ಕುದುರೆ ವ್ಯಾಪಾರ ಮಾಡೋದೇ ಬಿಜೆಪಿ ಕಸುಬು- ಸಿದ್ದರಾಮಯ್ಯ
ಬೆಳಗಾವಿ, ನವೆಂಬರ್.11: ಮಹಾರಾಷ್ಟ್ರದಲ್ಲಿ ನಡೆದ ರಾಜಕೀಯ ಗಿಮಿಕ್ ಗೆ ಬಿಜೆಪಿಯೇ ನೇರ ಕಾರಣ ಅಂತಾ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. ಬಿಜೆಪಿ ಕೇಂದ್ರದಲ್ಲೇ ಆಗಲಿ ರಾಜ್ಯಗಳಲ್ಲೇ ಆಗಲಿ ಅಧಿಕಾರದಲ್ಲಿ ಇರಲು ಲಾಯಕ್ಕಿಲ್ಲ ಎಂದು ಅವರು ಗುಡುಗಿದ್ದಾರೆ.
ಸರ್ಕಾರ ರಚನೆಗೆ ಕಸರತ್ತು ಜೋರಾಗಿ ನಡೆಯುತ್ತಿದೆ. ಶಿವಸೇನೆ ಸರ್ಕಾರ ರಚಿಸುವುದು ಬಹುತೇಕ ಪಕ್ಕಾ ಆಗಿದೆ. ಬಿಜೆಪಿ ಜೊತೆಗಿನ 30 ವರ್ಷಗಳ ನಂಟು ಕಳಚಿಕೊಂಡ ಟೈಗರ್ಸ್, ಕಾಂಗ್ರೆಸ್ ಜೊತೆಗೆ ಕೈ ಕುಲಾಯಿಸಿದೆ.
ಮಹಾರಾಷ್ಟ್ರದಲ್ಲಿ ಶಿವಸೇನೆಗೆ ಎನ್ ಸಿಪಿ ಬೆಂಬಲ ಸೂಚಿಸಿದೆ. ಕಾಂಗ್ರೆಸ್ ಕೂಡಾ ಬಾಹ್ಯ ಬೆಂಬಲ ನೀಡಲು ಮನಸ್ಸು ಮಾಡಿದೆ. ಈ ಬಗ್ಗೆ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಬೆಂಕಿ ಉಗುಳಿದ್ದಾರೆ.

