ವೈದ್ಯರ ಧರಣಿ: ಆರೋಗ್ಯ ಮಂತ್ರಿಯ ಹಠಮಾರಿತನಕ್ಕೆ ಇನ್ನೆಷ್ಟು ಬಲಿ?
ಬೆಳಗಾವಿ, ನವೆಂಬರ್ 14 : 'ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕಿದ್ರು' ಎನ್ನುವಂತೆ ಖಾಸಗಿ ಆಸ್ಪತ್ರೆಗಳ ವೈದ್ಯರು ಹಾಗೂ ರಾಜ್ಯ ಸರ್ಕಾರದ ನಡುವಿನ ತಿಕ್ಕಾಟಕ್ಕೆ ಈಗಾಗಲೇ ಈಗಾಗಲೇ ಐದು ಜೀವಗಳು ಬಲಿಯಾಗಿವೆ. ಬುಧವಾರವೂ ಸಹ ವೈದ್ಯರು ಉಪವಾಸ ಸತ್ಯಾಗ್ರಹಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಇನ್ನೆಷ್ಟು ಜೀವಗಳು ಉರುಳಲಿವೆಯೋ ಆ ದೇವರೇ ಬಲ್ಲ.
ವೈದ್ಯರ ಪ್ರತಿಭಟನೆಯಿಂದ ಬಲಿಯಾದ ಜೀವಗಳಿಗೆ ಕ್ಷಮೆಯಾಚಿಸದರೇ ಪುನಃ ಆ ಜೀವಗಳು ಬರಲಿವೆಯೋ?. ಮಾನ್ಯ ಆರೋಗ್ಯ ಮಂತ್ರಿಗಳೆ (ರಮೇಶ ಕುಮಾರ್) ವೈದ್ಯರ ಜತೆ ಸಂದಾನ ಮಾಡಿ ಜೀವ ಉಳಿಸಬೇಕಾದವರೇ ನೀವು, ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ 2017 ಮಂಡನೆ ಮಾಡದಿದ್ದರೇ ರಾಜೀನಾಮೆ ನೀಡುವುದಾಗಿ ಬೆದರಿಕೆಯೊಡ್ಡಿದಿರಲ್ಲ ಇದು ಎಷ್ಟು ಸರಿ. ನಿಮ್ಮ ಹಠಮಾರಿತನಕ್ಕೆ ಇನ್ನೇಷ್ಟು ಬಡಪಾಯಿ ಜೀವಗಳನ್ನು ಬಲಿ ತೆಗೆದುಕೊಳ್ಳಲು ತೀರ್ಮಾನಿಸಿದ್ದೀರಿ ಮಾನ್ಯ ಮಂತ್ರಿಗಳೆ.
ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ 2017 (ಕೆಪಿಎಂಇ) ತಿದ್ದುಪಡಿಯಲ್ಲಿನ ಕೆಲವು ಅಂಶಗಳನ್ನು ಕೈಬಿಡುವಂತೆ ಆಗ್ರಹಿಸಿ ಭಾರತೀಯ ವೈದ್ಯ ಸಂಘದ (ಐಎಂಎ) ರಾಜ್ಯ ಘಟಕದ ಸದಸ್ಯರು ಬೆಳಗಾವಿಯ ಸುವರ್ಣ ಸೌಧದ ಸಮೀಪವಿರುವ ತಾರಿಹಾಳದಲ್ಲಿ ನವೆಂಬರ್ 13ರಿಂದ ಧರಣಿ ನಡೆಸುತ್ತಿದ್ದು, ಇದಕ್ಕಾಗಿ ಮಾನ್ಯ ಮುಖ್ಯಮಂತ್ರಿಗಳು ವೈದ್ಯರ ಜತೆ ಸಂದಾನಕ್ಕೆ ಕರೆದು ಒಂದು ತೀರ್ಮಾನಕ್ಕೆ ಬರುವುದಕ್ಕೆ ನಿರ್ಧರಿಸಿದ್ದರೆ, ಮತ್ತೊಂದೆಡೆ ಆರೋಗ್ಯ ಮಂತ್ರಿ ರಮೇಶ್ ಕುಮಾರ್ ರಾಜೀನಾಮೆ ಬೆದರಿ ಹಾಕಿದ್ದಾರೆ.

ಬಲಿಯಾದ ಜೀವಗಳಿಗೆ ಕ್ಷಮೆ ಯಾವ ಪುರುಷಾರ್ಥಕ್ಕೆ?
ವೈದ್ಯರ ಧರಣಿಯಿಂದ ಮಂಗಳವಾರ ಐವರ ಜೀವ ಪಕ್ಷಿ ಹಾರಿ ಹೋಗಿವೆ. ಇದಕ್ಕೆ ಬೇರೆ ಆರೋಗ್ಯ ಮಂತ್ರಿ ರಮೇಶ್ ಕುಮಾರ್ ಕ್ಷಮೆಯಾಚಿಸಿದ್ದಾರೆ. ಈ ಕ್ಷಮೆ ಯಾರಿಗೆ ಬೇಕು ಸ್ವಾಮಿ. ನಿಮ್ಮ ಕ್ಷಮೆಗೆ ಹೋದ ಜೀವಗಳು ಮರಳಿ ಬರುತ್ತವೆಯೋ?. ಮೊದಲ ವೈದ್ಯರು ಮತ್ತು ನಿಮ್ಮ ನಡುವಿನ ಹಗ್ಗ-ಜಗ್ಗಾಟವನ್ನು ನಿಲ್ಲಿಸಿ ಉಂದಾಗುವ ಅನಾಹುತಗಳನ್ನು ತಪ್ಪಿಸಿ ಎನ್ನುವುದು ಅಷ್ಟೇ ನಮ್ಮ ಬಯಕೆ.

