ಚಳಿಗಾಲದ ಅಧಿವೇಶನಕ್ಕೆ ಪೊಲೀಸ್ ಸರ್ಪಗಾವಲು
ಬೆಳಗಾವಿ, ಡಿ.8: ಕುಂದಾನಗರಿ ಬೆಳಗಾವಿಯಲ್ಲಿ ಆರಂಭವಾಗಲಿರುವ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಆರು ಸಾವಿರ ಮಂದಿ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ಹತ್ತು ಹಲವು ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಗೃಹ ಇಲಾಖೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಹಿಂದೆಂದೂ ಕಾಣದಷ್ಟು ಬಿಗಿಭದ್ರತೆಯನ್ನು ಕೈಗೊಂಡಿದೆ.
ರೈತರ ಬೆಳೆಗೆ ಸೂಕ್ತ ಬೆಂಬಲ ಬೆಲೆ ಘೋಷಣೆ, ಕಬ್ಬು ಬೆಳೆ ಬಾಕಿ ಹಣ ಬಿಡುಗಡೆ, ಕಳಂಕಿತ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಮಂಗಳವಾರ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದರ ಜತೆಗೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಕನ್ನಡಪರ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ಪ್ರತಿಭಟನೆ ನಡೆಸಲು ಮುಂದಾಗಿವೆ.
ಮಹಾಮೇಳವಕ್ಕೆ ಅನುಮತಿ: ಡಿ. 9ರಿಂದ 20ರ ವರೆಗೆ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕಾಗಿಯೇ ಒಟ್ಟು ಆರು ಸಾವಿರ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಎಂಇಎಸ್ ಆಯೋಜನೆಯ ಮಹಾಮೇಳವಕ್ಕೆ ಡಿ.9 ರಂದು ಬೆಳಗ್ಗೆ 10 ರಿಂದ 3 ಗಂಟೆ ತನಕ ಅನುಮತಿ ನೀಡಲಾಗಿದೆ ಎಂದು ಉತ್ತರ ವಲಯ ಐಜಿಪಿ ಭಾಸ್ಕರ್ರಾವ್ ತಿಳಿಸಿದ್ದಾರೆ.
ಅಧಿವೇಶನ ನಡೆಸುವ ಸುವರ್ಣಸೌಧದ ಎರಡು ಕಿ.ಮೀ. ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಕೆಎಸ್ಆರ್ಪಿ, ಗೃಹ ರಕ್ಷಕ ದಳ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭದ್ರತೆಗಾಗಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. [ಬೆಳಗಾವಿ ಅಧಿವೇಶನ ಹೋರಾಟಗಳ ಕರ್ಮಭೂಮಿ!]
ಎಲ್ಲೆಡೆ ಸಿಸಿಟಿವಿ ಕ್ಯಾಮೆರಾ: ಸುವರ್ಣ ವಿಧಾನಸೌಧದ ಸುತ್ತಾಮುತ್ತಾ ಒಟ್ಟು 300 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಅನುಮಾನಾಸ್ಪದವಾಗಿ ತಿರುಗಾಡುವ ವ್ಯಕ್ತಿಗಳ ಚಲನ-ವಲನಗಳ ಮೇಲೆ ಹದ್ದಿನ ಕಣ್ಣಿಡಲಾಗುವುದು. ಸೌಧಕ್ಕೆ ಒಳ ಪ್ರವೇಶಿಸುವವರು ಕಡ್ಡಾಯವಾಗಿ ಗುರುತಿನ ಚೀಟಿ ಹೊಂದಿರಲೇಬೇಕು. ಪ್ರತಿಯೊಬ್ಬರನ್ನೂ ತಪಾಸಣೆ ನಡೆಸಿ ಹೊರಬಿಡಲಾಗುವುದು ಎಂದು ಐಜಿಪಿ ಭಾಸ್ಕರ್ ರಾವ್ ಹೇಳಿದ್ದಾರೆ.
ಬೆಂಗಳೂರಿನ ವಿಧಾನಸೌಧದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 250 ಮಂದಿ ಸಿಬ್ಬಂದಿ ಸುವರ್ಣಸೌಧದಲ್ಲಿ ಮಾರ್ಷಲ್ಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಈಗಾಗಲೇ ನಗರಕ್ಕೆ 38 ಕೆಎಸ್ಆರ್ಪಿ ಫ್ಲಟೂನ್ ಆಗಮಿಸಿವೆ. ಗರುಡದಳ, ಅಶ್ವದಳ, ಕ್ಷಿಪ್ರ ಕಾರ್ಯಾಚರಣೆ ಪಡೆ ಸೇರಿದಂತೆ ವಿವಿಧ ಹಂತಗಳ ಭದ್ರತೆ ಏರ್ಪಡಿಸಲಾಗಿದೆ. ಧಾರವಾಡ, ಹುಬ್ಬಳ್ಳಿ, ಬೆಳಗಾವಿ, ಬಾಗಲಕೋಟೆ, ವಿಜಾಪುರ, ರಾಯಚೂರು, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಿಂದಲೂ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿದ್ದು, ಎಲ್ಲ ರೀತಿಯ ಬಿಗಿ ಕ್ರಮ ಕೈಗೊಳ್ಳಲಾಗಿದೆ.
ಆತ್ಮಹತ್ಯಾ ತಡೆ ದಳ: ಈ ಹಿಂದೆ ನಡೆದಂಥ ಅವಘಡಗಳು ಮರುಕಳಿಸದಿರಲು ತುರ್ತುಕ್ರಮ ಕೈಗೊಳ್ಳಲಾಗಿದೆ. ಸುವರ್ಣಸೌಧದ ಮುಂಭಾಗ ಈ ಬಾರಿ ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ. 2 ಕಿ.ಮೀ. ಹೊರಭಾಗದಲ್ಲಿ ಪ್ರತಿಭಟನೆ ಇಲ್ಲವೆ ಮುಷ್ಕರ ನಡೆಸಲು ಅವಕಾಶ ಕಲ್ಪಿಸಲಾಗುವುದು. ಮುನ್ನೆಚ್ಚರಿಕೆ ಕ್ರಮವಾಗಿ 50 ಆಂಬುಲೆನ್ಸ್ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವಂತೆ ಸನ್ನದ್ಧವಾಗಿಡಲಾಗಿದೆ.
ರೈತರ ಆತ್ಮಹತ್ಯೆ ಪ್ರಯತ್ನವನ್ನು ಹತ್ತಿಕ್ಕಲು ವಿಶೇಷ ಆತ್ಮಹತ್ಯಾ ತಡೆ ದಳವನ್ನು ಪೊಲೀಸರು ರಚಿಸಿಕೊಂಡಿದ್ದು ಮಫ್ತಿಯಲ್ಲಿ ಪ್ರತಿಭಟನಾಕಾರರ ಮೇಲೆ ನಿಗಾ ಇಡಲಿದ್ದಾರೆ ಎಂದು ಉತ್ತರ ವಲಯ ಐಜಿಪಿ ಭಾಸ್ಕರ್ರಾವ್ ತಿಳಿಸಿದ್ದಾರೆ. [ಬೆಳಗಾವಿಯಲ್ಲಿ ರೈತ ಆತ್ಮಹತ್ಯೆ]












Click it and Unblock the Notifications