ಮಹಾರಾಷ್ಟ್ರದಲ್ಲಿ ನಡೆಯಲಿಲ್ಲ ಅಮಿತ್ ಶಾ ಖೇಲ್
ಮಹಾರಾಷ್ಟ್ರದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೌಶಿಯಾರ್ ಸರ್ಕಾರ ರಚಿಸುವಂತೆ ಮೊದಲು ಬಿಜೆಪಿಗೆ ಆಹ್ವಾನ ನೀಡಿದ್ದರು. ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾದರು. ಅಲ್ಲಿ ಕೂಡಾ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆಟ ನಡೆಯಲಿಲ್ಲ. ಹೀಗಾಗಿ ಈಗ ಶಿವಸೇನೆಗೆ ರಾಜ್ಯಪಾಲರು ಸರ್ಕಾರ ರಚಿಸುವಂತೆ ಆಹ್ವಾನ ನೀಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಕೇಸರಿ ಪಡೆ ವಿರುದ್ಧ ಸಿದ್ದರಾಮಯ್ಯ ಗುಟುರು
ವಿಧಾನಸಭಾ ಚುನಾವಣೆಗೂ ಮೊದಲು ಬಿಜೆಪಿ-ಶಿವಸೇನೆ ಎರಡು ಪಕ್ಷಗಳು ಒಪ್ಪಂದ ಮಾಡಿಕೊಂಡಿದ್ದವು. ಮೈತ್ರಿ ಮಾಡಿಕೊಂಡೇ ಅಖಾಡಕ್ಕೆ ಇಳಿದ ಎರಡು ಪಕ್ಷಗಳಲ್ಲಿ ಈಗ ಮೊದಲಿನ ನಂಬಿಕೆ ಉಳಿದಿಲ್ಲ. ಹೀಗಾಗಿ ಶಿವಸೇನೆ ಬಿಜೆಪಿ ಪಕ್ಷದವರಿಂದ ದೂರ ಸರಿದಿದ್ದಾರೆ. ಬಿಜೆಪಿಗರು ಅಂದರೆ ಹಾಗೇನೇ, ಅವರು ನಂಬಿಕೆಗೆ ಅರ್ಹರೇ ಅಲ್ಲ ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ರಾಜ್ಯ ಬಿಜೆಪಿ ನಾಯಕರಿಗೂ ಡಿಚ್ಚಿ ಹೊಡೆದ ಟಗರು!
ರಾಜ್ಯ ರಾಜಕೀಯವೇ ಆಗಲಿ, ಕೇಂದ್ರದ ರಾಜಕೀಯವೇ ಆಗಲಿ, ಆಪರೇಷನ್ ಅಂತಾ ಬಂದಾಗ ಬಿಜೆಪಿಗರು ಅದರಲ್ಲಿ ಎತ್ತಿದ ಕೈ ಎಂದು ಸಿದ್ದರಾಮಯ್ಯ ಬಿಜೆಪಿಗೆ ಮಾತಿನ ಡಿಚ್ಚಿ ಕೊಟ್ಟರು. ಮಹಾರಾಷ್ಟ್ರದಲ್ಲೂ ಕೂಡಾ ಬಿಜೆಪಿಗರು ಆಪರೇಷನ್ ಕಮಲ ಮಾಡುವುದಕ್ಕೆ ಮುಂದಾದರು. ಶಿವಸೇನೆ ಸ್ವಲ್ಪ ಎಚ್ಚೆತ್ತುಕೊಂಡು ತನ್ನ ಶಾಸಕರನ್ನೆಲ್ಲ ರೆಸಾರ್ಟ್ ಗೆ ಕಳುಹಿಸಿತು. ಇದರಿಂದ ಬಿಜೆಪಿಗರ ಆಟ ನಡೆಯಲಿಲ್ಲ ಎಂದು ಸಿದ್ದರಾಮಯ್ಯ ಗುಟುರು ಹಾಕಿದರು.

ಕೇಂದ್ರ ಸರ್ಕಾರ ನಡೆಸುತ್ತಿರುವವರಿಗಿಲ್ಲ ನಿಯತ್ತು!
ಆಯಾ ರಾಮ್, ಗಯಾ ರಾಮ್ ಎಂಬ ಸಂಸ್ಕೃತಿಗೆ ಮುಕ್ತಿ ಹಾಡಬೇಕು. ಈ ನಿಟ್ಟಿನಲ್ಲಿ ಪಕ್ಷಾಂತರ ಕಾಯ್ದೆಯನ್ನು ಜಾರಿಗೊಳಿಸಲು ಮುಂದಾಗಿತ್ತು. ಆದರೆ, ಬಿಜೆಪಿ ಆ ಕಾಯ್ದೆಯನ್ನೇ ವಿರೋಧಿಸುತ್ತಿದೆ. ಪ್ರಜಾಪ್ರಭುತ್ವವನ್ನು ಬಿಜೆಪಿ ನಾಯಕರೆಲ್ಲ ಸೇರಿಕೊಂಡು ಹಾಳು ಮಾಡುತ್ತಿದ್ದಾರೆ. ಪ್ರಕ್ಷಾಂತರ ಕಾಯ್ದೆಯನ್ನೇ ಹಾಳುಗೆಡವಲು ಬಿಜೆಪಿ ಯತ್ನಿಸುತ್ತಿದೆ. ಅಧಿಕಾರದಲ್ಲಿ ಇರಲು ಬಿಜೆಪಿಗರು ಲಾಯಕಿಲ್ಲ. ಸತ್ಯವನ್ನು ಸುಳ್ಳು, ಸುಳ್ಳನ್ನು ಸತ್ಯ ಮಾಡೋದೇ ಬಿಜೆಪಿಯ ಅಜೆಂಡಾ ಎಂದು ಸಿದ್ದರಾಮಯ್ಯ ಕೆಂಡ ಕಾರಿದ್ದಾರೆ.












Click it and Unblock the Notifications