ಮಂತ್ರಿಗಳೆ ನಿಮ್ಮ ಮೊಸಳೆ ಕಣ್ಣೀರು ಬೇಕಿಲ್ಲ
ಆರೋಗ್ಯ ಮಂತ್ರಿಗಳೆ ನೀವು ಸದನದಲ್ಲಿ ಮೊಸಳೆ ಕಣ್ಣೀರು ಹಾಕಿದ್ದು ಏತಕ್ಕೆ? ನಿಮ್ಮ ಹಠ ಮಾರಿತನಕ್ಕೆ ಸಾಮಾನ್ಯ ಜನರ ಪ್ರಾಣದ ಜತೆ ಚೆಲ್ಲಾಟವಾಡುತ್ತಿದ್ದೀರಲ್ಲಾ ಇದು ನಿಮಗೆ ಖುಷಿ ನೀಡುತ್ತದೆಯೇ?. ಜನರ ಜೀವದ ಬಗ್ಗೆ ಅಷ್ಟು ಕಾಳಜಿ ಉಳ್ಳವರಾಗಿದ್ದರೇ ಮೊದಲು ನಿಮ್ಮ ಹಠಮಾರಿತನವನ್ನು ಬಿಟ್ಟು ಜೀವ ಕಳೆದುಕೊಳ್ಳು ಬಡಪಾಯಿ ಜನರನ್ನು ರಕ್ಷಿಸಿ.

ಪಟ್ಟು ಸಡಿಲಿಸದ ರಮೇಶ್ ಕುಮಾರ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದ್ದಲ್ಲಿಯೇ ಆರೋಗ್ಯ ಸಚಿವ ರಮೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಿದ್ದುಪಡಿ ವಿಧೇಯಕ ಮಂಡನೆಯಾಗಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ವಿಧೇಯಕ ಮಂಡನೆಯಾಗದಿದ್ದರೆ ನಾನು ಸಚಿವ ಸ್ಥಾನ ತೊರೆಯುತ್ತೇನೆ ಎಂದು ಅವರು ಹೇಳಿದ್ದಾರೆ. ಯಾರದ್ದೋ ಪ್ರತಿಭಟನೆಗೆ ಹೆದರಿ ವಿಧೇಯಕ ಮಂಡನೆ ಆಗದಿದ್ದರೇ ಸರಿ ಹೋಗುವುದಿಲ್ಲ ಎಂದು ರಮೇಶ್ ಕುಮಾರ್ ಸಿಎಂಗೆ ಖಡಕ್ ಆಗಿ ಹೇಳಿದ್ದಾರೆ.

ಮಸೂದೆಗೆ ಪಕ್ಷದಲ್ಲಿಯೇ ವಿರೋಧ
ಮಸೂದೆಯನ್ನು ಮಂಡನೆ ಮಾಡಬಾರದು ಎಂದು ಒತ್ತಾಯಿಸಿ ಖಾಸಗಿ ಆಸ್ಪತ್ರೆಗಳ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಗಳವಾರದಿಂದ ಉಪವಾಸ ನಡೆಸಲಿದ್ದಾರೆ. ಸರ್ಕಾರದ ಜೊತೆ ವೈದ್ಯರು ನಡೆಸಿದ ಮಾತುಕತೆ ಫಲ ನೀಡಿಲ್ಲ. ಮುಂದಿನ ವಾರ ವಿಧೇಯಕ ಮಂಡನೆ ಬಗ್ಗೆ ಚರ್ಚೆ ಮಾಡೋಣ ಎಂದು ಸಿದ್ದರಾಮಯ್ಯ ರಮೇಶ್ ಕುಮಾರ್ ಅವರನ್ನು ಸಮಾಧಾನಪಡಿಸಿದ್ದಾರೆ. ಕೆಲವು ಶಾಸಕರು ವಿಧೇಯಕದ ಪರವಾಗಿದ್ದರೆ, ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಈ ಜೀವಗಳಿಗೆ ಹೊಣೆ ಯಾರು?
ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ 3 ತಿಂಗಳ ಇಬ್ರಾಹಿಂ ಹಾಸನದಲ್ಲಿ ಸಾವನ್ನಪ್ಪಿದ್ದರೆ, ಧಾರವಾಡದಲ್ಲಿ ಡೆಂಗ್ಯೂ ಜ್ವರಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ 12 ವರ್ಷದ ವೈಷ್ಣವಿ ಮೃತಪಟ್ಟಿದ್ದಾಳೆ. ಬೆಳಗಾವಿಯ ಅಥಣಿಯಲ್ಲಿ 12 ವರ್ಷದ ಕಲ್ಲವ್ವಾ ಅಂಬಿ ಮೃತಪಟ್ಟರೆ, ತುಮಕೂರಿನಲ್ಲಿ 26 ವರ್ಷದ ಜ್ಯೋತಿ ಹೃದಯಾಘಾತಗೊಂಡು ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಅಪಘಾತದಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ 25 ವರ್ಷದ ಮಹೇಶ್ ವಾಘ್ಮೋರ್ ಸಾವನ್ನಪ್ಪಿದ್ದರೆ, ಕೊಪ್ಪಳದಲ್ಲಿ ಹೃದಯಾಘಾತದಿಂದ ಚಿಕಿತ್ಸೆ ಸಿಗದೆ 55 ವರ್ಷದ ಗ್ಯಾನಪ್ಪ ಸಾವನ್ನಪ್ಪಿದ್ದು, ಈ ಜೀವಗಳಿಗೆ ಹೊಣೆ ಯಾರು?.












Click it and Unblock the Notifications