ ಇಷ್ಟೆಲ್ಲಾ ಆಗುತ್ತಿದ್ದರೂ ಸ್ಥಳಕ್ಕೆ ಮಹಾನಗರ ಪಾಲಿಕೆ ಸಿಬ್ಬಂದಿ ಭೇಟಿ ನೀಡಿಲ್ಲ. ಇದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆ : ಕೃಷ್ಣಾ ನದಿ ಪ್ರವಾಹ, ಸಂತ್ರಸ್ತರ ರಕ್ಷಣೆ
ಖಾನಾಪುರದಲ್ಲಿ ಮಲಪ್ರಭೆಯ ರೌದ್ರಾವತಾರ: ಖಾನಾಪುರದಲ್ಲಿ ಮಲಪ್ರಭಾ ನದಿ ತುಂಬಿ ರಾಜ್ಯ ಹೆದ್ದಾರಿ ಸೇತುವೆ ಮೇಲೆ ನೀರು ಹರಿಯುತ್ತಿದೆ. ನೀರು ಯಾವಾಗ ಬೇಕಾದರೂ ಹೆಚ್ಚಾಗಬಹುದಾದ್ದರಿಂದ ಸೇತುವೆ ಮೇಲೆ ಸಂಚಾರ ಸ್ಥಗಿತಗೊಳಿಸಲಾಗಿದೆ. ಖಾನಾಪುರ-ಹಳಿಯಾಳ-ಯಲ್ಲಾಪುರ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತವಾಗಿದೆ.
ಮಲಪ್ರಭೆ ನದಿ ದಡದಲ್ಲಿ ಇರುವ ಜನರನ್ನು ಜಿಲ್ಲಾಡಳಿತ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುತ್ತಿದೆ.